ಅಧಿಕಾರ ವಿಕೇಂದ್ರೀಕರಣದಿಂದಾಗಿ ಗ್ರಾ.ಪಂ.ಗಳ ಬಲವರ್ಧನೆ: ಶೇಖರಪ್ಪ

ತಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗ್ರಾ.ಪಂ. ಕಾರ್ಯಾಲಯಕ್ಕೆ ಭೇಟಿ: ಕಾರ್ಯಚಟುವಟಿಕೆಗಳ ವೀಕ್ಷಣೆ
ಚಾಮರಾಜನಗರ: ಸ್ಥಳೀಯರ ಕೈಯಲ್ಲಿ ಅಧಿಕಾರ ಇದ್ದರೆ ಗ್ರಾಮ ಅಭಿವೃದ್ದಿಯತ್ತ ಸಾಗುತ್ತದೆ ಎಂಬ ಪರಿಕಲ್ಪನೆಯಿಂದ ರಚನೆಯಾದ ಗ್ರಾಮ ಪಂಚಾಯಿತಿಗಳಿಂದ ಹಳ್ಳಿಗಳ ಅಭಿವೃದ್ದಿ ಮತ್ತು ನಾಯಕತ್ವವನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ನಂಜೇದೇವನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಶೇಖರಪ್ಪ ತಿಳಿಸಿದರು.

ತಾಲೂಕಿನ ನಂಜೇದೇವನಪುರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ತಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಕಾರ್ಯಕಲಾಪ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋದ ನಂತರ ನಮಗೆ ಬಂದ ಸ್ವಾತಂತ್ರ್ಯ ಪರಿಣಾಮವಾಗಿ ಇಂದು ನಾವೆಲ್ಲರು ಧೈರ್ಯವಾಗಿ ಮಾತನಾಡುವ ಹಾಗು ಅಧಿಕಾರ ನಡೆಸುವ ಹಂತಕ್ಕೆ ಬಂದಿದ್ದೇವೆ. ಐದು ದಿನಗಳ ಹಿಂದೆ ನಾವೆಲ್ಲರು ಸ್ವಾತಂತ್ರ್ಯೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದೇವೆ. ಈಗ ವಿದ್ಯಾರ್ಥಿಗಳು ಪಂಚಾಯಿತಿ ಆಡಳಿತ ಮತ್ತು ಕಾರ್ಯವೈಖರಿ ಬಗ್ಗೆ ತಿಳಿದುಕೊಳ್ಳಲು ಆಗಮಿಸಿರುವುದು ಹೆಮ್ಮೆ ಎನ್ನಿಸಿದೆ ಎಂದರು.

ಶಾಲಾ ಹಂತದಲ್ಲಿ ತರಗತಿಗಳಲ್ಲಿ ಪಾಠ ಮಾಡುವ ಜೊತೆಗೆ ವಿದ್ಯಾರ್ಥಿಗಳಿಗೆ ಇಂಥ ಕಚೇರಿಗಳಿಗೆ ಕರೆತಂದು ಅವರಿಗೆ ಪರಿಚಯ ಮಾಡಿಕೊಟ್ಟಾಗ ಅವರು ಮುಂದಿನ ದಿನಗಳಲ್ಲಿ ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿ, ಅಧ್ಯಕ್ಷನಾಗಿ ಸೇವೆ ಮಾಡುವ ಆಸೆ ಮತ್ತು ಪರಿಕಲ್ಪನೆ ಹುಟ್ಟುತ್ತದೆ. ಇದರಿಂದ ಇಲ್ಲಿರುವ ಮಕ್ಕಳು ಮುಂದಿನ ದಿನಗಳಲ್ಲಿ ವಿವಿಧ ಹುದ್ದೆಗಳಿಗೆ ಹೋಗಬಹುದು. ಅಧಿಕಾರಿಗಳಾಗಬಹುದು, ರಾಜಕಾರಣಿಗಳು ಆಗಬಹುದು. ಎಲ್ಲವನ್ನು ತಿಳಿದುಕೊಂಡರೆ ಉತ್ತಮ ಆಡಳಿತ ಹಾಗೂ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಗ್ರಾ.ಪಂ. ಅಭಿವೃದ್ದಿ ಅಧಿಕರಿ ವೀಣಾ ಮಾತನಾಡಿ, ಗ್ರಾಮ ಪಂಚಾಯಿತಿ ಪ್ರಮುಖವಾಗಿ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡುವ ಕೇಂದ್ರವಾಗಿದೆ. ಕುಡಿಯುವ ನೀರು, ಚರಂಡಿ, ರಸ್ತೆ, ಸ್ವಚ್ಚತೆ, ಬೀದಿ ದೀಪ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಹಾಗು ತೆರಿಗೆ ವಸೂಲಿ ಮಾಡಿ ಜನರಿಗೆ ವಿನಿಯೋಗಿಸುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡುವ ಪರಿಕಲ್ಪನೆ ನಮ್ಮದಾಗಿದೆ. ವಿದ್ಯಾರ್ಥಿಗಳು ಸ್ವಚ್ಚತೆ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು. ಪೋಷಕರಿಗೂ ತಿಳಿ ಹೇಳಬೇಕು. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಗ್ರಾಮ ಸಭೆ, ವಾರ್ಡು ಸಭೆಗಳಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳನ್ನು ದಾಖಲು ಮಾಡಬೇಕು ಎಂದರು.

ವಿದ್ಯಾರ್ಥಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನನ್ನಂತೆಯೇ ತಾವುಗಳು ಸಹ ಅಧಿಕಾರಿಗಳಾಗಬೇಕು ಎಂದು ಆಶಿಸಿದರು.
ಗ್ರಾ.ಪಂ. ಸದಸ್ಯ ಬಸವಣ್ಣ ಮಾತನಾಡಿ, ಗಾಂಧೀಜಿ ಅವರು ಸ್ವರಾಜ್ ಪರಿಕಲ್ಪನೆಯೇ ಗ್ರಾಮ ಪಂಚಾಯಿತಿಗಳ ರಚನೆಗೆ ನಾಂದಿಯಾಗಿದೆ. ಹಳ್ಳಿಗಳು ಉದ್ದಾರವಾದರೆ ದೇಶ ಉದ್ದಾರಗುತ್ತದೆ ಎಂದು ಹೇಳಿದ್ದರು. ಆದರಂತೆ ದೆಹಲಿಯಿಂದ ಹಳ್ಳಿಗಳ ವರೆಗೆ ಅಧಿಕಾರ ವಿಕೇಂದ್ರಕರಣ ವಾಗಿದೆ. ಅನುದಾನ ಹಾಗೂ ಅಧಿಕಾರ ಹಂಚಿಕೆಯಾಗುತ್ತಿದೆ. ಇದರಿಂದ ಪ್ರತಿ ಹಳ್ಳಿಗಳಿಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ತಲುಪಲು ಸಹಕಾರಿಯಾಗಿದೆ ಎಂದರು.

ಮತದಾರರ ಸಾಕ್ಷರತಾ ಕ್ಲಬ್ ಸಂಯೋಜಕಿ ಮಂಗಳಮ್ಮ ಮತ್ತು ಶಿಕ್ಷಕಿ ವಿಶಾಲಾಕ್ಷಿ ಅವರು ಮಕ್ಕಳಿಗೆ ಗ್ರಾ.ಪಂ. ಕಾರ್ಯಕಲಾಪಗಳು ನಿಮ್ಮಂಥ ಆಯ್ಕೆಯಾದ ಜನಪ್ರತಿನಿಧಿಗಳು ಇಲ್ಲಿಗೆ ಬಂತು ನಿರ್ವಹಣೆ ಮಾಡುವ ಕಾರ್ಯವಿಧಾನಗಳ ಸವಿಸ್ತಾರವಾಗಿ ತಿಳಿಸಿಕೊಟ್ಟರು.

ಕಾಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚನ್ನಬಸಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಿಕ್ಕಮಾದೇಗೌಡ, ಮಲ್ಲಿಕಾರ್ಜುನಸ್ವಾಮಿ ಇಡಬ್ಲುಎಸ್, ನೌಕರರಾದ ಬೆಳ್ಳಯ್ಯ ಹಾಗೂ ತಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *