ಶ್ರಮಪಟ್ಟರೆ ಸಾಧನೆ ಶಿಖರ ಮುಟ್ಟಲು ಸಾಧ್ಯ : ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ

ಚಾಮರಾಜನಗರ: ವಿದ್ಯಾರ್ಥಿಗಳು ಶ್ರಮಪಟ್ಟು ಓದಿದಾಗ ಮಾತ್ರ ಸಾಧನೆಯ ಶಿಖರ ಮುಟ್ಟಲು ಸಾಧ್ಯ ಎಂದು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.

ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ರವರು ಶಾಲೆಗೆ ಸೇರಿದ ನವೆಂಬರ್ 7ರ ದಿನವನ್ನು ಪ್ರತಿಭಾ ಪುರಸ್ಕಾರ ದಿನವನ್ನಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಸಫಾಯಿ ಕರ್ಮಾಚಾರಿ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾನತೆಗೆ ಹೋರಾಡಿದ ಮಹಾನ್ ವ್ಯಕ್ತಿ ಡಾ. ಬಿ.ಆರ್ ಅಂಬೇಡ್ಕರ್ ರವರು ಮಾಡಿದ ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ವಿದ್ಯಾರ್ಥಿ ದೆಸೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‍ರವರು ಪಟ್ಟ ಕಷ್ಟಗಳನ್ನು ನಾವು ಅನುಭವಿಸುತ್ತಿಲ್ಲ. ಅಂಬೇಡ್ಕರ್ ಅವರು ಸಂಕಷ್ಟಗಳ ನಡುವೆಯೂ ಮಾಡಿರುವ ಸಾಧನೆಗಳನ್ನು ಎಲ್ಲರೂ ಅರಿತುಕೊಳ್ಳಬೇಕು. ಹುಟ್ಟಿನಿಂದ ಎಲ್ಲರೂ ಎಲ್ಲವನ್ನು ಪಡೆದುಕೊಂಡು ಬಂದಿರುವುದಿಲ್ಲ. ಶ್ರಮದ ಪ್ರತಿಫಲವಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿಯ ಜೊತೆಗೆ ಶ್ರಮವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪೋಷಕರಿಗೆ ಮಕ್ಕಳೇ ಆಸ್ತಿಗಳಾಗುತ್ತಾರೆ. ಮಕ್ಕಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದಾಗ ಪೋಷಕರಿಗೆ ಗೌರವ ಲಭಿಸುತ್ತದೆ. ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸ ನೀಡಿದ ಚಿಂತಕರಾದ ಅರಕಲವಾಡಿ ನಾಗೇಂದ್ರ ಅವರು ಮಾತನಾಡಿ ಸಮಾಜದ ಕಟ್ಟಕಡೆಯ ಸಮುದಾಯಗಳ ಉಳಿವಿಗಾಗಿ ಹೋರಾಡಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಾಧನೆಗಳು ಎಲ್ಲರಿಗೂ ದಾರಿ ದೀಪವಾಗಬೇಕು. ಅಂಬೇಡ್ಕರ್ ಅವರು ಶಾಲೆಗೆ ದಾಖಲಾದ ದಿನವನ್ನು ಪ್ರತಿಭಾ ಪುರಸ್ಕಾರ ದಿನವಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಸದಸ್ಯರಾದ ಎಂ. ಮಹೇಶ್ ಅವರು ಮಾತನಾಡಿದ ನವೆಂಬರ್ 7ಅನ್ನು ಸರ್ಕಾರವು ಪ್ರತಿಭಾ ಪುರಸ್ಕಾರ ದಿನವಾಗಿ ಆಚರಿಸುತ್ತಿದ್ದು, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ಕಾಣಲೂ ಸಾಧ್ಯವಾಗುತ್ತದೆ. ಪೌರಕಾರ್ಮಿಕ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹೆಚ್ಚು ಗಮನವಹಿಸಬೇಕು. ಮಕ್ಕಳನ್ನು ಶಿಕ್ಷಣದತ್ತ ಪ್ರೇರೇಪಿಸುವಂತಾಗಬೇಕು ಎಂದರು.
ಪ್ರತಿಭಾವಂತ ಮಕ್ಕಳಿಗೆ ಗೌರವಿಸಲಾಯಿತು. ಪೌರಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಯಿತು.

ಸಫಾಯಿ ಕರ್ಮಾಚಾರಿ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮಿತಿ ಸದಸ್ಯರಾದ ಪುಷ್ಪಾ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಭಾಗ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ನಗರಸಭೆ ಆಯುಕ್ತರಾದ ರಾಮದಾಸ್, ಸಹಾಯಕ ನಿರ್ದೇಶಕರಾದ ಚಿಕ್ಕಬಸವಯ್ಯ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *