ಮೈಸೂರು: ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ, ಇಷ್ಟಪಟ್ಟು ಓದಿದರೆ ಮಾತ್ರ ತಾವು ಅಂದುಕೊಂಡಂತೆ ಸಾಧನೆ ಮಾಡಲು ಸಾಧ್ಯ ಎಂದು ಚುಟುಕು ಸಾಹಿತಿ ಮ. ಗು. ಬಸವಣ್ಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಂಸ್ಥೆಯ ಸಂಸ್ಥಾಪಕರಾದ ಮರಿಮಲ್ಲಪ್ಪನವರು ದೂರದ ತುಮಕೂರಿನಿಂದ ಮೈಸೂರಿಗೆ ಬಂದವರು, ಮೈಸೂರು ಸಂಸ್ಥಾನದಲ್ಲಿ ಗುರಿಕಾರ್ ಹುದ್ದೆಯನ್ನು ಪಡೆದದ್ದಲ್ಲದೆ, ಮೈಸೂರು ಮಹಾರಾಜರ ಅಪಾರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದಾಗ ಅವರ ಸಂಬಂಧಿಕರು ಮರಿ ಮಲ್ಲಪ್ಪನವರ ನಿವೇಶನದಲ್ಲಿ ದೇವಾಲಯ ನಿರ್ಮಿಸಲು ಮುಂದಾಗುತ್ತಾರೆ ಆದರೆ ವಿದ್ಯಾಪಕ್ಷಪಾತಿಯಾದ ಮರಿಮಲ್ಲಪ್ಪನವರು ಅದಕ್ಕೆ ಒಪ್ಪದೆ ಶಾಲೆಯನ್ನೇ ತೆರೆಯಬೇಕು ಎಂದು ಕ್ರಿ.ಶ. 1870ರಲ್ಲಿ ವಿಲ್ ಬರೆಯುತ್ತಾರೆ. ಅವರ ಆಶಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿರುವ ಮರಿಮಲ್ಲಪ್ಪ ಸಂಸ್ಥೆಯು ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮರಿಮಲ್ಲಪ್ಪ ವಿಜ್ಞಾನ ಮತ್ತು ವ್ಯವಹಾರ ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ನೇತ್ರ ಉತ್ತಯ್ಯರವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡುತ್ತಾ, ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಿ ಮಾತನಾಡಬಾರದು. ಪ್ರತಿಯೊಂದು ಮಗುವಿಗೂ ಅದರದೇ ಆದ ವ್ಯಕ್ತಿತ್ವ, ಸಾಮಥ್ರ್ಯ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು ಮತ್ತು ಶಿಕ್ಷಕರಿಂದ ಆಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರುಗಳಾದ ಎಸ್. ಶಂಭುಲಿಂಗಪ್ಪ, ಶ್ರೀಮತಿ ಜೆನ್ನಿಫರ್ ರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾನ್ವಿ ಶಾಲಾ ವರದಿ ಮಂಡಿಸಿದಳು.
ಶಿಕ್ಷಕರುಗಳಾದ ಶ್ರೀಮತಿ ಟಿ. ಆಶಾ ಸ್ವಾಗತಿಸಿದರು. ಶ್ರೀಮತಿ ಡಿ. ಪರಿಮಳ ವಂದಿಸಿದರು. ಶ್ರೀಮತಿ ಕೆ.ಎನ್. ಗೌರಮ್ಮ ನಿರೂಪಿಸಿದರು.