ಚಾಮರಾಜನಗರ: ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕೊಂಬುಡಿಕ್ಕಿ ಹಾಡಿಗೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲುಗಳನ್ನು ಆಲಿಸಿದರು.
ಹಾಡಿಯ ಜನರೊಂದಿಗೆ ಸಂವಾದ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಪಡಿತರ ಸರಿಯಾಗಿ ಸಿಗುತ್ತಿದೆಯೇ, ಅಕ್ಕಿ ಬದಲಿಗೆ ನೀಡುತ್ತಿರುವ ಹಣ ಖಾತೆಗೆ ಜಮೆಯಾಗುತ್ತಿದೆಯೇ, ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆಯೇ ಎಂದು ಪ್ರಶ್ನಿಸಿದರು.

ಕೆಲ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ಆಗಿದ್ದು, ಇದರಿಂದ ಸೌಲಭ್ಯ ಲಭಿಸುತ್ತಿಲ್ಲ. ಎಪಿಎಲ್ ಕಾರ್ಡ್ನ್ನು ಬಿಪಿಎಲ್ ಕಾರ್ಡ್ಗೆ ಬದಲಾಯಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿದರು. ಈ ಸಂಬಂಧ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸುವಂತೆ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಡಿಯಲ್ಲಿರುವ ಅಂಗನವಾಡಿ ಸೋರುತ್ತಿದೆ. ಶಾಲಾ ಕಟ್ಟಡವು ಶಿಥಿಲಿವಾಗಿದೆ. ಹಾಡಿ ಸಂಪರ್ಕಿಸುವ ರಸ್ತೆ ಹಾಳಾಗಿದೆ. ಈ ಎಲ್ಲವನ್ನು ಸರಿಪಡಿಸಬೇಕೆಂದು ಜನರು ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವರು ಶಿಥಿಲಗೊಂಡಿರುವ ಶಾಲಾ ಅಂಗನವಾಡಿ ಕಟ್ಟಡಗಳನ್ನು ಸರಿಪಡಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ವಿಪತ್ತು ಪರಿಹಾರ ನಿಧಿ ಯೋಜನೆಯಡಿ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದರು.
ಹಾಡಿಗೆ ದಿನಕ್ಕೆ ಎರಡು ಬಾರಿ ಮಾತ್ರ ಬಸ್ ಬರುತ್ತಿದೆ. ಇದರ ಅವಧಿಯನ್ನು ಹೆಚ್ಚಿಸಬೇಕು. ಮನೆಗಳನ್ನು ನಿರ್ಮಿಸಿ ಕೊಡಬೇಕು. ಇತರೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ಎಷ್ಟು ಜನರಿಗೆ ಮನೆ ಅಗತ್ಯವಿದೆ ಎಂಬ ಬಗ್ಗೆ ವಿವರವಾಗಿ ಸರ್ವೆ ಮಾಡಿ ವರದಿ ನೀಡಿ. ಅಗತ್ಯಕ್ಕನುಗುಣವಾಗಿ ಹಂತ ಹಂತವಾಗಿ ವಸತಿ ಯೋಜನೆ ಕಲ್ಪಿಸಿಕೊಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜನರಿಗೆ ಪಿಂಚಣಿ ಇನ್ನಿತರ ಸೌಲಭ್ಯಗಳು ತ್ವರಿತವಾಗಿ ಸಿಗಲು ಇಲ್ಲಿಯೇ ಪಿಂಚಣಿ ಅದಾಲತ್ ಆಯೋಜಿಸಬೇಕು ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ಎಲ್ಲ ಹಾಡಿಗಳಲ್ಲೂ ಸರ್ವೆ ಮಾಡಿಸಿ ಮನೆ ಸೌಲಭ್ಯ ಕಲ್ಪಿಸಬೇಕು ಎಂದರು.
ಉಸ್ತುವಾರಿ ಸಚಿವರು ಮಾತನಾಡಿ ನರೇಗಾ ಯೋಜನೆ ಪ್ರಯೋಜನ ತಲುಪುತ್ತಿದೆಯೇ ಎಲ್ಲರಿಗೂ ಉದ್ಯೋಗ ಲಭಿಸುತ್ತಿದೆಯೇ ಎಂದು ಪ್ರಶ್ನಿಸಿದರು. ಬೇಡಿಕೆಗೆ ಅನುಗುಣವಾಗಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ ಜನರಿಗೆ ನೆರವಾಗುವ ಕಾರ್ಯಗಳಿಗೆ ಅನುಕೂಲ ಮಾಡಿಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಪೌಷ್ಠಿಕ ಆಹಾರ ಕಿಟ್ಗಳನ್ನು ಹಾಡಿಯ ಜನರಿಗೆ ವಿತರಿಸಲಾಯಿತು.
ಶಾಸಕರಾದ ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಹಶೀಲ್ದಾರ್ ಗುರುಪ್ರಸಾದ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.