
ಚಾಮರಾಜನಗರ: ಕೇಂದ್ರ ಸರ್ಕಾರವು ವಿಶ್ವಕರ್ಮ ಅಭಿವೃದ್ದಿಗಾಗಿ ೧೫ ಸಾವಿರ ಕೋಟಿ ರೂ.ಗಳ ಯೋಜನೆ ಘೋಷಣೆ ಮಾಡಿರುವುದಕ್ಕೆ ಬಿಜೆಪಿ ನಗರ ಮಂಡಲದ ಹಿಂದುಳಿದ ಮೋರ್ಚಾದ ಅಧ್ಯಕ್ಷ ಎಸ್. ನಂದೀಶ್ ವಿಶ್ವಕರ್ಮ ಸ್ವಾಗತಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು ೯ ವರ್ಷಗಳ ಯಶಸ್ವಿ ಆಡಳಿತದಲ್ಲಿ ಬಡವರು, ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರನ್ನು ಆರ್ಥಿಕವಾಗಿ ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ೭೬ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನರಿಗೆ ನೀಡಿದ ಸ್ವಾತಂತ್ರೋತ್ಸವ ಸಂದೇಶದ ಸಂದರ್ಭದಲ್ಲಿ ವಿಶೇಷವಾಗಿ ವಿಶ್ವಕರ್ಮ ಸಮಾಜದ ಬಗ್ಗೆ ಆಪಾರವಾದ ಕಾಳಜಿ ಹೊಂದಿ ವಿಶ್ವಕರ್ಮ ಸಮಾಜದ ಬಂಧುಗಳು ಕುಲಕಸುಬಗಳನ್ನು ಪ್ರೋತ್ಸಾಹಿಸಲು ೧೫ ಸಾವಿರ ಕೋಟಿ ರೂ.ಗಳನ್ನು ಪ್ರಥಮ ಬಾರಿಗೆ ಘೊಷಣೆ ಮಾಡಿರುವುದು ಅವರ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ವಿಶ್ವಕರ್ಮ ಸಮಾಜದಲ್ಲಿರುವ ಸಣ್ಣ ಸಣ್ಣ ನೂರಾರು ಶ್ರಮಿಕ ಸಮಾಜದ ಪಾರಂಪರಿಕ ಕುಲ ಕುಸುಬಗಳನ್ನು ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳನ್ನು ವಿಶ್ವಕರ್ಮ ಸಮಾಜದ ಸಾಂಪ್ರಾದಾಯಿಕ ಕೌಶಲ್ಯಹೊಂದಿರುವ ಸಮುದಾಯಗಳಿಗೆ ಹೊಸ ಹೊಸ ಅವಕಾಶ ಕಲ್ಪಿಸುವ ವಿಶ್ವಕರ್ಮ ಯೋಜನೆಯನ್ನು ಸೆ. ೧೭ರ ವಿಶ್ವಕರ್ಮ ಜಯಂತಿ ಯಂದೇ ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನ ಮಾಡಿರುವುದು ಸ್ವಾಗತಾರ್ಹ ಎಂದು ಎಸ್.ನಂದೀಶ್ ವಿಶ್ವಕರ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.