ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಂದಾಯ ಸಚಿವರಿಗೆ ಸನ್ಮಾನ
ಚಾಮರಾಜನಗರ: ಮುಂದೆ ಬರುವ ಲೋಕಸಭಾ ಚುನಾವಣೆಯ ದೊಡ್ಡ ಯುದ್ದವನ್ನು ಗೆಲ್ಲುವುದು ನಮ್ಮ ಗುರಿಯಾಗಿದ್ದು,ಕಾರ್ಯಕರ್ತರು ಹಾಗೂ ಮುಖಂಡರು ಇದಕ್ಕೆ ಪೂರ್ವತಯಾರಿ ಮಾಡಿಕೊಂಡು ಸಜ್ಜಾಗಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಜನರು ಬದಲಾವಣೆ ಬೇಕು ಎಂದು 135 ಕ್ಕು ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಹೀಗಾಗಿ 5 ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. 2 ತಿಂಗಳ ಅವಧಿಯಲ್ಲಿ ಎಲ್ಲವನ್ನು ಅನುಷ್ಠಾನ ಮಾಡುವ ಮೂಲಕ ಜನಪರ ಆಡಳಿತವನ್ನು ನೀಡುತ್ತಿದ್ದೇವೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಇತರರರು ಇವೆಲ್ಲವನ್ನು ನೀಡಲು ಸಾಧ್ಯವಿದೆ. ಸುಮ್ಮನೆ ಕಾಲಹರಣ ಮಾಡಿ, ವರ್ಷಕ್ಕೊಂದು ಕಾರ್ಯಕ್ರಮ ನೀಡುತ್ತಾರೆ ಎಂದು ಮಾತನಾಡುತ್ತಿದ್ದರು. ಆದರೆ, ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ತೋರಿಸಿದ್ದೇವೆ ಎಂದರು.
ಈಗ ನಡೆಯುತ್ತಿರುವ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ರಾಜ್ಯದಲ್ಲಿರುವ ಯೋಜನೆಗಳೇ ಈ ಚುನಾವಣೆಯಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ಐದು ರಾಜ್ಯಗಳಲ್ಲಿಯು ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನಂತರ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ದೇಶದ ಚುಕ್ಕಾಣಿಯನ್ನು ಹಿಡಿಯಲು ನಾವೆಲ್ಲರು ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಪಕ್ಷದ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ ಬಹಳ ಇದೆ. ಕಾರ್ಯಕರ್ತರ ಸಂಕಷ್ಟಗಳಿಗೂ ಸಹ ನಾವೆಲ್ಲರು ಸ್ಪಂದಿಸಬೇಕಾಗಿದೆ. ಈಗ ಜನ ಸಾಮಾನ್ಯರಲ್ಲಿ ಸರ್ಕಾರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ತಾವೆಲ್ಲರು ಕಾಂಗ್ರೆಸ್ ಜನಪರ ಯೋಜನೆಗಳನ್ನು ಮತದಾರರಿಗೆ ತಲುಪಿಸಿ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತದೆ. ಕಾಂಗ್ರೆಸ್ ಯುಗವನ್ನು ಆರಂಭಿಸೋಣ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷ್ಣಬೈರೇಗೌಡರಿಗು ಚಾಮರಾಜನಗರ ಜಿಲ್ಲೆಗೂ ಅವಿನಾಭವ ಸಂಬಂಧವಿದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಹಾಗೂ ಸಂಘಟನೆ ಸಭೆಗಳಿಗೆ ಕೃಷ್ಣಬೈರೇಗೌಡರಿಗೆ ಮೊದಲ ಆಹ್ವಾನ ಹೋಗುತ್ತಿತ್ತು. ಅವರು ಸಹ ಚಾ.ನಗರ ಎಂದಕ್ಷಣ ಮರು ಮಾತನಾಡದೇ ಜಿಲ್ಲೆಗೆ ಬರುತ್ತಿದ್ದರು. ನಮ್ಮ ನಾಯಕರಾಗಿದ್ದ ದಿ. ಆರ್. ಧ್ರುವನಾರಾಯಣ್ ಅವರು ಅತ್ಮೀಯ ಸ್ನೇಹಿತರರು. ಅವರೊಂದಿಗೆ ಕೃಷ್ಣ ಬೈರೇಗೌಡರು ಇಟ್ಟಿಕೊಂಡಿದ್ದ ಪ್ರೀತಿ ವಿಶ್ವಾಸದಿಂದಾಗಿ ಜಿಲ್ಲೆಗೆ ಅಗಮಿಸುತ್ತಿದ್ದರು ಎಂದು ಧ್ರುವನಾರಾಯಣ್ ಅವರನ್ನು ನೆನಪು ಮಾಡಿಕೊಂಡರು.
ಕೃಷ್ಣಬೈರೇಗೌಡರು ಬಹಳ ವಾಗ್ಮಿಗಳು, ಸಿದ್ದರಾಮಯ್ಯ ಅವರು ಅವರರಿಗೆ ಸಮರ್ಥವಾದ ಕಂದಾಯ ಖಾತೆಯನ್ನು ನೀಡಿದ್ದಾರೆ. ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಜನನುರಾಗಿಯಾಗಿದ್ದಾರೆ. ನಮ್ಮ ಜಿಲ್ಲೆಗೆ ಭೇಟಿ ನೀಡುವ ಜೊತೆಗೆ ಪಕ್ಷ ಕಚೇರಿಗೆ ಆಗಮಿಸಿರುವುದು ಅವರ ಬದ್ದತೆಯನ್ನು ತೋರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ನಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ, ಚಿಕ್ಕಮಹದೇವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲತಾರಾಜಶೇಕರ್ ಜತ್ತಿ, ಮಾಜಿ ಅಧ್ಯಕ್ಷ ಸದಾಶಿವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಸಿ. ಗುರುಸ್ವಾಮಿ, ತೋಟೇಶ್, ಹೊಂಗನೂರು ಚಂದ್ರು, ಸೇವಾದಳದ ಅಧ್ಯಕ್ಷ ಜಯರಾಜ್ ಹೊಂಗನೂರು, ರವಿಗೌಡ, ಸೈಯದ್ ರಫಿ, ಸುಹೇಲ್ ಅಲಿ ಖಾನ್, ಎಎಚ್ಎನ್ ಖಾನ್, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ನೀಲಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರತ್ನ, ಮೊದಲಾಧವರು ಇದ್ದರು.