ಚಾಮರಾಜನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ವಿತರಿಸಲಾಗುವ ೫ ಕೆಜಿ ಆಹಾರಧಾನ್ಯದ ಬದಲಾಗಿ ಪ್ರತಿ ಕೆಜಿಗೆ ೩೪ ರೂಪಾಯಿಯಂತೆ ಜಿಲ್ಲೆಯಲ್ಲಿರುವ ೨,೩೨,೪೭೮ ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ೧೧,೭೧,೯೩,೭೫೦ ರೂ.ಗಳು ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದ್ದಾರೆ.
ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿಗಳ (ಪಿಎಚ್ಎಚ್) ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ವಿತರಿಸಲಾಗುವ ೫ ಕೆಜಿ ಆಹಾರಧಾನ್ಯದ ಬದಲಾಗಿ ಪ್ರತಿ ಕೆಜಿಗೆ ೩೪ ರೂಪಾಯಿಯಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸುತ್ತಿದ್ದು, ಯೋಜನೆಯಡಿ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ೨,೩೨,೪೭೮ ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ೧೧,೭೧,೯೩,೭೫೦ ರೂಪಾಯಿಗಳನ್ನು ಸಂದಾಯ ಮಾಡಲಾಗಿದೆ.
ಜಿಲ್ಲೆಯಲ್ಲಿ ಉಳಿಕೆ ೨೪,೫೭೨ ಕಾರ್ಡ್ದಾರರ ಖಾತೆಗಳು ಸರಿಯಿಲ್ಲದ ಕಾರಣ ಹಣ ವರ್ಗಾವಣೆ ಸಾಧ್ಯವಾಗಿರುವುದಿಲ್ಲ. ಚಾಮರಾಜನಗರ ತಾಲೂಕಿನಲ್ಲಿ ೭೭೦೭, ಗುಂಡ್ಲುಪೇಟೆ ತಾಲೂಕಿನಲ್ಲಿ ೪೭೧೬, ಹನೂರು ತಾಲೂಕಿನಲ್ಲಿ ೫೨೬೮, ಕೊಳ್ಳೇಗಾಲ ತಾಲೂಕಿನಲ್ಲಿ ೫೨೧೬, ಯಳಂದೂರು ತಾಲೂಕಿನಲ್ಲಿ ೧೬೬೫ ಪಡಿತರ ಚೀಟಿದಾರರು ಸೇರಿ ಒಟ್ಟು ೨೪,೫೭೨ ಪಡಿತರ ಚೀಟಿದಾರರ ಖಾತೆಗಳು ಸರಿಯಾಗಿರುವುದಿಲ್ಲ. ಇಂತಹ ಪಡಿತರ ಚೀಟಿದಾರರ ವಿವರವನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯ ಮುಂದೆ ಪ್ರದರ್ಶಿಸಲಾಗಿದೆ.
ಉಳಿತಾಯ ಖಾತೆ ತೆರೆಯದ ಪಡಿತರ ಚೀಟಿದಾರರಿಗೆ ಅನುಕೂಲವಾಗಲು ಎಲ್ಲಾ ತಾಲೂಕು ಕಚೇರಿಗಳಲ್ಲಿ ಅಂಚೆ ಕಚೇರಿಯ ಮೂಲಕ ಐಪಿಪಿಬಿ (ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕಿಂಗ್) ಅಂಚೆ ಖಾತೆ ತೆರೆಯುವ ಕೇಂದ್ರವನ್ನು ತೆರೆಯಲಾಗಿದೆ. ಎಲ್ಲಾ ಅಂಚೆ ಕಚೇರಿಯಲ್ಲಿಯೂ ಐಪಿಪಿಬಿ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ.
ಆಧಾರ್ ಸಂಖ್ಯೆಯನ್ನು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವವರು, ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದಾಗ ಅಥವಾ ಮುಖ್ಯಸ್ಥರೇ ಇಲ್ಲದಿದ್ದ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಾಗಿರುವುದು, ಬ್ಯಾಂಕಿನಲ್ಲಿ ಇ-ಕೆವೈಸಿ ಪೂರ್ಣಗೊಳಿಸದಿರುವುದು, ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳು ಸಹ ಪಡಿತರ ಪಡೆಯದೇ ಇರುವ ಪಡಿತರ ಚೀಟಿದಾರರಿಗೆ ಹಣ ಜಮೆಯಾಗಿರುವುದಿಲ್ಲ. ಇಂತಹ ಫಲಾನುಭವಿಗಳು ಬ್ಯಾಂಕಿಗೆ ಭೇಟಿ ನೀಡಿ ಅವರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿ, ಖಾತೆಯನ್ನು ಸಕ್ರಿಯಗೊಳಿಸಿದ್ದಲ್ಲಿ ಮಾತ್ರ ಆಗಸ್ಟ್ ಮಾಹೆಗೆ ಸಂಬಂಧಿಸಿದಂತೆ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
