ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಶಾಸನಗಳ ಅಧ್ಯಯನ : ಪ್ರಾರಂಭಿಕ ಪ್ರಯತ್ನಗಳು ವಿಷಯ ಕುರಿತ ಎರಡನೇ ಉಪನ್ಯಾಸ ಕಾರ್ಯಕ್ರಮ ಬುಧವಾರ (ಆ.೨) ನಡೆಯಿತು.

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಎರಡು ತಿಂಗಳ ವರೆವಿಗೆ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ವಿವಿಧ ತಜ್ಞ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಕುರಿತ ವಿವಿಧ ಆಯಾಮಗಳ ಕುರಿತ ಪ್ರಚಾರೋಪನ್ಯಾಸ ಮಾಲೆ ಏರ್ಪಡಿಸಿದ್ದು ಇದರ ಅಂಗವಾಗಿ ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ಆಯೋಜಿಸಲಾಗಿತ್ತು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ. ಎನ್.ಎಂ. ತಳವಾರ್ ಅವರು ಮಾತನಾಡಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಸಂಸ್ಥೆ ಕನ್ನಡ ಭಾಷೆಯ ವಿವಿಧ ಆಯಾಮಗಳ ಕುರಿತ ವಿವಿಧ ಕಾರ್ಯಾಗಾರ, ವಿಚಾರಸಂಕಿರಣ ಮತ್ತು ಪ್ರಚಾರೋಪನ್ಯಾಸ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಭಾಷೆಯ ಅಸ್ಮಿತೆಯನ್ನು ಕಾಪಾಡಿಕೊಳ್ಳುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಅದರ ಭಾಗವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನ ಕುರಿತ ವಿವಿಧ ವಿಚಾರಗಳನ್ನು ಕುರಿತು ಪ್ರಚಾರೋಪಾನ್ಯಾಸ ಮಾಡುವುದರ ಮೂಲಕ ಪಸರಿಸಬೇಕೆಂದು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಚಾರೋಪನ್ಯಾಸದಲ್ಲಿ ಮಂಡನೆಗೊಂಡ ಎಲ್ಲಾ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರಲಾಗುವುದು ಎಂದರು.

ಚಾಮರಾಜನಗರ ವಿಶ್ವವಿದ್ಯಾನಿಲಯದ ಕನ್ನಡ, ಮಂಟೆಸ್ವಾಮಿ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಕೃಷ್ಣಮೂರ್ತಿ ಹನೂರು ಅವರು ಮಾತನಾಡಿ ಶಾಸನಗಳು ದೇಶದ ಇತಿಹಾಸದ ಶಿರೋಭಾಗವಾಗಿದ್ದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಶಾಸನಗಳನ್ನು ಓದುವ, ಶೋಧಿಸುವವರ ಸಂಖ್ಯೆ ಕ್ಷೀಣಿಸುತ್ತಿದ್ದು ಇದು ವಿಷಾಧನೀಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಎಂ. ಆರ್. ಗಂಗಾಧರ್ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನಗಳ ಗೋಜಿಗೆ ಸಿಕ್ಕಿ ದೇಶದ ಸಂಸ್ಕೃತಿ ಹಾಗೂ ಆಚರಣೆಗಳನ್ನು ಅಧ್ಯಯನ ಮಾಡುವಲ್ಲಿ ಹಾಗೂ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದಾರೆ. ದೇಶದ ಇತಿಹಾಸ, ಸಂಸ್ಕೃತಿ, ರಾಜಕೀಯ ಮತ್ತು ಆಡಳಿತ ನೀತಿಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇಂದಿನ ಯುವ ಪೀಳಿಗೆಗೆ ಇದೆ. ಇಂತಹ ಎಲ್ಲಾ ವಿಚಾರಗಳ ಬಗೆಗೆ ಪ್ರಚಾರೋಪನ್ಯಾಸದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.
ಹಾಸನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗೂ ಶಾಸನ ತಜ್ಞರಾದ ಪ್ರೊ. ಎಂ.ಜಿ. ಮಂಜುನಾಥ್ ಅವರು ಮಾತನಾಡಿ ಶಾಸನಗಳು ದೇಶದ ಯಾವುದೇ ಒಂದು ಇತಿಹಾಸದ ಮೂಲ ಆಧಾರಗಳಾಗಿದ್ದು ಅವು ದೇಶದಲ್ಲಿ ಇದ್ದ ಆ ಕಾಲದ ರಾಜಾಡಳಿತ ನೀತಿ, ದಾನ, ಧರ್ಮ, ಯುದ್ದ ನೀತಿ, ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿರುತ್ತವೆ. ಇಂತಹ ನೆಲೆಗಳನ್ನು ವೀರಗಲ್ಲುಗಳು, ಮಾಸ್ತಿ ಕಲ್ಲುಗಳು, ನಿಷದಿ ಕಲ್ಲುಗಳು, ತಾಮ್ರ ಶಾಸನಗಳು, ಹಾಗೂ ಮಣ್ಣಿನಿಂದ ಮಾಡಿದ ಮಡಿಕೆಗಳು ಹಾಗೂ ಇತರ ಕೆತ್ತನೆಗಳಲ್ಲಿ ಗಮನಿಸಬಹುದಾಗಿದೆ ಎಂಬ ಮಾಹಿತಿ ನೀಡಿದರು.
ಅಧ್ಯಾಪಕರಾದ ಬಸವಣ್ಣ, ಎಂ. ಎಸ್. ರಾಣಿ, ಗುರುರಾಜು, ಡಾ. ಶಶಿಕಲಾ, ಎ. ಶಿವರಾಜು. ಮಹೇಶ್ ಆರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
