ಚಾಮರಾಜನಗರ: ತಾಲೂಕಿನ ಸಾಗಡೆ ಗ್ರಾ.ಪಂ.ಗೆ ಸೇರಿದ ಕುಮಚಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.

ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆಎಲ್ಎಂ ಸ್ವಾಮಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚನೆ ಮಾಡುವ ಮೂಲ ಅದರ್ಶ ಪುರುಷ ರಾಮನನ್ನು ಜಗತ್ತಿಗೆ ಪರಿಚಯಿಸಿದರು. ಅವರ ಜೀವನ, ಬದುಕು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜು ಮಾತನಾಡಿ, ಜಗತ್ತಿಗೆ ಅದ್ಬುತವಾದ ರಾಮಾಯಣ ಮಹಾ ಕಾವ್ಯವನ್ನು ಸೃಷ್ಟಿಸಿ ಕೊಟ್ಟ ಮಹರ್ಷಿ ವಾಲ್ಮೀಕಿ ನಮ್ಮೆಲ್ಲರಿಗೂ ಅದರ್ಶವಾಗಿದ್ದಾರೆ. ಬೇಡ ಕುಲದಲ್ಲಿ ಹುಟ್ಟಿದ ವಾಲ್ಮೀಕಿ ತಪಸ್ಸು ಶಕ್ತಿಯನ್ನು ಹೊಂದಿ, ಸಮಾಜದ ಅಭಿವೃದ್ದಿಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡರು. ಇಂಥ ಮಹಾಪುರುಷರ ಜಯಂತಿಯನ್ನು ಆಚರಣೆ ಮಾಡುತ್ತಿರುವ ನಾವೆಲ್ಲರು ಪುಣ್ಯವಂತರು ಅವರ ತತ್ವ ಅದರ್ಶವನ್ನು ಮೈಗೂಡಿಸಿಕೊಳ್ಳೋಣ ಎಂದರು.
ಸಹ ಶಿಕ್ಷಕ ನಂಜುಂಡಸ್ವಾಮಿ ಹಾಗು ವಿದ್ಯಾರ್ಥಿಗಳು ಇದ್ದರು.