ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಶಾಮಿಯಾನ ಟೆಂಟ್ ಹಾಕಿ ಧರಣಿ ಕುಳಿತು ಪ್ರತಿಭಟನಾನಿರತರು ಕರ್ನಾಟಕ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಎಸ್ .ಬಾಲರಾಜು ಮಾತನಾಡಿ, ರಾಜ್ಯ ಸರ್ಕಾರವು ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವುದರಿಂದ ಜಲಾಶಯಗಳು ಬರಿದಾಗಿ ಕುಡಿಯುವ ನೀರಿಗೂ ತತ್ಸಾರವಾಗಲಿದೆ. ತಮಿಳುನಾಡಿನ ರೈತರು ೩ನೇ ಫಸಲು ಬೆಳೆಯುತ್ತಿದ್ದಾರೆ. ಅವರಿಗೇಕೆ ನೀರು ಬಿಡಬೇಕು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಇಂಡಿ ಮೈತ್ರಿ ಕೂಟದಲ್ಲಿರುವ ಡಿಎಂಕೆಗೆ ಬೆಂಬಲ ನೀಡಿ ನೀರು ಹರಿಸಿದೆ. ಕಾವೇರಿ ನೀರಿನ ವಿವಾದ ತಾರಕಕ್ಕೆ ಏರಿದ್ದರೂ ಸರ್ಕಾರ ಏಕೆ ರೈತರು, ಹೋರಾಟಗಾರರು, ಸಂಘಟನೆಗಳ ಮುಖಂಡರ ಸಭೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ಎಕರೆಗೆ ೨೫ ಸಾವಿರ ರೂ. ಪರಿಹಾರ ನೀಡಬೇಕು. ರೈತರ ಎಲ್ಲ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ ಅವರು ಕರ್ನಾಟಕ ಬಂದ್ ಗೆ ಬಿಜೆಪಿ ಸಂಪೂರ್ಣ ಬೆಂಬಲವಿದೆ ಎಂದರು.
ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ರಾಜ್ಯದಲ್ಲಿ ಮಳೆಯಾಗಿಲ್ಲ. ಜಲಾಶಯಗಳಲ್ಲಿ ನೀರಿನ ಮಟ್ಟದ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಒಂದು ಹನಿ ನೀರನ್ನು ಬಿಡಬಾರದೆಂದು ಆಗ್ರಹಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ. ಕರ್ನಾಟಕ ಬಂದ್ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಕಾವೇರಿ ನಿರ್ವಹಣಾ ಮಂಡಳಿ ಮೂರು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಹೇಳಿರುವುದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ ಮಾಡಿಕೊಂಡಿರುವುದು ಸರಿಯಲ್ಲ. ಇದನ್ನು ನೋಡಿದರೆ ಕಾಂಗ್ರೆಸ್ ತಮಿಳುನಾಡು ಸರ್ಕಾರ ಒಪ್ಪಂದಮಾಡಿಕೊಂಡು ಡಿ.ಎಂ.ಕೆ ಪಕ್ಷವನ್ನು ಒಲೈಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಅಪಾದಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನ್ಕುಮಾರ್, ಕೇಂದ್ರ ಬರ ಪರಿಹಾರ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಉಪಾಧ್ಯಕ್ಷ ವೃಷಬೇಂದ್ರ, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್, ನಿಜಗುಣರಾಜು, ನೂರೊಂದುಶೆಟ್ಟಿ, ಡಾ.ಎ.ಆರ್.ಬಾಬು, ಸುರೇಶ್ನಾಯಕ, ಮಹದೇವನಾಯಕ, ಶಿವುವಿರಾಟ್, ಶಾಂತಮೂರ್ತಿಕುಲಗಾಣ, ಬಾಲರಾಜ್, ಮೂಡ್ನಾಕೂಡುಪ್ರಕಾಶ್,ನಗರಸಭಾ ಸದಸ್ಯರಾದ ಶಿವರಾಜ್, ಆಶಾನಟರಾಜು ಕುಮುದಕೇಶವಮೂರ್ತಿ ಇತರರು ಭಾಗವಹಿಸಿದ್ದರು.