ಮೈಸೂರು: ʼಉತ್ತಮ ಸಮಾಜಕ್ಕೆ ಕುಟುಂಬ ವ್ಯವಸ್ಥೆ ತುಂಬಾ ಮುಖ್ಯ. ಮೊದಲೆಲ್ಲ ಇದ್ದ ಅವಿಭಕ್ತ ಕುಟುಂಬಗಳು ಸುವ್ಯವಸ್ಥಿತ ಸಮಾಜದ ಭದ್ರ ಬುನಾದಿಯಾಗಿದ್ದವು. ಆದರೆ ಈಗ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿವೆ. ಇದರ ಜೊತೆಗೆ ಎಲ್ಲೋ ಸಾಮಾಜಿಕ ಭದ್ರತೆಯೂ ಕಡಿಮೆಯಾಗುತ್ತಿದೆʼ ಎಂದು ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಶಿವಕುಮಾರ್ ಹೇಳಿದರು.

ಮಾತಾ ಅಮೃತಾನಂದಮಯಿಯವರ ಎಪ್ಪತ್ತನೇ ಜನ್ಮದಿನದ ಪ್ರಯುಕ್ತ ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್, ಅಮೃತ ಕೃಪಾ ಆಸ್ಪತ್ರೆ ಹಾಗೂ ಮಾತಾ ಅಮೃತಾನಂದಮಯಿ ಮಠ ಮೈಸೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ ʼಸೇವನವಾರಂʼ ಕಾರ್ಯಕ್ರಮದ ಉಚಿತ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
ಸಮಾಜ ವ್ಯವಸ್ಥೆಯಲ್ಲಿ ಕುಟುಂಬದ ಪಾತ್ರವನ್ನು ವಿವರಿಸಿದ ಅವರು ಅವಿಭಕ್ತ ಕುಟುಂಬಗಳು ಒಬ್ಬ ವ್ಯಕ್ತಿಯ ಸೋಲಿಗೆ, ಗೆಲುವಿಗೆ ಬೆನ್ನೆಲುಬಾಗಿ ನಿಲ್ಲುತ್ತವೆ. ವ್ಯಕ್ತಿಯ ಮಾನಸಿಕ ಬೆಂಬಲವಾಗಿ ಈ ಕುಟುಂಬಗಳು ಇರುತ್ತವೆ ಎಂದು ಅವರು ಹೇಳಿದರು.

ತಾಯಿಯ ಜವಾಬ್ದಾರಿಯ ಬಗ್ಗೆ ಮಾತನಾಡಿದ ಶಿವಕುಮಾರ್ ಅವರು, ಮಕ್ಕಳು ಏನು ಮಾಡುತ್ತಿದ್ದಾರೆ ಹಾಗೂ ಹೇಗೆ ವರ್ತಿಸುತ್ತಿದ್ದಾರೆ ಎಂಬುದರ ಬಗ್ಗೆ ಇಂದಿನ ತಾಯಂದಿರು ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇಂದಿನ ಮಕ್ಕಳಿಗೆ ಸಾಕಷ್ಟು ಆಕರ್ಷಣೆಗಳಿದ್ದು ಕೆಲವು ಸಲ ಅವರು ಹಾದಿ ತಪ್ಪುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮಕ್ಕಳ ವರ್ತನೆಗಳ ಬಗ್ಗೆ ತಾಯಂದಿರು ಗಮನ ಕೊಡಲೇಬೇಕಾದ ಅವಶ್ಯಕತೆಯಿದೆ ಎಂದು ಅವರು ಎಚ್ಚರಿಕೆಯ ನುಡಿಗಳನ್ನು ಹೇಳಿದರು.
ಇಂದು ಮಕ್ಕಳನ್ನು ಆವರಿಸುತ್ತಿರುವ ಮೊಬೈಲ್ ಗೀಳು ಹಾಗೂ ಮಾದಕ ದ್ರವ್ಯ ವ್ಯಸನದ ಬಗ್ಗೆ ಮಾತನಾಡಿದ ಅವರು ಹೆಚ್ಚಿನ ಯುವಜನತೆ ಈ ದುರಭ್ಯಾಸಗಳಿಗೆ ಬಲಿಪಶುವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಂದೆ-ತಾಯಿ ಜೊತೆಗಿದ್ದು ಮಕ್ಕಳ ಬಗ್ಗೆ ಗಮನ ನೀಡಬೇಕು. ತಾಯಿಯ ಅಪ್ಪುಗೆ ಹಾಗೂ ತಂದೆಯ ಮಾರ್ಗದರ್ಶನ ಮಕ್ಕಳಿಗೆ ಅವಶ್ಯಕವಾಗಿ ಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸೇವನವಾರಂ ಭಾಗವಾಗಿ ಅರ್ಹ ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ಹಾಗೆಯೇ ಮಹಿಳಾ ಸಬಲೀಕರಣದ ಭಾಗವಾಗಿ ಮಾತಾ ಅಮೃತಾನಂದಮಯಿಯವರು ನಡೆಸುತ್ತಿರುವ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರವನ್ನು ನೀಡಲಾಯಿತು.
ಇದರ ಜೊತೆಗೆ ಲೋಕಕಲ್ಯಾಣಾರ್ಥವಾಗಿ ಬ್ರಹ್ಮಸ್ಥಾನಂ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮವನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ವಸ್ವರೂಪಾನಂದ ಪುರಿ ಯತಿಗಳು, ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥ ಬ್ರಹ್ಮಚಾರಿ ಪ್ರಸಾದಾಮೃತಾನಂದ ಚೈತನ್ಯ, ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ಸಂಚಾಲಕ ಮುಕ್ತಿದಾಮೃತ ಚೈತನ್ಯ, ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್, ಅಮೃತ ಕೃಪಾ ಆಸ್ಪತ್ರೆಯ ಡಾ.ವಿಕಾಸ್ ಮೋದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೇವನವಾರಂ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮಗಳು: ಮಾತಾ ಅಮೃತಾನಂದಮಯಿಯವರ ಎಪ್ಪತ್ತನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿರುವ ಸೇವನವಾರಂ ಭಾಗವಾಗಿ ವಿವಿಧ ಕಾರ್ಯಕ್ರಮಗಳನ್ನು ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್, ಮಾತಾ ಅಮೃತಾನಂದಮಯಿ ಮಠ ಮೈಸೂರು ಹಾಗೂ ಅಮೃತ ಕೃಪಾ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಲಾಗಿದೆ.
ಕೆ. ಆರ್. ಆಸ್ಪತ್ರೆಯ ವಿಶೇಷ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ 71 ದಾನಿಗಳು ತಮ್ಮ ರಕ್ತವನ್ನು ದಾನ ಮಾಡಿದರು.
ಹಳ್ಳಿಬೋಗಾದಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ವಿಶ್ವವಿದ್ಯಾಪೀಠಂನ ವಿದ್ಯಾರ್ಥಿಗಳು ಶೈಕ್ಷಣಿಕ ಸಹಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲೆಯ ಮಕ್ಕಳಿಗೆ, ಸಂವಹನಾ ಕೌಶಲ್ಯ, ಪೇಪರ್ ಬ್ಯಾಗ್ ತಯಾರಿಕೆ ಹಾಗೂ ಚಾಕ್ಪೀಸ್ ತಯಾರಿಕೆಯ ಕಾರ್ಯಾಗಾರವನ್ನು ಮಾಡಲಾಯಿತು. ಜೊತೆಗೆ ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ ಹಾಗೂ ಜಾಮಿಟ್ರಿ ಬಾಕ್ಸ್ಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಕರುಣೆ ಹಾಗೂ ಸಹಾನುಭೂತಿಯ ಭಾವಗಳನ್ನು ಬೆಳೆಸುವುದಕ್ಕಾಗಿ ವೃದ್ಧಾಶ್ರಮ ಭೇಟಿಯನ್ನು ಆಯೋಜಿಸಲಾಗಿತ್ತು. ಆಶ್ರಮಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಹಿರಿಯರೊಂದಿಗೆ ಕೆಲ ಸಮಯ ಕಳೆದು ಅವರಿಗೆ ದಿನಬಳಕೆಯ ವಸ್ತುಗಳು ಹಾಗೂ ವಸ್ತ್ರಗಳನ್ನು ನೀಡಿದರು.