ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವಕ್ಕೆ ಕೈಗೊಳ್ಳಲಾಗಿರುವ ಸಿದ್ದತೆಗಳನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಪರಿಶೀಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳನ್ನೊಳಗೊಂಡ ವಿವಿಧ ಸಮಿತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ದಸರಾ ಸಿದ್ದತೆಗಳ ಕುರಿತು ಜಿಲ್ಲಾಧಿಕಾರಿಯವರು ಪರಾಮರ್ಶಿಸಿದರು.
ದಸರಾ ಉದ್ಘಾಟನೆ, ಮೆರವಣಿಗೆ, ವೇದಿಕೆ, ದೀಪಾಲಂಕಾರ, ಸ್ವಚ್ಚತೆಗೆ ಸಂಬಂಧಿಸಿದಂತೆ ನೇಮಕವಾಗಿರುವ ಸಮಿತಿಗಳ ಅಧಿಕಾರಿಗಳು ತ್ವರಿತವಾಗಿ ಎಲ್ಲ ಸಿದ್ದತೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.
ರೈತ ದಸರಾ, ಮಹಿಳಾ ದಸರಾ, ಮ್ಯಾರಥಾನ್, ಕವಿಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಗಳಿಗೆ ಯಾವುದೇ ಲೋಪವಾಗದಂತೆ ಎಲ್ಲ ವ್ಯವಸ್ಥೆಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆಗೆ ಅಗತ್ಯವಿರುವ ಇನ್ನಷ್ಟು ಸಿಬ್ಬಂದಿ ನಿಯೋಜಿಸಿಕೊಳ್ಳಬೇಕು. ಆಯಾ ಸಮಿತಿಗಳು ನಿಗದಿಪಡಿಸಿದ ಕೆಲಸವನ್ನು ಶೀಘ್ರವೇ ಮುಗಿಸಿ ಸಜ್ಜಾಗುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಕಾರ್ಯಕ್ರಮದಂದು ಪೂಜಾ ಕೈಂಕರ್ಯ, ಕಲಾತಂಡಗಳ ಮೆರವಣಿಗೆ, ಸಂಜೆಯ ಉದ್ಘಾಟನಾ ಸಮಾರಂಭಕ್ಕೆ ಯಾವುದೇ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳದೇ ಎಲ್ಲವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಕಲಾವಿದರಿಗೆ ಆತಿಥ್ಯ, ಕುಡಿಯುವ ನೀರು, ಊಟ ಉಪಹಾರ ವ್ಯವಸ್ಥೆಗೆ ತೊಂದರೆಯಾಗಬಾರದು. ಸುಸೂತ್ರವಾಗಿ ಎಲ್ಲ ಸಿದ್ದತೆಗಳು ಪರಿಪೂರ್ಣವಾಗಬೇಕು ಎಂದರು.
ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಮಹಿಳಾ ಸಂಘಗಳು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಯಾರಿಸಿದ ವಸ್ತುಗಳ ಮಾರಾಟ ಹಾಗೂ ಪ್ರದರ್ಶನಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಸುಗಮವಾಗಿ ಕಲ್ಪಿಸಿಕೊಡಬೇಕು. ಕಲಾ ತಂಡಗಳ ಮೆರವಣಿಗೆ ವೇಳೆ ವಿವಿಧ ಇಲಾಖೆಗಳಿಂದ ಪಾಲ್ಗೊಳ್ಳುವ ಸ್ತಬ್ದ ಚಿತ್ರಗಳನ್ನು ಪರಿಶೀಲಿಸಿಕೊಳ್ಳಬೇಕು. ಚಾಮರಾಜನಗರ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಪೂರಕವಾಗಿರುವ ವ್ಯವಸ್ಥೆಗಳಿಗೆ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಬಸವರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ವಿವಿಧ ಸಮಿತಿಗಳ ಅಧ್ಯಕ್ಷರಾಗಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಸಬೆಯಲ್ಲಿ ಉಪಸ್ಥಿತರಿದ್ದರು.