ಅಮೃತ ವಿದ್ಯಾರ್ಥಿಗಳಿಂದ ಬಾಪುಗೆ “ಸ್ವಚ್ಛಾಂಜಲಿ”

ಮೈಸೂರು: ಗಾಂಧಿ ಜಯಂತಿಯ ಅಂಗವಾಗಿ ಬೋಗಾದಿ ಎರಡನೇ ಹಂತದಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನ ಸುತ್ತಮುತ್ತಲಿನ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಅ.1 ರಂದು ನಡೆಸಲಾಯಿತು.

ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್, ಮಾತಾ ಅಮೃತಾನಂದಮಯಿ ಮಠ ಮೈಸೂರು, ಹಾಗೂ ಅಮೃತಕೃಪ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಈ ಶ್ರಮದಾನವನ್ನು ವಾರ್ಡ್ ನಂ.44ರ ಪಾಲಿಕೆ ಸದಸ್ಯೆ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಮುಖ್ಯಸ್ಥೆ ಸವಿತಾ ಸುರೇಶ್ ಉದ್ಘಾಟಿಸಿದರು.

ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿರುವ ನಿಟ್ಟಿನಲ್ಲಿ ಒಂದು ಗಂಟೆಯ ಶ್ರಮದಾನ ಮಾಡುವ ಮೂಲಕ ಗಾಂಧಿಯವರಿಗೆ ‘ಸ್ವಚ್ಛಾಂಜಲಿ’ ಸಲ್ಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಪ್ರಧಾನಿಯವರ ಕರೆಗೆ ಪ್ರತಿಸ್ಪಂದನೆಯಾಗಿ ‘ಕಸ ಮುಕ್ತ ಭಾರತʼವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಶ್ರಮದಾನವನ್ನು ಮಾಡಲಾಯಿತು. ಅಮೃತ ವಿಶ್ವವಿದ್ಯಾಪೀಠಂ ಹಾಗೂ ಅಮೃತಕೃಪ ಆಸ್ಪತ್ರೆಯ 200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಈ ಶ್ರಮದಾನದಲ್ಲಿ ಭಾಗಿಯಾದರು.

ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‍ನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್, ಅಕ್ಯಾಡೆಮಿಕ್ ಕೋರ್ಡಿನೇಟರ್ ಡಾ.ರೇಖಾ ಭಟ್, ಅಮೃತ ಕೃಪ ಆಸ್ಪತ್ರೆಯ ಡಾ. ವಿಕಾಸ್ ಮೋದಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *