ಬೆಳಕಿನ ಗೆರೆಗಳ ಮೂಡಿಸಿ ಬನದಿ ನಿಂತರು ಮನದಲಿ ಇವರು, ಕತ್ತಲಿಗೂ ಬೆಳಗುವ ಭಾವವ ಕಲಿಸಿ ಜ್ಞಾನವ ಬಿತ್ತಿದವರಿವರು, ಮಾನವ ಮತಿಗೆ ಸಾಣೆಯ ಹಿಡಿದು ಹರಿತ ಮಾಡಿದವರಿವರು, ಭಾರತ ಮಾತೆ ಈ ತನುಜಾತೆ ಎಂದು ಹಾಡಿದ ಕವಿಕೋಗಿಲೆ ಇವರು, ಸರ್ವಜನಾಂಗದ ಶಾಂತಿಯ ತೋಟಕೆ ಕೈಬೀಸಿ ಕರೆದವರಿವರು, ಕನ್ನಡ ಮಾತೆಯ ಹೆಮ್ಮೆಯ ಪುತ್ರ ಕುವೆಂಪು ಎಂಬುದೇ ಇವರ ಹೆಸರು.
ನಾಡಿನ ಕಂಪು ಕವಿ ಕುವೆಂಪು, ಒಂದೊಂದು ಕವನದಲ್ಲು ಇಣಿಕಿಹುದು ಇಂಪು, ಎದೆಯಾಳದ ಭಾವಗಳ ರಸಪಾಕದ ಪೆಂಪು, ಧಗೆ ದಹಿಸಿ ಹೊಗೆಯ ಇಲ್ಲವಾಗಿಸಿ ಮನಕೆ ತರುವವು ತಂಪು,
ಬರೆದ ಸಾಹಿತ್ಯದ ಕವಲುಗಳು ಹತ್ತಾರು, ಕಾವ್ಯದ ಗೊಂಚಲು ಕೊಳಲು-ಮಹಾಕಾವ್ಯದ ನರ್ತನ ಶ್ರೀರಾಮಾಯಣ ದರ್ಶನ, ಕಾದಂಬರಿಯ ಒಡತಿ ಕಾನೂರು ಸುಬ್ಬಮ್ಮ ಹೆಗ್ಗಡತಿ, ನಾಟಕದ ಒಡಲು ಬೆರಳ್ಗೆ ಕೊರಳು, ಲಲಿತ ಪ್ರಬಂಧದ ಮೆರುಗು ಮಲೆನಾಡಿನ ನಿಸರ್ಗ ಮಾತೆಯ ಸೆರಗು, ಸಣ್ಣಕತೆಯ ತವರು ಸನ್ಯಾಸಿ ಮತ್ತು ನನ್ನ ದೇವರು, ಮಕ್ಕಳ ಸಾಹಿತ್ಯಕ್ಕೆ ಮೋಡಣ್ಣನ ತಮ್ಮ-ಅಮಲನ ಕಥೆ, ವೈಚಾರಿಕ ನೆಲೆಯ ಕದನ ವಿಚಾರ ಕ್ರಾಂತಿಗೆ ಆಹ್ವಾನ, ಕನ್ನಡತ್ವದ ಕೊನರು ನಾಡಗೀತೆಯ ಸೊಡರು, ಮಾವನೀಯತೆಯ ಕೋಶ ವಿಶ್ವಮಾನವ ಸಂದೇಶ,
ಪಡೆದ ಗೌರವದ ಗರಿಗಳು ನೂರಾರು ಮುಕುಟ ಮಣಿಯಲ್ಲಿ ಜ್ಞಾನಪೀಠ, ಪಂಪನ ಕಂಪಿನಲ್ಲಿ ಪಂಪ ಪ್ರಶಸ್ತಿ, ಕೇಂದ್ರ ಸರ್ಕಾರದ ಸಾಹಿತ್ಯ ಅಕಾಡೆಮಿ, ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕವಿಗಳ ಕವಿ ರಾಷ್ಟ್ರಕವಿ, ನಿಸರ್ಗದ ರಮಣೀಯತೆಯಲಿ ಕನ್ನಡದ ವರ್ಡ್ಸ್ವರ್ತ್, ಚಿನ್ನ-ಮುತ್ತು-ರತ್ನದ ನಿರ್ಲಿಪ್ತ ಭಾವಕೆ ಕರ್ನಾಟಕ ರತ್ನ,
ಕವಿ ಕುವೆಂಪು ಕೇವಲ ವ್ಯಕ್ತಿ ಅಲ್ಲ ನಾಡಿಮಿಡಿತದ ಶಕ್ತಿ, ಜಗದ ಕವಿ-ಯುಗದ ಕವಿಯಾಗಿ ಮನದ ಬಯಲನ್ನು ಬೆರಗುಗೊಳಿಸಿದ ಧೀಶಕ್ತಿ, ಕುವೆಂಪು ನಾಡಿನ ಅನರ್ಘ್ಯ ಸಂಪತ್ತು, ಅಕ್ಷರ ಜಗದಲ್ಲಿ ಅಕ್ಷಯವಾಗುಳಿದ ಕಣ್ಮಣಿ ಬೆಲೆಕಟ್ಟಲಾಗದ ಮುತ್ತು.
-ಪರಮೇಶ ಕೆ.ಉತ್ತನಹಳ್ಳಿ, ಕನ್ನಡ ಉಪನ್ಯಾಸಕ ಹೂಗೂ ಹವ್ಯಾಸಿ ಬರಹಗಾರ, ಮೈಸೂರು.