ಚಾಮರಾಜನಗರ: ಚಾಮರಾಜನಗರ ವಿಶ್ವ ವಿದ್ಯಾನಿಲಯದ ಸುವರ್ಣ ಗಂಗೋತ್ರಿ ಆವರಣ ಮತ್ತು ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಸಂಯೋಜನೆಗೊಳಗೊಂಡ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನೇತರ ಮಹಾವಿದ್ಯಾಲಯಗಳಲ್ಲಿ ೨೦೨೩-೨೪ನೇ ಶೈಕ್ಷಣಿಕ ಸಾಲಿಗೆ ಸ್ನಾತಕೋತ್ತರ ಪದವಿಗೆ (ಎಂ.ಎ, ಎಂ.ಕಾಂ, ಎಂ.ಎಸ್.ಡಬ್ಲ್ಯೂ, ಎಂ.ಎಸ್ಸಿ, ಎಂಬಿಎ, ಎಂಸಿಎ, ಎಂಎಲ್ಐಸಿ) ಮಾತೃ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವವಿದ್ಯಾನಿಲಯದ ನಿಯಮಾವಳಿಗಳನ್ವಯ ಅರ್ಹತೆಯ ಪ್ರಕಾರ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೩೦ ಕಡೆಯ ದಿನವಾಗಿದೆ. ಪ್ರವೇಶಾತಿ ವಿವರಗಳನ್ನು ಹಾಗೂ ದಿನಾಂಕಗಳನ್ನು ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನೇತರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ವೆಬ್ ಸೈಟ್ ಮತ್ತು ಸೂಚನಾ ಫಲಕದಲ್ಲಿ ಪ್ರಕಟಿಸುವುದರ ಜೊತೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತರಲು ಸೂಚಿಸಲಾಗಿದೆ.
ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನೇತರ ಮಹಾವಿದ್ಯಾಲಯಗಳ ಎಲ್ಲಾ ಸ್ನಾತಕೋತ್ತರ ಪದವಿ ಪ್ರವೇಶ ಮಿತಿ ಸಂಖ್ಯೆಗಳು ವಿಶ್ವವಿದ್ಯಾನಿಲಯವು ಅನುಮೋದನೆ ಮಾಡಿ ನಿಗದಿಪಡಿಸಿದ ಸಂಖ್ಯೆಯನ್ನು ಮೀರಬಾರದು. ಯುಜಿಸಿ ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಸ್ನಾತಕ ಪದವಿ ಪಡೆದ ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿಗೆ ಅರ್ಹರಾಗಿರುತ್ತಾರೆ. ಪ್ರವೇಶಾತಿ ಅರ್ಜಿ ಮತ್ತು ಹೆಚ್ಚಿನ ಮಾಹಿತಿಯನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದ ವೆಬ್ ಸೈಟ್ ತಿತಿತಿ.ಛಿuಛಿ.ಞಚಿಡಿಟಿಚಿಣಚಿಞಚಿ.gov.iಟಿ ನಿಂದ ಪಡೆದುಕೊಳ್ಳಬಹುದು.
ಹಳೆಯ ವಿದ್ಯಾರ್ಥಿಗಳಿಗೆ ಮರು ಪ್ರವೇಶ ನೀಡುವ ಮುನ್ನ ನಿಯಮಾವಳಿಗಳಿಗೆ ಅನುಗುಣವಾಗಿ ವಿಶ್ವವಿದ್ಯಾನಿಲಯದ ಅನುಮತಿ ಪಡೆಯುವುದು ಕಡ್ಡಾಯ. ಒಂದು ವೇಳೆ ವಿಶ್ವವಿದ್ಯಾನಿಲಯದ ಅನುಮತಿ ಪಡೆಯದೇ ಪ್ರವೇಶ ನೀಡಿದ್ದಲ್ಲಿ ಮುಂದಿನ ಎಲ್ಲಾ ರೀತಿಯ ವ್ಯಾಜ್ಯ, ದಾವೆ, ಕಟ್ಲೆಗಳಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರು ನೇರ ಹೊಣೆಗಾರರಾಗಿರುತ್ತಾರೆ.
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿವೇತನ ಮಂಜೂರಾತಿಗೆ ಅರ್ಹವಿರುವ ಕಾಲೇಜುಗಳು ವಿದ್ಯಾರ್ಥಿಗಳ ತಂದೆ, ತಾಯಿ, ಪೋಷಕರ ವಾರ್ಷಿಕ ವರಮಾನಕ್ಕೆ ಅನುಗುಣವಾಗಿ (ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಅಧಿಸೂಚನೆಗಳ ಅನುಸಾರ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗುವುದು. ಶುಲ್ಕ ವಿನಾಯಿತಿ ಪಡೆದ ವಿದ್ಯಾರ್ಥಿಗಳು ಕಡ್ಡಾಯವಾಗಿ ವಿದ್ಯಾರ್ಥಿವೇತನಕ್ಕೆ ನಿಗದಿತ ಸಮಯದಲ್ಲಿ ಸಂಬಂಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಪ್ರಾಂಶುಪಾಲರು ಸಹ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ವಿದ್ಯಾರ್ಥಿವೇತನ ಮಂಜೂರಾಗದಂತಹ ಅಥವಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳಿಂದ ಪೂರ್ಣ ಪ್ರಮಾಣದ ಶುಲ್ಕವನ್ನು ಪಾವತಿಸಿಕೊಳ್ಳಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.