ಸಾಹಸಸಿಂಹ ವಿಷ್ಣುವರ್ಧನ್ ರವರ ಸಂಸ್ಮರಣೆ ಇಂದು.
ಚಲನಚಿತ್ರರಂಗದಲ್ಲಿ ತಮ್ಮ ವಿಭಿನ್ನ ಅಭಿನಯಗಳಿಂದ ಮನಸೂರೆಗೊಂಡ ನೂರಾರು ನಟರಿದ್ದಾರೆ. ಒಬ್ಬೊಬ್ಬರದು ಕೂಡ ಒಂದೊಂದು ರೀತಿಯ ವಿಭಿನ್ನ ಶೈಲಿಯ ಅಭಿನಯ ಪ್ರೇಕ್ಷಕರ/ ಅಭಿಮಾನಿಗಳ ಮನಸೂರೆಗೊಳ್ಳುತ್ತದೆ.
ಅಂತಹ ನಟರಲ್ಲಿ ಪ್ರಮುಖರಾದವರು ಸಾಹಸಸಿಂಹ ಡಾ ವಿಷ್ಣುವರ್ಧನ್ ರವರು. ಅವರು ನಮ್ಮನ್ನು ಅಗಲಿದ ದಿನ. ಅವರ ಸಂಸ್ಮರಣೆಯ ಈ ಸಂದರ್ಭದಲ್ಲಿ ಮೇರು ನಟನ ಚಿತ್ರರಂಗದ ಸಾಧನೆಯ ನೆನಪಿನ ಪಯಣದ ಬಗ್ಗೆ ಒಂದು ಚಿಕ್ಕ ಹಿನ್ನೋಟ.
ಕನ್ನಡ ಚಿತ್ರರಂಗದಲ್ಲಿ ಡಾ ರಾಜಕುಮಾರ್ ಅವರ ನಂತರ ಕೇಳಿ ಬರುವ ಹೆಸರೇ ವಿಷ್ಣುವರ್ಧನ್ ರವರದು. ತಮ್ಮ ಭಾವಪೂರ್ಣ ವಿಭಿನ್ನ ಪಾತ್ರಗಳ ಅಭಿನಯದ ಮೂಲಕ ಅವರು ಎಂದೆಂದಿಗೂ ಕೂಡ ಚಿತ್ರ ರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಅವರು ಚಿತ್ರರಂಗದ ಅನಿರೀಕ್ಷಿತ ಪಯಣದ ನಂತರ ಸಾಧಿಸಿದ್ದು ಅಪಾರ. ಈಗಲೂ ನೆನಪಿದೆ. ನಮಗೆ ಬೇಸಿಗೆ ರಜೆ ದಸರಾ ರಜ ಬಂದರೆ ಸಾಕು ಅಜ್ಜಿ ಮನೆಗೆ ಹೋದಾಗ ಅಲ್ಲಿ ಇದ್ದ ಟೆಂಟ್ ನಲ್ಲಿ ಬರುತ್ತಿದ್ದ ಚಿತ್ರಗಳನ್ನೆಲ್ಲ ವೀಕ್ಷಣೆ ಮಾಡುತ್ತಿದ್ದೆವು. ಅದರಲ್ಲೂ ವಿಷ್ಣುವರ್ಧನ್ ಚಿತ್ರಗಳು ಬಂದರೆ ಮರೆಯದೆ ನೋಡುತ್ತಿದ್ದೆವು. ಅವರು ಮಾಡುವ ಫೈಟ್ ಜೊತೆಗೆ ಆಕ್ಷನ್, ಅವರು ಮಾತನಾಡುವ ಶೈಲಿ, ಕೋಪದ ಸನ್ನಿವೇಶ, ಎಂದರೆ ನಮಗೆ ಪಂಚಪ್ರಾಣ. ಅದಕ್ಕಲ್ಲವೇ ಅವರನ್ನು “ಸಾಹಸ ಸಿಂಹ” ಎಂದು ವಿಶೇಷವಾಗಿ ಕರೆಯುವುದು.
ತಮ್ಮ ಸಹನಟರನ್ನು ಕಂಡರೆ ಬಹಳ ಗೌರವ ಕೊಡುತ್ತಿದ್ದರು. ಜೊತೆಗೆ ನೆರವು ಕೂಡ ನೀಡುತ್ತಿದ್ದರು. ಈ ಬಗ್ಗೆ ಅನೇಕ ಉದಾಹರಣೆಗಳು ಇವೆ.
ವಿಷ್ಣುವರ್ಧನ್ ರವರು ಜನಿಸಿದ್ದು ಉದ್ಯಾನಗರಿ ಮೈಸೂರಿನಲ್ಲಿ ಎನ್ನುವುದು.(18.09.1950) ತುಂಬಾ ಹೆಮ್ಮೆಯ ವಿಷಯ. ಅವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸವಾಗಿದ್ದರು. ಇವರ ತಂದೆ ಎಚ್ ಎಲ್ ನಾರಾಯಣ ರಾವ್, ತಾಯಿ ಕಾಮಾಕ್ಷಮ್ಮ.ಇವರ ತಂದೆ ಕಲಾವಿದರಾಗಿದ್ದರು. ಜೊತೆಗೆ ಸಂಗೀತ ನಿರ್ದೇಶಕರು ಮತ್ತು ಸಂಭಾಷಣ ಕಾರರು ಕೂಡ ಆಗಿದ್ದರು. ಈ ಒಂದು ಚಿತ್ರರಂಗದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಜನಿಸಿದ ವಿಷ್ಣುವರ್ಧನ್ ಅವರಿಗೆ ಸಿನಿಮಾ ಸಂಸ್ಕಾರ ಕೂಡ ಬಾಲ್ಯದಿಂದಲೇ ಇತ್ತು.
ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮುಗಿಸಿದರು. ನಂತರ ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲೆ ಮತ್ತು ಪದವಿ ತರಗತಿಗಳನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಓದಿದರು.
ಇವರು ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ಕೂಡ ಸುಮಾರು ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಶಿವಶರಣ ನಂಬೆಯಕ್ಕ ಎಂಬ ಸಿನಿಮಾದಲ್ಲಿ 1955ರಲ್ಲಿ ಬಾಲ ನಟನಾಗಿ ಅಭಿನಯಿಸಿದ ವಿಷ್ಣು ರವರು 28 ದಿನದಲ್ಲಿ ಚಿತ್ರಣ ಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹಿರಿಮೆಗೆ ಈ ಚಿತ್ರ ಪಾತ್ರವಾಗಿತ್ತು ಎಂಬ ಅಂಕಿ ಅಂಶಗಳು ತಿಳಿಸುತ್ತವೆ. ನಂತರ ಶಂಕರ್ ಸಿಂಗ್ ರವರ ಕೋಕಿಲ ವಾಣಿ ಎಂಬ ಚಿತ್ರದಲ್ಲಿ ಚಿಕ್ಕ ಪಾತ್ರವಹಿಸಿದ್ದರು.
ಇದು ಬಾಲ ಕಲಾವಿದನ ರಾಗಿದ್ದರು. 1972 ರಲ್ಲಿ ಬಿಡುಗಡೆಗೊಂಡ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ “ನಾಗರಹಾವು” ಚಿತ್ರದ ಮೂಲಕ ಸಂಪತ್ ಕುಮಾರ್ ರವರನ್ನು”ವಿಷ್ಣುವರ್ಧನ್” ಎಂಬ ಹೆಸರನ್ನು ಪುಟ್ಟಣ್ಣ ಕಣಗಾಲ್ ರವರು ನಟನನ್ನಾಗಿ ಮಾಡುವುದರ ಜೊತೆಗೆ ಹೆಸರನ್ನು ಕೂಡ ಬದಲಾಯಿಸಿದರು ನಂತರ ವಿಷ್ಣುವರ್ಧನ್ ರವರ ಶಕೆ ಪ್ರಾರಂಭವಾಯಿತು.
ನಾಗರಹಾವು ಚಿತ್ರ ಬೆಂಗಳೂರಿನ ಸಾಗರ ಚಿತ್ರಮಂದಿರದಲ್ಲಿ 25 ವಾರಗಳ ಕಾಲ ಪ್ರದರ್ಶನಗೊಂಡು ಹೊಸ ದಾಖಲೆ ಬರೆಯಿತು. ಜೊತೆಗೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆಯಿತು. ವಿಷ್ಣುವರ್ಧನ್ ರವರು ನಟಿಸಿರುವ ಸಾಹಸಸಿಂಹ ಸಿನಿಮಾ ಕೂಡ 25 ವಾರ ಪ್ರದರ್ಶನ ವಾಗುವುದರ ಮೂಲಕ ವಿಷ್ಣು ರವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು.
