ಚಾಮರಾಜನಗರ: ಪ್ರಸಿದ್ದ ಯಾತ್ರಾ ಸ್ಥಳ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ಕುಂಭಾಭಿಷೇಕ ಹಾಗೂ ವಿಶೇಷ ಪೂಜೆ ಅಭಿಷೇಕ ನಡೆಯಲಿವೆ.
ಕ್ಷೇತ್ರದ ಬೃಹನ್ಮಠಾಧ್ಯಕ್ಷರಾದ ಪ್ರಣವ ಶ್ರೀ ಪಟ್ಟದ ಶಾಂತಮಲ್ಲಿಕಾರ್ಜುನಸ್ವಾಮಿಗಳ ಸಾನಿಧ್ಯದಲ್ಲಿ ಆಗಸ್ಟ್ ೧೭ರ ಗುರುವಾರ ಬೆಳಿಗ್ಗೆ ೧೦.೫೫ ರಿಂದ ೧೨ ಗಂಟೆಯೊಳಗೆ ೧೦೮ ಕುಂಭಗಳ ಉತ್ಸವ ಮತ್ತು ಶ್ರೀ ಸ್ವಾಮಿಗೆ ಅಭಿಷೇಕಗಳೊಂದಿಗೆ ಶ್ರಾವಣ ಮಾಸದ ಪೂಜೆ ಪ್ರಾರಂಭವಾಗಲಿದೆ.
ಶ್ರಾವಣ ಮಾಸದ ಪರ್ಯಂತ ಸೇವೆಗಳು ನಡೆಯಲಿದೆ. ಪಂಚ ಕಳಸ ಸಮೇತ ನವರತ್ನ ಕಿರೀಟಧಾರಣೆ ಸೇವೆಗೆ ೧೦೦೦ ರೂ., ಸಹಸ್ರ ಕುಂಭಾಭಿಷೇಕ ಸೇವೆಗೆ ೭೫೦ ರೂ., ಸಹಸ್ರ ರುದ್ರಾಭಿಷೇಕ ಸೇವೆ, ಲಕ್ಷ ಬಿಲ್ವಾರ್ಚನೆ ಸೇವೆ ಹಾಗೂ ಸಹಸ್ರ ವಾಹನೋತ್ಸವಕ್ಕೆ ತಲಾ ೩೦೦ ರೂ. ನಿಗದಿ ಮಾಡಲಾಗಿದೆ.
ಭಕ್ತಾಧಿಗಳು ನೇರವಗಿ ಬರಲು ಸಾಧ್ಯವಿಲ್ಲದಿದ್ದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯವರ ಹೆಸರಿಗೆ ಸೇವೆಯ ಮೊಬಲಗನ್ನು ಮನಿಯಾರ್ಡರ್ ಮೂಲಕ ಕಳುಹಿಸಿ ಸೇವೆಯನ್ನು ಸಲ್ಲಿಸಬಹುದು.
ಸೆಪ್ಟೆಂಬರ್ ೧೪ರ ಗುರುವಾರ ಬೆಳಿಗ್ಗೆ ೧೦.೫೦ ರಿಂದ ೧೧.೪೦ ಗಂಟೆಯೊಳಗೆ ೧೦೮ ಕುಂಭಗಳ ಉತ್ಸವ ಮತ್ತು ಶ್ರೀ ಸ್ವಾಮಿಗೆ ಅಭಿಷೇಕಗಳೊಂದಿಗೆ ಶ್ರಾವಣ ಮಾಸದ ಸೇವೆಗಳು ಮುಕ್ತಾಯವಾಗಲಿದೆ ಎಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಗೀತಾ ಹುಡೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.