ಗೃಹಲಕ್ಮೀ ಯೋಜನೆಗೆ ವಿದ್ಯುಕ್ತ ಚಾಲನೆ

5 ಗ್ಯಾರೆಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ವೆಚ್ಚವಾಗುತ್ತದೆ – ಸಿ.ಎಂ ಸಿದ್ದರಾಮಯ್ಯ

ಮೈಸೂರು: ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆಗೂ ಮುನ್ನ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳಲ್ಲಿ 4 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ, ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ತಿಂಗಳು 27 ಕ್ಕೇ ನಮ್ಮ ಸರ್ಕಾರ ಜಾರಿಗೆ ಬಂದು 100 ದಿನಗಳು ಆಗಿದೆ. ಇದನ್ನು ತಮಗೆ ತಿಳಿಸಲು 100 ದಿನಗಳ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗಿದೆ. ನಮ್ಮ ಸಾಧನೆ ನಮ್ಮ ಕಾರ್ಯಗಳನ್ನು ಜನರ ಮುಂದೆ ಇಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ನಮ್ಮ ಪ್ರಣಾಳಿಕೆಯಲ್ಲಿ ನಾವು ಹಲವು ಭರವಸೆಗಳನ್ನು ನೀಡಿದ್ದೆವು. ನಾವು ಈ ಹಿಂದೆ ಅಧಿಕಾರಕ್ಕೆ ಬಂದಿದ್ದಾಗ ನೀಡಿದ್ದ 168 ಭರವಸೆಗಳಲ್ಲಿ 158 ಭರವಸೆಗಳನ್ನು ಜಾರಿಗೆ ಮಾಡಿದ್ದೆವು. ಅದೇ ರೀತಿ ಈಗ ನೀಡಿರುವ ಎಲ್ಲಾ ಭರವಸೆಗಳನ್ನು ಜಾರಿಗೆ ತರುತ್ತೇವೆ. ಕರ್ನಾಟಕದಲ್ಲಿ 1 ಕೋಟಿ 24 ಲಕ್ಷ ಜನ ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಿದ್ದು ಇದರಲ್ಲಿ 1 ಕೋಟಿ 11 ಲಕ್ಷ ಜನ ನೋಂದಣಿ ಆಗಿದ್ದು ಅವರಿಗೆ ಇಂದು 2000 ಖಾತೆಗೆ ಜಮಾ ಆಗುತ್ತಿದೆ. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 48.5 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ನೀಡುವುದಾಗಿ ಭರವಸೆ ನೀಡಿದ್ದು, ಅಕ್ಕಿ ಸಿಗುವ ವರೆಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಗೆ ಹಣ ನೀಡಲಾಗುತ್ತಿದೆ. ಗೃಹ ಜ್ಯೋತಿ ಯೋಜನೆಯಡಿ 1 ಕೋಟಿ 56 ಲಕ್ಷ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಾವು ಕರ್ನಾಟಕದಲ್ಲಿ 4 ಗ್ಯಾರೆಂಟಿ ಗಳನ್ನು ಜಾರಿಗೆ ಮಾಡಿದ್ದು, 5 ನೇ ಗ್ಯಾರೆಂಟಿ ಯೋಜನೆ ಯುವ ನಿಧಿ ಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೆ ತರುತ್ತೇವೆ. ಈ ಐದು ಗ್ಯಾರೆಂಟಿ ಯೋಜನೆಗಳಿಗೆ ಒಟ್ಟು 56 ಸಾವಿರ ಕೋಟಿ ಹಣ ವೆಚ್ಚವಾಗುತ್ತದೆ. ಆದರೂ ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ನಿಲ್ಲಿಸಿಲ್ಲ. ಎಲ್ಲಾ ಯೋಜನೆಗಳಿಗೆ ಹಣ ನೀಡಿದ್ದೇವೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಸುಮಾರು 1 ಕೋಟಿ 10 ಲಕ್ಷ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಆಗಿದ್ದೀರಿ, ರಾಹುಲ್ ಗಾಂಧಿ ಅವರು ಭಾರತ್ ಜೂಡೋ ಯಾತ್ರೆಯ ಸಂಧರ್ಭದಲ್ಲಿ ಆಹಾರ ಸಮಸ್ಯೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸೂಚಿಸಿದ್ದರು. ನಾವು ಚುನಾವಣೆ ಸಂದರ್ಭದಲ್ಲಿ 5 ಗ್ಯಾರೆಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನಿಡಿದ್ದೆವು. ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಆಗಿದೆ. ಎಲ್ಲಿಯವರೆಗೆ 4 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 1 ಕೋಟಿ 41 ಲಕ್ಷ ಜನರಿಗೆ ಗೃಹ ಜ್ಯೋತಿ, 1 ಕೋಟಿ 34 ಲಕ್ಷ ಜನರಿಗೆ ಅನ್ನ ಭಾಗ್ಯ ಯೋಜನೆ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯ ಸಭಾ ಸದಸ್ಯರಾದ ರಾಹುಲ್ ಗಾಂಧಿ ಅವರು ಮಾತನಾಡಿ ಚುನಾವಣೆಗೆ ಮುಂಚೆ ನಮ್ಮ ಕರ್ನಾಟಕ ರಾಜ್ಯದ ಕಾಂಗ್ರೆಸ್ ಮುಖಂಡರು 5 ಗ್ಯಾರೆಂಟಿ ಗಳನ್ನು ನೀಡಿದ್ದೆವು. ಅದರಂತೆ ನೀಡಿದಂತೆ ನಡೆದು 4 ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದೇವೆ. ಇಂದು ಕರ್ನಾಟಕದ ಕೋಟ್ಯಂತರ ಮಹಿಳೆಯರ ಖಾತೆಗೆ 2000 ರೂ ಪಾವತಿ ಆಗಿದೆ. ಇದರಂತೆ ಶಕ್ತಿ ಯೋಜನೆಯಡಿ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಸದಸ್ಯರಿಗೆ ತಲಾ 10 ಞg ಅಕ್ಕಿ ನೀಡಲಾಗುತ್ತಿದೆ. ಯುವ ನಿಧಿ ಯೋಜನೆಯಡಿ ನಿರುದ್ಯೋಗ ಯವಕ ಯುವತಿಯರಿಗೆ ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೋಮೊ ಪದವೀಧರರಿಗೆ 1500 ರೂ. ನೀಡುವ ಯೋಜನೆಯನ್ನು ಜಾರಿಗೆ ತರುವುದು ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಭಾರತ್ ಜೂಡೋ ಪಾದಯಾತ್ರೆಯನ್ನು ಕರ್ನಾಟಕದಲ್ಲಿಯೇ 600 ಕೀ ಮೀ ಮಾಡಿದ್ದೇವೆ. ಆ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದಿದ್ದು, ಬೆಲೆ ಏರಿಕೆ. ಆಗ ಅನೇಕ ಮಹಿಳೆಯರು ಬೆಲೆ ಏರಿಕೆಯ ಭಾರ ಹೊರಲು ಆಗುತ್ತಿಲ್ಲ ಎಂದು ತಿಳಿಸಿದರು. ಇದನ್ನು ಕಂಡ ನಾನು ಕರ್ನಾಟಕದ ಮಹಿಳೆಯರ ಸಬಲೀಕರಣಕ್ಕೆ ಈ ಯೋಜನೆಗಳನ್ನು ಜಾರಿಗೆ ತರಬೇಕಾಯಿತು. ಕರ್ನಾಟಕದ 12,000 ಕಡೆ ಈ ಗೃಹಲಕ್ಷ್ಮಿ ಯೋಜನೆ ಚಾಲನೆ ಆಗುತ್ತಿದೆ. ನಮ್ಮ ಆಲೋಚನೆ ಬಡವರ ದಲಿತರ ಹಿಂದುಳಿದವರ ಅಭಿವೃದ್ಧಿ ಮಾಡುವುದು. ಈ 5 ಗ್ಯಾರೆಂಟಿ ಯೋಜನೆಗಳನ್ನು ದೇಶದಾದ್ಯಂತ ಜಾರಿಗೆ ತರಲು ಸಿದ್ದರಿದ್ದೇವೆ. ವಿಶ್ವದಲ್ಲಿಯೇ ಗೃಹಲಕ್ಷ್ಮಿ ಅಂತಹ ದೊಡ್ಡ ಯೋಜನೆ ಮತ್ತೊಂದು ಇಲ್ಲ ಎಂದು ತಿಳಿಸಿದರು.

ರಾಜ್ಯ ಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರ 5 ಗ್ಯಾರೆಂಟಿಗಳಲ್ಲಿ 4 ಗ್ಯಾರೆಂಟಿ ಗಳನ್ನು ಜಾರಿ ಮಾಡಿದೆ. ಕಾಂಗ್ರೇಸ್ ಏನು ಮಾಡಿದೆ ಎಂದು ಟೀಕಿಸುತ್ತಾರೆ. ಆದರೆ ಕಾಂಗ್ರೇಸ್ 53 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ್ದೆವೆ. ಶೇ.14 ರಷ್ಟಿದ್ದ ಸಾಕ್ಷರತೆಯನ್ನು ಶೇ.74 ಕ್ಕೆ ಏರಿಸಿದ್ದೇವೆ. ಜನರಿಗೆ ಉದ್ಯೋಗ ನೀಡಿದ್ದೇವೆ.

ದೇಶದಲ್ಲಿ ಪ್ರಾಥಮಿಕ ಶಾಲೆಗಳು 2 ಲಕ್ಷ ಇದ್ದವು, ಇದನ್ನು 8 ಲಕ್ಷಕ್ಕೆ ಏರಿಸಲಾಗಿದೆ. ನರೇಗಾ ಯೋಜನೆಯನ್ನು ಜಾರಿಗೆ ತಂದೆವು. ರಾಹುಲ್ ಗಾಂಧಿ ಅವರು ಕನ್ಯಾ ಕುಮಾರಿಯಿಂದ ಕಾಶ್ಮೀರದ ವರೆಗೆ 4 ಸಾವಿರ ಕಿ.ಮೀ ಭಾರತ್ ಜೂಡೋ ಪಾದಯಾತ್ರೆ ಮಾಡಿದರು. ಭಾರತ ಸಂವಿದಾನ ನಮಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ಇದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

10 ಜನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದಿರುವ ಸರ್ಕಾರದ ನೂರು ದಿನಗಳ ಸಾಧನೆ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ, ಗೃಹ ಮಂತ್ರಿಗಳಾದ ಜಿ.ಪರಮೇಶ್ವರ್, ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಬೋಸರಾಜು, ಸಹಕಾರ ಇಲಾಖೆಯ ಸಚಿವರಾದ ಕೆ ಎನ್ ರಾಜಣ್ಣ, ಲೋಕೋಪಯೋಗಿ ಇಲಾಖೆಯ ಸತೀಶ್ ಜಾರಕಿಹೊಳಿ, ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ, ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ, ಆಹಾರ ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ, ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ರಾಜ್ಯಸಭಾ ಸದಸ್ಯರಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸುರ್ಜಿವಾಲ ಹಾಗೂ ಶಾಸಕರಾದ ಹರೀಶ್ ಗೌಡ, ಡಿ ರವಿಶಂಕರ್, ಶಿವಲಿಂಗೇಗೌಡ, ಅನಿಲ್ ಕುಮಾರ್ ಸಿ, ತನ್ವೀರ್ ಸೇಠ್, ಶರತ್ ಬಚ್ಚೇಗೌಡ, ನರೇಂದ್ರ ಸ್ವಾಮಿ, ದರ್ಶನ್ ಧೃವ ನಾರಾಯಣ್, ಮಂಥರ್ ಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್, ಪ್ರಕಾಶ್ ಹುಕ್ಕೇರಿ, ಸೇರದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *