ಕುಮಚಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ವಿತರಣೆ
ಚಾಮರಾಜನಗರ: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಸರ್ಕಾರ ಹೆಚ್ಚಿನ ಸವಲತ್ತುಗಳನ್ನು ನೀಡುವ ಜೊತೆಗೆ ಗುಣಮಟ್ಟದ ಪಾಠ ಪ್ರವಚನಗಳು ನುರಿತ ಶಿಕ್ಷಕರಿಂದ ದೊರೆಯಲಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಕುಮಚಹಳ್ಳಿ ಸ್ವಾಮಿ ತಿಳಿಸಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲ್ಲಿ ಮಕ್ಕಳಿಗೆ ಶೂ ಭಾಗ್ಯ ಯೋಜನೆಯಡಿಯಲ್ಲಿ ಶೂಗಳನ್ನು ವಿತರಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪೋಷಕರು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಿದ್ದಾರೆ. ಆದರೆ, ಸರ್ಕಾರಿಯಲ್ಲಿ ವ್ಯಾಸಂಗ ಮಾಡಿದ ಬಹಳಷ್ಟು ಮಂದಿ ಉನ್ನತ ಪದವಿಗಳನ್ನು ಪಡೆದುಕೊಂಡಿದ್ದಾರೆ. ಮಹಾನ್ ಸಾಧಕರಾಗಿದ್ದಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬೇಕೆಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಊಟ, ಬೆಳಗ್ಗೆ ನಂದಿನಿ ಹಾಲು, ವಿದ್ಯಾರ್ಥಿ ವೇತನ, ಸಮವಸ್ತ್ರ, ಶೂ, ಉಚಿತ ಪಠ್ಯ ಪುಸ್ತಕ, ನೋಡ್ ಬುಕ್ಗಳು ಸೇರಿದಂತೆ ವ್ಯಾಸಂಗಕ್ಕೆ ಅನುಕೂಲವಾಗುವಂತಹ ವಾತಾವರಣವನ್ನು ನಿರ್ಮಿಸಿಕೊಡಲಾಗುತ್ತದೆ. ಆದರೆ, ಈ ಎಲ್ಲಾ ಸೌಲಭ್ಯಗಳನ್ನು ದುಡ್ಡು ಕೊಟ್ಟು ನಾನು ಖಾಸಗಿ ಶಾಲೆಯಲ್ಲಿ ಪಡೆದುಕೊಳ್ಳಬೇಕಾಗಿದೆ. ಹೀಗಾಗಿ ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.