ಮೈಸೂರು: ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಬರಪಿಡೀತ ತಾಲ್ಲೂಕುಗಳ ಕುರಿತು ಸಭೆ ನಡೆಸಲಾಗುವುದು. ಒಟ್ಟು 62 ತಾಲ್ಲೂಕುಗಳ ವರದಿ ದೊರೆತಿದ್ದು, 136 ತಾಲ್ಲೂಕುಗಳ ವರದಿ ಸಿದ್ದಗೊಳುತ್ತಿದೆ. ಎಲ್ಲಾ ತಾಲ್ಲೂಕಿನ ಸಂಪೂರ್ಣ ವರದಿ ದೊರೆತ ನಂತರ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ನೀರುನ್ನು ತಮಿಳುನಾಡಿಗೆ ಹರಿಸುವ ಸಂಬoಧ ನದಿ ನೀರು ಪ್ರಾಧಿಕಾರದ ಅದೇಶದಂತೆ ನೀರನ್ನು ಬಿಡಲಾಗುತ್ತದೆ. ನಮ್ಮ ರಾಜ್ಯದ ರೈತರ ಹಿತದೃಷ್ಟಿ ಕಾಪಾಡಿಕೊಳ್ಳಬೇಕಾಗಿದೆ. ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಆದ್ದರಿಂದ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ದಾಖಲಿಸಲಾಗಿದೆ. ವಾಸ್ತವಾಂಶಗಳನ್ನು ನ್ಯಾಯಾಲಯದ ಮುಂದೆ ಇರಿಸಲಾಗುವುದು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯದ ರೈತರ ಕೈ ಬಿಡುವುದಿಲ್ಲ. ನಮ್ಮ ರೈತರಿಗೆ ಮೋಸಮಾಡಿ ನಾವು ಅಧಿಕಾರ ನಡೆಸುವುದಿಲ್ಲ ಎಂದರು. ಖಾಸಗಿ ವಾಹನಗಳ ಮುಷ್ಕರಕೆ ಸಂಬoಧಿಸಿದoತೆ ಪ್ರತಿಕ್ರಿಯಿಸಿ, ಖಾಸಗಿ ವಾಹನಗಳಲ್ಲಿ ಮಹಿಳೆಯರು ಪ್ರಯಾಣಿಸದೇ ಇರುವುದರಿಂದ ನಮಗೆ ನಷ್ಟವಾಗುತ್ತಿದೆ. ಅದನ್ನು ಸರ್ಕಾರ ಭರಿಸಬೇಕು ಎಂಬ ಬೇಡಿಕೆಯನ್ನು ನೇರವೇರಿಸಲು ಸಾಧ್ಯವಿಲ್ಲ. ಮಹಿಳೆಯರ ಸಬಲೀಕರಣಕ್ಕಾಗಿಯೇ ಶಕ್ತಿ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.
ಮಹಿಷಾ ದಸರಾಕ್ಕೆ ಸಂಬoಧಿಸಿದoತೆ ನಾವು ಯಾರಿಗೂ ಕೂಡ ಉತ್ತರಿಸುವ ಅವಶ್ಯಕತೆ ಇಲ್ಲ. ಸಂವಿಧಾನ ಅಡಿಯಲ್ಲಿ ನಮ್ಮ ದೇಶ ನಿರ್ಮಾಣವಾಗಿದೆ. ಸರ್ವಧರ್ಮ ಸಮನ್ವಯತೆ ಒಳಗೊಂಡತೆ ನಾವು ಅಧಿಕಾರವನ್ನು ನಡೆಸುತ್ತಿದ್ದೇವೆ. ನಾವು ಅಧಿಕಾರದಲ್ಲಿದ್ದರು, ಇಲ್ಲದಿದ್ದರೂ ಕೂಡ ಕೋಮುವಾದಿಗಳಿಗೆ ಸಹಕಾರ ನೀಡುವುದಿಲ್ಲ ಎಂದು ತಿಳಿಸಿದರು.
ಜೊತೆಯಲ್ಲಿ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ, ಶಾಸಕರಾದ ಹರೀಶ್ಗೌಡ, ದರ್ಶನ್ ಧೃವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ ಇದ್ದರು.