ಈ ಮೂಲಕ “ವಿಷ್ಣುವರ್ಧನ್” ಎಂಬ ಹೆಸರಿನ ಮುಂದೆ “ಸಾಹಸ ಸಿಂಹ” ಎಂಬ ಹೆಸರು ಬರುವಂತೆ ಮಾಡಿತು.
ನಂತರದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಇವರು ಉತ್ತಮ ಗಾಯಕರು ಕೂಡ ಎನ್ನುವುದು ಹಲವರಿಗೆ ಗೊತ್ತಿರುವುದಿಲ್ಲ. ಕಿಲಾಡಿ ಕಿಟ್ಟು, ನಾಗಕಾಳ ಭೈರವ, ಸಾಹಸಸಿಂಹ, ಜಿಮ್ಮಿಗಲ್ಲು, ಕೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ, ಮುಂತಾದ ಚಿತ್ರಗಳಲ್ಲಿ ಕೂಡ ಚಿತ್ರರಸಿಕರಿಗೆ ಗಾಯನ ಸುಧೆ ನೀಡಿದ್ದಾರೆ. ಅವುಗಳಲ್ಲಿ ಕೆಲವುಹಾಡುಗಳ ಪಟ್ಟಿ ಇಂತಿದೆ.
ಒಂದಿಷ್ಟು ಹಾಡುಗಳು ನಿಮಗಾಗಿ…..
“ನಗುವುದೇ ಸ್ವರ್ಗ…..”
“ತುತ್ತು ಅನ್ನ ತಿನ್ನೋಕೆ……”
“ಕನ್ನಡವೇ ನಮ್ಮಮ್ಮ…..”
“ಮಡಿಲಲ್ಲಿ ಮಗುವಾಗಿ ನಾನು……”
“ಬೇಡ ಅನ್ನೋರು ಉಂಟೇ ಹುಡುಗಿ……”
“ಇದ್ದದ್ದ ಇದ್ದಂಗೆ ಹೇಳಿದ್ರೆ ನೀವೆಲ್ಲಾ….” (ಹುಲಿ ಹೆಜ್ಜೆ)
“ಒಂದೇ ಒಂದು ಪ್ರಶ್ನೆ ಕೇಳ್ತೀನಿ ಉತ್ತರ ಹೇಳ್ತಿಯ ಫ್ರೆಂಡ್……”(ಸೂರ್ಯವಂಶ)
“ಹೇಗಿದ್ದರೂ ನೀನೆ ಚೆನ್ನ…..”ಇನ್ನು ಮುಂತಾದ ಗೀತೆಗಳನ್ನು ಕೇಳಿದರೆ ಮೈಮನಗಳಿಗೆ ರೋಮಾಂಚನವಾಗುತ್ತದೆ. ಅವರು ಹಾಡುವುದನ್ನು ಮುಂದುವರಿಸಿದ್ದರೆ ದೊಡ್ಡ ಗಾಯಕರು ಕೂಡ ಆಗುತ್ತಿದ್ದರು.
ವಿಷ್ಣು- ಸುಹಾಸಿನಿ, ವಿಷ್ಣು- ಮಾಧವಿ, ವಿಷ್ಣು- ಭವ್ಯ, ವಿಷ್ಣು ಭಾರತೀ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಜೋಡಿಯಾಗಿದ್ದರು. ಅಲ್ಲದೆ ವಿಷ್ಣು ರವರ ಹೆಚ್ಚಿನ ಚಿತ್ರಗಳಲ್ಲಿ ಆರತಿಕೂಡಾ ನಟಿಸಿದ್ದಾರೆ.
ವಿಷ್ಣುವರ್ಧನ್ ರವರು ನಟಿಸಿರುವ ನೋಡಲೇಬೇಕಾದ ಚಿತ್ರಗಳ ಪಟ್ಟಿಯೂ ಕೂಡ ಇದೆ…
ನಾಗರಹಾವು, ಸಾಹಸಸಿಂಹ, ಬಂಧನ, ನೀ ಬರೆದ ಕಾದಂಬರಿ, ಮಲೆಯ ಮಾರುತ, ಜಯಸಿಂಹ, ಮುತ್ತಿನ ಹಾರ, ಲಯನ್ ಜಗಪತಿರಾವ್, ಹೀಗೆ ಮುಂದುವರಿಯುತ್ತದೆ.
ಕನ್ನಡ ಚಿತ್ರರಂಗದ ನಟಿಯಾದ ಭಾರತಿ ರವರು ಕೂಡ ವಿಷ್ಣುವರ್ಧನ್ ರವರ ನಟನೆಗೆ ಸಾಥ್ ನೀಡಿದ್ದರು.
ನಂತರದಲ್ಲಿ ವಿಷ್ಣುವರ್ಧನ್ ರವರ ಎರಡನೇ ಇನ್ನಿಂಗ್ಸ್ ಎಂಬಂತೆ ಮತ್ತಷ್ಟು ಯಶಸ್ವಿ ಚಿತ್ರಗಳು ತೆರೆಕಂಡವು.
ಯಜಮಾನ, ಸೂರಪ್ಪ, ಸೂರ್ಯವಂಶ, ದಿಗ್ಗಜರು, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ, ಸಿರಿವಂತ, ಈ ಬಂಧನ, ಆಪ್ತರಕ್ಷಕ.
ಡಾ ರಾಜಕುಮಾರ್ ಮತ್ತು ವಿಷ್ಣುವರ್ಧನ್ ನಟಿಸಿರುವ ಏಕೈಕ ಸಿನಿಮಾ ಗಂಧದಗುಡಿಯಲ್ಲಿ ಕೂಡ ವಿಷ್ಣುವರ್ಧನ್ ರಾಜಕುಮಾರ್ ರವರ ಜೊತೆ ಅದ್ಭುತವಾಗಿ ನಟಿಸಿದ್ದಾರೆ. ಹಲವು ಕಾರಣಗಳಿಂದ ಗಾಸಿಪ್ ಆಗಿತ್ತು. ನಂತರದಲ್ಲಿ ಡಾ ರಾಜ್- ವಿಷ್ಣು ಸ್ನೇಹಿತರಾಗಿ ಹಲವು ವೇದಿಕೆಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಆದರೆ ಅಭಿಮಾನಿಗಳ ಆಸೆಯೆಂದರೆ ವಿಷ್ಣು- ರಾಜ್ ಜೋಡಿ ಮತ್ತಷ್ಟು ಚಿತ್ರಗಳಲ್ಲಿ ನಟಿಸಬೇಕಾಗಿತ್ತು ಎನ್ನುವುದು. ಅದು ಯಕ್ಷಪ್ರಶ್ನೆಯಾಗಿಯೇ ಉಳಿಯಿತು.
ಬೆಂಗಳೂರಿನಲ್ಲಿ ನಡೆದ “ಧನ್ಯ ಮಿಲನ” ಕಾರ್ಯಕ್ರಮದಲ್ಲಿ ರಾಜ್, ಅಂಬರೀಶ್, ವಿಷ್ಣುವರ್ಧನ್ ಒಂದೇ ವೇದಿಕೆಯಲ್ಲಿದ್ದರು.
ವಿಷ್ಣುವರ್ಧನ್ ರವರು ನಟಿಸಿರುವ ಚಿತ್ರಗಳ ಬಹು ಪಾಲು ಗೀತೆಗಳನ್ನು ಎಸ್ಪಿ ಬಾಲಸುಬ್ರಮಣ್ಯಂ ಅವರ ಸಿರಿ ಕಂಠದಲ್ಲಿ ಮೂಡಿಬಂದಿವೆ. ಇದರಿಂದಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎಸ್ಪಿ ಬಿ ರವರು ವಿಷ್ಣುವರ್ಧನ್ ರವರ ನಟನೆಗೆ ತಕ್ಕಂತೆ ಹೇಳಿ ಮಾಡಿಸಿದ ರಾಗ ನೀಡುತ್ತಿದ್ದರು. ಇದರಿಂದಾಗಿ ಹಲವು ಗೀತೆಗಳು ಇಂದಿಗೂ ಕೂಡ ಎಲ್ಲರ ಬಾಯಲ್ಲಿ ಗುನುಗುವಂತೆ ಮಾಡುತ್ತವೆ. ಹಲವು ಉತ್ತಮ ಗೀತ ರಚನೆಕಾರರ ಲೇಖನಿಯಿಂದ ಬರೆದ, ಜೊತೆಗೆ ಅದಕ್ಕೆ ಅಷ್ಟೇ ಸುಮಧುರ ಸಂಗೀತ ಸ್ಪರ್ಶ ಇರುವ ಇನ್ನಿತರ ಗಾಯಕರು ಹಾಡಿರುವ ಸುಮಧುರ ಪ್ರೀತಿ- ಪ್ರೇಮ ಕುರಿತಾದ ಗೀತೆಗಳು ಮನೆ- ಮನ ತಲುಪುತ್ತವೆ. ಬಂದೆಯಾ ಬಾಳಿನ ಬೆಳಕಾಗಿ, ಒಲುಮೆ ಸಿರಿಯ ಕಂಡು, ಪ್ರೀತಿಯ ಮಾತನ್ನು, ಹೃದಯ ಗೀತೆ ಹಾಡುತಿರೆ, ಯುಗ ಯುಗಗಳೇ ಸಾಗಲಿ, ಬಣ್ಣ ನನ್ನ ಒಲವಿನ ಬಣ್ಣ, ಅಮ್ಮ ಎಂದರೆ ಏನೋ ಹರುಷವು, ಕಣ್ಣು ಕಣ್ಣು ಒಂದಾಯಿತು, ಅಮರವೆಲ್ಲೊ ಕೋಗಿಲೆ ಎಲ್ಲೋ, ಮಡಿಕೇರಿ ಸಿಪಾಯಿ, ಕಾಲವನ್ನು ತಡೆಯೋರು ಯಾರು ಇಲ್ಲ ಹೀಗೆ ಮುಂತಾದವು.
ಅಲ್ಲದೆ ವಿಷ್ಣುವರ್ಧನ್ ತಮ್ಮ ವಿಭಿನ್ನ ನಟನೆಯ ಮೂಲಕ ಭಗ್ನ ಪ್ರೇಮಿಯಾಗಿಯೂ, ತ್ಯಾಗಮಯಿಯಾಗಿಯೂ ನಟಿಸುತ್ತಾ ಹಲವು ಗೀತೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಆ ಕರ್ಣನಂತೆ….. ಪ್ರೇಮದ ಕಾದಂಬರಿ….. ಪ್ರೇಮಾನುರಾಗ…… ಪ್ರೇಮ ಚಂದ್ರಮ…… ಈ ಬಾಳಲಿ ಶಾಂತಿ ಎಲ್ಲಿದೆ……. ನೀ ಮೀಟಿದ ನೆನಪೆಲ್ಲವು…… ಜೀವ ಜ್ಯೋತಿಯೇ….. ನನ್ನವರು ಯಾರು ಇಲ್ಲ…… ನೂರೊಂದು ನೆನಪು…. ಹೀಗೆ ಒಂದೇ ಎರಡೇ?!.
ಇವರು ಕೊನೆ ಕೊನೆಯಲ್ಲಿ ಆಧ್ಯಾತ್ಮದ ಕಡೆಗೆ ಹೆಚ್ಚು ವಾಲಿದ್ದರು. ಅವರ ಮಾತು ವೇದಾಂತದಂತಿತ್ತು!. ಜೊತೆಗೆ ಅವರು ಮೌನವಾಗಿ ಇದ್ದುಕೊಂಡು ಒಂದು ಕಡೆ ನಟನೆ, ಒಂದು ಕಡೆ ಆದ್ಯಾತ್ಮ, ಎಲ್ಲವನ್ನು ಸಮತಲದಲ್ಲಿ ಕಾಯ್ದಿಟ್ಟುಕೊಂಡು ಕುಟುಂಬದೊಂದಿಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಅವರ ಆಧ್ಯಾತ್ಮ ಗುರು ಬನ್ನಂಜೆಗೋವಿಂದಾಚಾರ್ಯರಾಗಿದ್ದರು. ಅವರಿಗೆ ಸಂಖ್ಯಾ ಭವಿಷ್ಯ ಶಾಸ್ತ್ರದಲ್ಲೂ ಕೂಡ ಅಪಾರ ನಂಬಿಕೆ ಇತ್ತು. ಇದರಿಂದಾಗಿ ತಮ್ಮ ಕಾರಿನ ನಂಬರ್, ಮೊಬೈಲ್ ಕೊನೆಯ ಸಂಖ್ಯೆಯನ್ನು 321 ಬಳಸುವ ಮೂಲಕ ನಂಬಿಕೆ ಇಟ್ಟಿದ್ದರು.
ಇಂತಹ ಅಮೋಘ ನಟನಿಗೆ ಹಲವು ಪ್ರಶಸ್ತಿಗಳು ಬಂದಿವೆ. ಬೆಂಗಳೂರು ವಿಶ್ವವಿದ್ಯಾಲಯ 2015ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ. ಭಾರತ ಸರ್ಕಾರ 2013ರಲ್ಲಿ ಅಂಚೆಚೀಟಿ ಹೊರತಂದಿದೆ. ಜೊತೆಗೆ ಅತ್ಯುತ್ತಮ ನಟನೆಗಾಗಿ ಅನೇಕ ಪ್ರಶಸ್ತಿಗಳು ಬಂದಿವೆ.
ಇಂತಹ ಧೀಮಂತ ನಟ 30.12.2009 ರಲ್ಲೀ ಪತ್ನಿ ಭಾರತಿ, ಮಕ್ಕಳಾದ ಚಂದನ, ಕೀರ್ತಿ, ಅಳಿಯ ಅನಿರುದ್ದ ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದರು. ಇಂದು ನಮ್ಮೊಟ್ಟಿಗೆ ಇಲ್ಲದಿದ್ದರೂ ಕೂಡ ಅವರ ನಟನೆಯ ಅಮೋಘ ಚಿತ್ರಗಳ ಮೂಲಕ ಕನ್ನಡ ನಾಡಿನಲ್ಲಿ ಶಾಶ್ವತವಾಗಿ ಹೆಸರುಗಳಿಸಿದ್ದಾರೆ.
ಅವರು ಹುಟ್ಟಿ ಬೆಳೆದ ಮೈಸೂರಿನ ಸುತ್ತಮುತ್ತ ಅನೇಕ ಚಿತ್ರಗಳ ಚಿತ್ರೀಕರಣವಾಗಿದೆ. ಜೊತೆಗೆ ವಿಷ್ಣುವರ್ಧನ್ ರವರು ಮೈಸೂರನ್ನು ತುಂಬಾ ಪ್ರೀತಿಸುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಮೈಸೂರಿಗೆ ಬಂದು ಇಲ್ಲಿನ ಸ್ಥಳ, ಹೋಟೆಲ್, ಮುಂತಾದ ಕಡೆ ಸುತ್ತಾಡಿ ತಮ್ಮ ಹಳೆಯ ಸ್ನೇಹಿತರೊಂದಿಗೆ ಸಂಭ್ರಮದಿಂದ ಕಾಲ ಕಳೆಯುತ್ತಿದ್ದರು. ಅನೇಕ ನಿರ್ದೇಶಕರು, ನಟರು, ನಟಿಯರು, ಗಾಯಕರು, ನಿರ್ಮಾಪಕರು ಹೀಗೆ ಎಲ್ಲರೊಂದಿಗೆ ಸಾಮರಸ್ಯದಿಂದಿದ್ದರು.
ಅವರ ನಿಧನದ ನಂತರ ಮೈಸೂರಿನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಉದ್ಬೂರು ಗೇಟ್ ಬಳಿ ವಿಷ್ಣು ಸ್ಮಾರಕವನ್ನು ಸರ್ಕಾರ ನಿರ್ಮಿಸಿದೆ. ಈಗಾಗಲೇ ಅನೇಕ ವಿಶೇಷತೆಗಳು ಅಲ್ಲಿವೆ. ಮುಂದಿನ ದಿನಗಳಲ್ಲಿ ಆ ಸ್ಮಾರಕ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ಬಗ್ಗೆ ಭಾರತೀ ವಿಷ್ಣುವರ್ಧನ್ ರವರು ಹೆಚ್ಚಿನ ಗಮನಹರಿಸುತ್ತಿದ್ದಾರೆ.
ಕಾಳಿಹುಂಡಿ ಶಿವಕುಮಾರ್ ಮೈಸೂರು