ಚಾಮರಾಜನಗರ: ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್ಪ್ರಸಾದ್ ಅವರ 39ನೇ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಅವರ ಹಿತೈಷಿಗಳ ಬಳಗದಿಂದ ಮೂಡಲಧ್ವನಿ ನಿರಾಶ್ರಿತರ ಕೇಂದ್ರದಲ್ಲಿರುವ ವೃದ್ದರಿಗೆ ಸಿಹಿ ಊಟ ನೀಡಲಾಯಿತು.

ನಗರದ ಇಂಚರ ಗ್ರೂಪ್ನ ಮಾಲೀಕ ಸ್ಟೈಲ್ ಮಂಜು, ಮುಖಂಡ ಹಿರಿಬೇಗೂರು ಗುರುಸ್ವಾಮಿ ಹಾಗು ಆನೇಕರು ನಗರದಲ್ಲಿರುವ ಮೂಡಲ ಧ್ವನಿ ನಿರಾಶ್ರಿತರ ಕೇಂದ್ರದ ವೃದ್ದರಿಗೆ ಮಧ್ಯಾಹ್ನ ಓಳಿಗೆ ಪಾಯಸ ಊಟವನ್ನು ಬಡಿಸುವ ಮೂಲಕ ತಮ್ಮ ನೆಚ್ಚಿನ ನಾಯಕರಾದ ಎಚ್.ಎಂ. ಗಣೇಶ್ ಪ್ರಸಾದ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಬೇಗೂರು ಗುರುಸ್ವಾಮಿ, ಎಚ್.ಎಂ. ಗಣೇಶ್ ಪ್ರಸಾದ್ ಅವರು ತಂದೆಗೆ ತಕ್ಕ ಮಗನಾಗಿ ರಾಜಕಾರಣದಲ್ಲಿ ಮುನ್ನಡೆಯುತ್ತಿದ್ದಾರೆ. ಕ್ಷೇತ್ರದ ಶಾಸಕರಾಗಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಜಿಲ್ಲೆಯ ಅಭಿವೃದ್ದಿಯಲ್ಲಿ ಅವರ ಆಸಕ್ತಿಯನ್ನು ಹೊಂದಿ, ತಂದೆಯವರ ಕನಸು ನೆನಸು ಮಾಡುವ ಜೊತೆಗೆ ಮಾದರಿ ಜಿಲ್ಲಾ ಕೇಂದ್ರ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
ಅವರಿಗೆ ಭಗವಂತ ಇನ್ನು ಹೆಚ್ಚಿನ ಆರೋಗ್ಯ ಆಯುಷ್ಯ ನೀಡಿ, ರಾಜಕೀಯ ಶಕ್ತಿಯನ್ನು ಕೊಡಲಿ. ರಾಜ್ಯದಲ್ಲಿ ಉನ್ನತ ಸ್ಥಾನಮಾನಗಳು ಅವರಿಗೆ ದೊರೆಯಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಂಗಾರ ನಾಯಕ, ವೃದ್ದಾಶ್ರಮದ ಶಂಕರ್ ಇತರರು ಇದ್ದರು.