ಗುಣಮಟ್ಟದ ಹಾಲು ಸಂಗ್ರಹಣೆಯಿಂದ ಡೇರಿಗೆ ಹೆಚ್ಚಿನ ಲಾಭ : ಸದಾಶಿವಮೂರ್ತಿ
ಚಾಮರಾಜನಗರ: ಡೇರಿ ಗುಣಮಟ್ಟದ ಹಾಲು ಶೇಖರಣೆ ಮಾಡಿದ ಪರಿಣಾಮ ೪.೬೬ ಲಕ್ಷ ರೂ.ಗಳ ನಿವ್ವಳ ಲಾಭ ಪಡೆದುಕೊಂಡಿದ್ದು, ೨.೧೮ ಲಕ್ಷ ರೂ.ಗಳ ಬೋನಸ್ ಹಾಲು ಉತ್ಪಾದಕರಿಗೆ ನೀಡುವುದಾಗಿ ಕರಿನಂಜನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿದ್ದವೀರಪ್ಪ ತಿಳಿಸಿದರು.
ತಾಲೂಕಿನ ಕರಿನಂಜನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಿನಂಜನಪುರ ಡೇರಿ ಪಟ್ಟಣಕ್ಕೆ ಸೇರ್ಪಡೆಯಾಗಿದ್ದರು ಸಹ ಹೆಚ್ಚಿನ ರೈತರು ಹೈನುಗಾರಿಕೆಯನ್ನು ಮೂಲ ವೃತ್ತಿಯನ್ನಾಗಿಸಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಗುಣಮಟ್ಟದ ಹಾಲು ಶೇಖರಣೆ ಮಾಡುತ್ತಿರುವುದರಿಂದ ಸ್ಥಳೀಯವಾಗಿ ಹಾಲಿನ ಮಾರಾಟ ಹೆಚ್ಚಳವಾಗಿದೆ. ರೈತರು ಸಹ ಡೇರಿ ಹಾಗೂ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ಮೂಲಕ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ , ಕೆಎಂಎಫ್ ಹಾಗೂ ಒಕ್ಕುಟ ಸರ್ಕಾರದ ಮೇಲೆ ಒತ್ತಡ ತಂದು ರೈತರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ೩ ರೂ. ನೀಡಲಾಗುತ್ತಿದೆ.ಇದರೊಟ್ಟಿಗೆ ರೈತರು ರಾಸುಗಳಿಗೆ ಶೇ. ೫೦ ರ ರಿಯಾಯಿತಿಯಲ್ಲಿ ವಿಮೆ ಸೌಲಭ್ಯ, ರೈತ ಕಲ್ಯಾಣ ಟ್ರಸ್ಟ್ನಿಂದ ವಿದ್ಯಾರ್ಥಿ ವೇತನ, ಪರಿಹಾರ ಧನ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ರೈತ ಸಂಸ್ಥೆಗಳ ಬೆಳವಣಿಗೆ ಹೆಚ್ಚಿನ ಅದ್ಯತೆ ನೀಡಬೇಕು ಎಂದು ತಿಳಿಸಿದರು.
ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಕರಿನಂಜನಪುರ ಡೇರಿ ತಾಲೂಕಿಗೆ ಮಾದರಿ ಸಂಘವಾಗಿದೆ. ಲೆಕ್ಕಪತ್ರಗಳ ಎ ಗ್ರೇಡ್ ಹೊಂದಿದ್ದು, ಸ್ಥಳೀಯವಾಗಿ ಹಾಲು ಮಾರಾಟವು ಸಹ ಹೆಚ್ಚಿದೆ. ಪ್ರತಿ ದಿನ ೨೧,೮೩೮ ರೂ. ಹಾಲು ಮಾರಾಟವಾಗುತ್ತಿದೆ. ಇದರಿಂದಲೇ ಉತ್ಪಾದಕರು ಹೆಚ್ಚಿನ ಬೋನಸ್ ಪಡೆದುಕೊಂಡಿದ್ಧಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಡೇರಿಯನ್ನು ಅಭಿವೃದ್ದಿಪಡಿಸಲು ನಮ್ಮೆಲ್ಲರ ಸಹಕಾರ ಇರುತ್ತದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೃಷಬೇಂದ್ರ ವಾರ್ಷಿಕ ವರದಿಯನ್ನು ಮಂಡಿಸಿ, ಪ್ರಸಕ್ತ ವರ್ಷದಲ್ಲಿ ಸಂಘವು ೩೭,೫೯,೨೩೭ ರೂ.ಗಳ ಹಾಲು ಖರೀದಿ ಮಾಡಿದೆ. ೪,೬೬,೧೧೬ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಇದರಲ್ಲಿ ಉತ್ಪಾದಕರಿಗೆ ೨,೧೮,೭೧೪ ರೂ.ಗಳ ಬೋನಸ್ ಅನ್ನು ವಿತರಿಸಲಾಗುತ್ತದೆ ಎಂದು ಅನುಮೋದನೆ ಪಡೆದುಕೊಂಡರು.
ಸಂಘದ ಉಪಾಧ್ಯಕ್ಷ ಮಹದೇವೇಗೌಡ, ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ. ಅಮರ್, ವಿಸ್ತಾರಣಾಧಿಕಾರಿ ಭಾಗ್ಯರಾಜ್, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಪ್ಪ, ನಿರ್ದೇಶಕರಾದ ಗುರುಸ್ವಾಮಿ, ಪಿ. ಬಸವಣ್ಣ, ಕೆ.ಎಸ್. ಶಶಿಕಿರಣ್, ಕೆ.ಎಂ. ನಾಗಮಲ್ಲಪ್ಪ, ಕೆ.ಪಿ. ನಾಗೇಂದ್ರ, ಮಹದೇವಪ್ಪ, ಕೆ.ಸಿ. ಸೋಮಣ್ಣ, ಕೆ. ಪುಟ್ಟಸ್ವಾಮಿ, ರತ್ನಮ್ಮ, ಚಂದ್ರಮ್ಮ, ನೌಕರರಾದ ನಂಜುಂಡ, ಬಿ. ಮಹೇಂದ್ರ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.