ಚಾಮರಾಜನಗರ: ನಗರದಲ್ಲಿ ಜುಲೈ ೩ರಂದು ನಡೆಯುವ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವವನ್ನು ಅದ್ದೂರಿಯಾಗಿ ನಡೆಸುವ ಸಂಬಂಧ ಅಧಿಕಾರಿಗಳು ಹಾಗೂ ವಿವಿಧ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ತಹಶೀಲ್ದಾರ್ ಐ.ಇ. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ ಸಂಬಂಧ ವಿವರವಾಗಿ ಚರ್ಚಿಸಲಾಯಿತು.
ದೇವಸ್ಥಾನ ಹಾಗೂ ರಥ ಸಾಗುವ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ರಥೋತ್ಸವದಂದು ತೇರು ಸಾಗುವ ಮಾರ್ಗಗಳಲ್ಲಿ ಮರಳು ಹಾಕಬೇಕು. ರಥೋತ್ಸವ ಮುಗಿದ ಕೂಡಲೇ ಮರಳನ್ನು ತೆರವುಗೊಳಿಸಿ ವಾಹನ ಸವಾರರು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಕರ್ಕಶ ಶಬ್ದದ ಪೀಪಿಗಳಿಂದ ಉಂಟಾಗುವ ಹಾಗೂ ಬಣ್ಣ ಹಚ್ಚಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದನ್ನ ತಪ್ಪಿಸಬೇಕು. ತೇರು ರಕ್ಷಣೆಗೆ ಮೇಲ್ಚಾವಣಿ ನಿರ್ಮಾಣ ಮಾಡಬೇಕು ಎಂಬೂದು ಸೇರಿದಂತೆ ಇತರೆ ಸಲಹೆಗಳನ್ನು ಮುಖಂಡರು ಸಭೆಯಲ್ಲಿ ನೀಡಿದರು.
ತಹಶೀಲ್ದಾರ್ ಬಸವರಾಜು ಅವರು ಮಾತನಾಡಿ ಕಳೆದ ಬಾರಿ ಅಚ್ಚುಕಟ್ಟಾಗಿ ರಥೋತ್ಸವ ನೆರವೇರಿದೆ. ಈ ವರ್ಷವೂ ಸಹ ಸುಸೂತ್ರವಾಗಿ ನಡೆಯಲು ಈ ಹಿಂದಿನಂತೆ ಎಲ್ಲರೂ ಸಹಕಾರ ನೀಡಬೇಕು. ಪ್ರತಿ ಗ್ರಾಮದ ಗ್ರಾಮಸ್ಥರು, ಯಜಮಾನರು, ಮುಖಂಡರು ರಥೋತ್ಸವಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ಮುಂದುವರೆಸಬೇಕು ಎಂದು ಮನವಿ ಮಾಡಿದರು.
ಈ ವರ್ಷವು ಸಾಕಷ್ಟು ಭಕ್ತಾಧಿಗಳು ಬರುವ ನಿರೀಕ್ಷೆಯಿದೆ. ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗುವುದು. ದೇವಸ್ಥಾನದ ಸುತ್ತಲೂ ಶುಚಿತ್ವ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ರಥೋತ್ಸವಕ್ಕೂ ಮೊದಲು ಹಾಗೂ ರಥೋತ್ಸವದ ನಂತರ ಎಲ್ಲಾ ಅವಶ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಬಸವರಾಜು ಅವರು ತಿಳಿಸಿದರು.
ನಗರಸಭೆಯ ಸದಸ್ಯರಾದ ಚಿನ್ನಮ್ಮ, ನೀಲಮ್ಮ, ಭಾಗ್ಯಮ್ಮ, ಸುದರ್ಶನ್ ಗೌಡ, ದೇವಸ್ಥಾನದ ಆಗಮಿಕರಾದ ದರ್ಶನ್, ಅರ್ಚಕರಾದ ಅನಿಲ್, ಮುಖಂಡರಾದ ಗಣೇಶ್ ದೀಕ್ಷಿತ್, ಚಾ.ರಂ. ಶ್ರೀನಿವಾಸಗೌಡ, ಸುರೇಶ್ ನಾಯಕ, ರಾಮಸಮುದ್ರ ನಾಗರಾಜು, ಜಿ. ಬಂಗಾರು, ಸುರೇಶ್ ವಾಜಪೇಯಿ, ಸಿ.ಎನ್. ಮಹೇಶ್ ಕುದರ್, ಬಂಗಾರ ಸ್ವಾಮಿ, ಜಿ.ಎಂ. ಹೆಗ್ಗಡೆ, ಜಯಕುಮಾರ್, ಗು.ಪುರುಷೋತ್ತಮ್, ವೈ.ವಿ. ಲೋಕನಾಥ್, ಶ್ರೀನಿವಾಸಶೆಟ್ಟಿ, ಆರ್.ಮಂಜೇಶ, ಆರ್.ವಿ. ಮಹದೇವಸ್ವಾಮಿ, ರಾಜುನಾಯಕ, ಮಹದೇವ, ಸಿ.ಎನ್. ನಂಜದೇವರು, ಮಹದೇವನಾಯಕ, ರವಿಚಂದ್ರ ಪ್ರಸಾದ್ ಕಹಳೆ, ಶ್ರೀನಿವಾಸ್ ಜೆಟ್ಟಪ್ಪ, ಸಿ.ವಿ. ಗೋವಿಂದರಾಜು, ಎಂ. ಶ್ರೀನಿವಾಸ್, ನಂಜಶೆಟ್ಟಿ, ಸಿ.ಎಸ್. ಶಿವಣ್ಣ, ಚಿದಂಬರ, ನಗರಸಭೆಯ ಪೌರಾಯುಕ್ತರಾದ ಎಸ್.ವಿ. ರಾಮದಾಸ್, ಪಟ್ಟಣ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಸುನೀಲ್, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜು, ಅಗ್ನಿಶಾಮಕಾಧಿಕಾರಿ ಶಿವಾಜಿರಾವ್ ಪವರ್, ದೇವಸ್ಥಾನದ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ್ಮೂರ್ತಿ, ಬಂಡಿಗಾರ್ ದಪೇದಾರ್ ಹಾಗೂ ವಿವಿಧ ಕೋಮಿನ ಮುಖಂಡರು, ಯಜಮಾನರು ಸಭೆಯಲ್ಲಿ ಉಪಸ್ಥಿತರಿದ್ದರು.
