ಕೃಷಿ ಪಂಪ್‍ಸೆಟ್‍ಗಳಿಗೆ 7 ಗಂಟೆ ನಿರಂತರ ವಿದ್ಯುತ್ ನೀಡಲು ರೈತರ ಮುಖಂಡರ ಆಗ್ರಹ

ಚಾಮರಾಜನಗರ: ರೈತರ ಕೃಷಿ ಪಂಪಸೆಟ್‍ಗಳಿಗೆ ಬೆಳಗಿನ ಅವಧಿಯಲ್ಲಿ ನಿರಂತರವಾಗಿ 7 ಗಂಟೆ ನೀಡಬೇಕೆಂದು ರೈತರು ಮುಖಂಡರು ಒತ್ತಾಯಿಸಿದರು.

ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ತಾಲೂಕಿನ ಹರದನಹಳ್ಳಿ ಉಪ ವಿಭಾಗದಲ್ಲಿ ಮೈಸೂರು ವಿಭಾಗೀಯ ಅಧೀಕ್ಷಕರಾದ ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಶಾಂತಮಲ್ಲಪ್ಪ, ಸೆಸ್ಕಾಂ ವತಿಯಿಂ ಈಗ ಕೃಷಿಪಂಪ್‍ಸೆಟ್‍ಗಳಿಗೆ ನೀಡುತ್ತಿರುವ ವಿದ್ಯುತ್ ಸಮರ್ಪಕವಾಗುತ್ತಿಲ್ಲ. ಬೆಳಗಿನ ಅವಧಿಯಲ್ಲಿ ವಿದ್ಯುತ್ ನೀಡಿದರೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೇ 7 ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎನ್ನುತ್ತಿರಿ. ಆದರೆ, ಸರಿಯಾಗಿ ಪೊರೈಕೆಯಾಗುತ್ತಿಲ್ಲ. ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡುವುದರಿಂದ ರೈತರಿಗೆ ಅನಾನುಕೂಲಗಳೇ ಹೆಚ್ಚು ಎಂದರು.

ಅಲ್ಲದೇ ಜಮೀನನಿನಲ್ಲಿ ವಾಸಿಸುತ್ತಿರುವ ರೈತರ ಮನೆಗಳಿಗೆ ರಾತ್ರಿ ವೇಳೆಯಲ್ಲಿ ನಿರಂತರ ಜ್ಯೊತಿಯನ್ನು ಕಲ್ಪಿಸಿ, ವಿದ್ಯುತ್ ನೀಡಿದರೆ, ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿದೆ. ಹೀಗಾಗಿ ತೋಟದ ಮನೆಗಳಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೊರೈಕೆ ಮಾಡಬೇಕೆಂದು ಒತ್ತಾಯಿಸಿದರು.

ಸೆಸ್ಕಾಂನಿಂದ ಪ್ಯಾಕೇಜ್ ಗುತ್ತಿಗೆಗಳನ್ನು ನೀಡುವುದರಿಂದ ಸ್ಥಳಿಯ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದೆ. ಕನಿಷ್ಟ 5 ಲಕ್ಷ ರೂ.ಗಳ ವರೆಗೆ ಗುತ್ತಿಗೆಯನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಿದರೆ, ಅವರನ್ನು ನಂಬಿಕೊಂಡಿರುವ ಕಾರ್ಮಿಕರು ಹಾಗೂ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಎಲ್ಲವನ್ನು ಪ್ಯಾಕೇಜ್ ಟೆಂಡರ್ ಮಾಡಿದರೆ, ಸ್ಥಳೀಯ ಗುತ್ತಿಗೆದಾರರು ಬೀದಿಪಾಲಾಗಬೇಕಾಗುತ್ತದೆ ಎಂದು ಗುತ್ತಿಗೆದಾರ ಹೊಸೂರು ಜಗದೀಶ್ ಅಧೀಕ್ಷಕರಲ್ಲಿ ಮನವಿ ಮಾಡಿದರು.

ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಸೆಸ್ಕಾಂ ಅದೀಕ್ಷಕರಾದ ಸೋಮಶೇಖರ್ ಮಾತನಾಡಿ, ರೈತರು ಹಾಗೂ ಗ್ರಾಹಕರಿಗೆ ಸಮರ್ಪಕವಾದ ವಿದ್ಯುತ್ ನೀಡಬೇಕೆಂಬ ಉದ್ದೇಶ ನಮ್ಮದಾಗಿದೆ. ಇದಕ್ಕಾಗಿಯೇ ಆಯಾ ವಿಭಾಗದಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸಿ, ಕುಂದುಕೊರತೆಗಳನ್ನು ಆಲಿಸಿ, ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ. ನಿರಂತರ ವಿದ್ಯುತ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಮ್ಮ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಈ ಎಲ್ಲವನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರÀ ವಸಂತಕುಮಾರ್, ಸಹಾಯಕ ಇಂಜಿನಿಯರ್ ದ್ರುಪದ್ ಹಾಗೂ ಸಿಬ್ಬಂದಿಗಳು, ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *