ಬಿಳಿಗೆರೆ : ಅಕ್ಟೋಬರ್ 2 ರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಂದು ಗಾಂಧೀಜಿ ಅವರ ಕನಸಿನ ಸ್ವಚ್ಚ ಗ್ರಾಮ ಭಾರತ ಪರಿಕಲ್ಪನೆಗನುಗುಣವಾಗಿ ಇಡೀ ಒಂದು ಹಳ್ಳಿಯನ್ನು ಸ್ವಚ್ಛಗೊಳಿಸುವ ಮೂಲಕ ಅನ್ವೇಷಣಾ ಕಾಲೇಜಿನ ವಿದ್ಯಾರ್ಥಿಗಳು ಸಾರ್ಥಕತೆ ಮೆರೆದರು.

ಹುಣಸೂರು ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿರುವ ಅನ್ವೇಷಣಾ ಪದವಿ ಪೂರ್ವ ಕಾಲೇಜಿನ ಇನ್ನೂರ ಎಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಕ್ಕದ ಮಾರಗೌಡನ ಹಳ್ಳಿಯ ಬೀದಿ ಬೀದಿಗಳನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿಗೊಂದು ಅರ್ಥ ಮೂಡಿಸಿದರು.
ಮೊದಲಿಗೆ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾತ್ಮರನ್ನು ಸ್ಮರಿಸಿದ ನಂತರ ಮಾರಗೌಡನ ಹಳ್ಳಿಗೆ ತೆರಳಿ ಹಳ್ಳಿಯ ಹೆದ್ದಾರಿಯಿಂದ ಸ್ವಚ್ಛತಾ ಕಾರ್ಯವನ್ನು ಆರಂಭಿಸಿ ಹಳ್ಳಿಯ ಬೀದ್ಥ್ಭಿ ಬೀದಿಗಳನ್ನು ಸ್ವಚ್ಛಗೊಳಿಸುವ ಮೂಲಕ ಜನರಿಗೆ ಪ್ಲಾಸ್ಟಿಕ್ ಮುಕ್ತ ಹಳ್ಳಿಯ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ತಮ್ಮ ಹಳ್ಳಿಗೆ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದನ್ನು ನೋಡಿದ ಗ್ರಾಮಸ್ಥರು ಸಂತೋಷದಿಂದ ವಿದ್ಯಾರ್ಥಿಗಳಿದ್ದಲ್ಲಿಗೆ ಬಂದು ಚಹಾ, ಜ್ಯೂಸ್ಗಳನ್ನು ತಂದು ಕೊಡುತ್ತಾ ತುಂಬು ಮನಸ್ಸಿನಿಂದ ಬೆಂಬಲ ನೀಡಿದ್ದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಂತಸ ಮೂಡಲು ಕಾರಣವಾಯಿತು.
ಸ್ವಚ್ಛತಾ ಕಾರ್ಯ ಮುಗಿದ ನಂತರ ಗ್ರಾಮದ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳನ್ನೆಲ್ಲಾ ಕೂರಿಸಿ ಗಾಂಧೀ ಹಾಗೂ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಗ್ರಾಮದ ಮುಖಂಡರುಗಳಾದ ಪುಟ್ಟನಿಂಗಪ್ಪ, ಶಿವಕುಮಾರ್, ಕಾಂತರಾಜೇಗೌಡ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದರಾಜು ಅವರುಗಳು ಮಾತನಾಡಿ ನಾವುಗಳು ನಮ್ಮ ನಮ್ಮ ಮನೆಯ ಮುಂದಿನ ಕಸ ಗುಡಿಸಲು ಹಿಂದೆ ಮುಂದೆ ನೋಡುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳೆಲ್ಲಾ ಬಂದು ನಮ್ಮ ಊರಿನ ಕಸ ಗುಡಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ ಎಂದು ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಅನ್ವೇಷಣಾ ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಕೆ.ಚಂದ್ರಮೋಹನ್, ಪ್ರಾಂಶುಪಾಲ ಹೆಚ್.ಎನ್.ಗಿರೀಶ್ ಅವರ ನೇತೃತ್ವದಲ್ಲಿ ಆರಂಭವಾದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಆಶಾನಂದೀಶ್, ಕಾರ್ಯಕ್ರಮದ ಸಂಚಾಲಕರುಗಳಾದ ರಘುನಂದನ್, ರವಿಚಂದ್ರ, ಉಪನ್ಯಾಸಕರುಗಳಾದ ಆಶಾರಾಣಿ, ರೂಹಿ ಅಫ್ಸಾನ, ವಸೀಂ ಪಾಷಾ, ಖುತೇಜ, ಸುಬ್ಬುಕೃಷ್ಣ, ರಶ್ಮಿ, ಪುನೀತ್ ಕುಮಾರ್, ವಿಷ್ಣು, ಪೂಜಾ, ಕಾವ್ಯಾ, ಕಾವ್ಯಶ್ರೀ, ಸೌಂದರ್ಯ ಹಾಗೂ ಸಂಸ್ಥೆಯ ವಾಹನ ಚಾಲಕರುಗಳು ಪಾಲ್ಗೊಂಡಿದ್ದರು.