ಚಾ.ನಗರ ಪಿಎಲ್‌ಡಿ ಬ್ಯಾಂಕ್ ವಾರ್ಷಿಕ ಮಹಾಸಭೆ

ಸುಸ್ತಿದಾರರು ಸಾಲ ಮರುಪಾವತಿ ಮಾಡಿ ಸಹಕಾರ ನೀಡಿ – ಬಸವಣ್ಣ
ಚಾಮರಾಜನಗರ: ಪಿಎಲ್‌ಡಿ ಬ್ಯಾಂಕ್‌ನಿಂದ ಧೀರ್ಘ ಹಾಗು ಅಲ್ಪಾವಧಿ ಸಾಲ ಪಡೆದುಕೊಂಡಿರುವ ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ, ಇತರೇ ರೈತರಿಗೆ ಸಾಲ ನೀಡಲು ಅನುವು ಮಾಡಿಕೊಡಿ. ಸಾಲ ವಸೂಲಾತಿ ಇಲ್ಲದೇ ಹೊಸ ಸಾಲವನ್ನು ಕೇಂದ್ರ ಬ್ಯಾಂಕ್ ನೀಡಲು ಮುಂದಾಗುತ್ತಿಲ್ಲ ಎಂದು ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ಅಧ್ಯಕ್ಷ ಎಚ್.ಎಂ. ಬಸವಣ್ಣ( ಸುಂದ್ರಪ್ಪ) ತಿಳಿಸಿದರು.

ನಗರದ ಜೆ.ಎಸ್‌ಎಸ್. ಸೆಮಿನಾರ್ ಹಾಲ್‌ನಲ್ಲಿ ಭಾನುವಾರ ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷದಲ್ಲಿ ವಿವಿಧ ಯೋಜನೆಗಳಾದ ಕುರಿ ಸಾಕಾಣಿಕೆ, ಭೂ ಅಭಿವೃದ್ದಿ, ತಂತಿ ಬೇಲಿ ಹಾಗು ನೀರಾವರಿಗಾಗಿ ಸಾಲವನ್ನು ನೀಡಲಾಗಿದೆ. ಆದರೆ, ಸಾಲ ಪಡೆದುಕೊಂಡ ರೈತರು ಸಾಲದ ಕಂತುಗಳನ್ನು ಸಕಾಲದಲ್ಲಿ ಮರು ಪಾವತಿ ಮಾಡುತ್ತಿಲ್ಲ. ಹೀಗಾಗಿ ಬ್ಯಾಂಕಿನ ವ್ಯವಹಾರ ನಡೆಸಲು ತೊಂದರೆ ಆಗುತ್ತಿದೆ. ಶೇ. ೩೩. ರಷ್ಟು ಮಾತ್ರ ವಸೂಲಾತಿಯಾಗುತ್ತಿದೆ. ಕೇಂದ್ರ ಬ್ಯಾಂಕಿನ ಸೂಚನೆಯಂತೆ ಶೇ. ೭೦ಕ್ಕಿಂತ ಹೆಚ್ಚು ವಸೂಲಾತಿಯಾಗಬೇಕು. ಇದನ್ನು ಪಾಲನೆ ಮಾಡಿದರೆ ಮಾತ್ರ ಹೆಚ್ಚುವರಿ ಸಾಲ ದೊರೆಯುತ್ತದೆ ಎಂದರು.

ಈಗಾಗಲೇ ಸಾಲ ಮರು ಪಾವತಿ ಮಾಡುವಂತೆ ನೋಟಿಸ್ ಕಳುಹಿಸಲಾಗಿದೆ. ಸೆ. ೩೧ ರೊಳಗೆ ತಮ್ಮ ಕಂತುಗಳ ಬಾಬ್ತುಗಳನ್ನು ಮರು ಪಾವತಿ ಮಾಡುವ ಮಾಡುವಂತ ಮನವಿ ಮಾಡಿದರು. ಕೇಂದ್ರ ಬ್ಯಾಂಕಿನಿಂದ ಏಕ ಕಾಲಿಕ ಸಾಲ ತೀರುವಳಿ ಯೋಜನೆ ಜಾರಿಯಾಗಿದ್ದು, ಸುಸ್ತಿದಾರರು ಈ ಯೋಜನೆಯ ಪ್ರಯೋಜನ ಪಡೆದುಕೊಂಡು,ಬಡ್ಡಿಯಲ್ಲಿ ರಿಯಾಯಿತಿಯನ್ನು ಪಡೆದುಕೊಳ್ಳಬೇಕು. ಅಲ್ಲದೇ ಬ್ಯಾಂಕಿನಿಂದ ಸುಸ್ತಿದಾರದಾರ ರೈತರ ವಿರುದ್ದ ಕಾನೂನು ಕ್ರಮ ಅನಿವಾರ್ಯವಾಗಿದೆ ಎಂದರು.

ಸದಸ್ಯರಾದ ಗಿರೀಶ್, ಆರ್. ವಿ. ಮಹದೇವಸ್ವಾಮಿ, ಗೋವಿಂದರಾಜು, ಸಿದ್ದರಾಜು ಅನೇಕ ಸದಸ್ಯರು ಮಾತನಾಡಿ, ೫೦೦ ಷೇರು ಹೊಂದಿರುವ ಸದಸ್ಯರಿಗೆ ಮಾಹಿತಿ ನೀಡಿ, ಹೆಚ್ಚುವರಿ ೫೦೦ ರೂ ಷೇರು ಹೊಂದಾಣಿಕೆ ಪಡೆದು ಸದಸ್ಯರನ್ನಾಗಿ ಮಾಡಿಕೊಡಬೇಕು. ಪರಿಶಿಷ್ಟ ಜಾತಿ ಹಾಗು ಪಂಗಡ ರೈತರಿಗೆ ಹೆಚ್ಚು ಸಾಲ ನೀಡುವ ಜೊತೆಗೆ ಸಬ್ಸಿಡಿಯನ್ನು ಕೊಡಿಸಲು ಆಡಳಿತ ಮಂಡಲಿ ಶ್ರಮಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ನೀಡಿದ ಆಡಳಿತ ಮಂಡಲಿಯ ಸದಸ್ಯರು ಹೆಚ್ಚುವರಿ ಷೇರು ಕಟ್ಟಿದ ತಕ್ಷಣದಿಂದಲೇ ಸದಸ್ಯತ್ವ ನವೀಕರಣಗೊಳ್ಳುತ್ತದೆ. ಸದಸ್ಯರ ಕೋರಿಕೆ ಮೇರೆಗೆ ಈಗ ಸಭೆಗೆ ಬಂದಿರುವ ಸದಸ್ಯರು ಹೆಚ್ಚುವರಿ ಹಣ ಪಾವತಿ ಮಾಡಿ ಸಹಿ ಹಾಕಿದರೆ, ಅವರನ್ನು ಮಹಾಸಭೆ ಯ ಹಾಜರಾತಿಗೆ ಪರಿಗಣಿಸಲಾಗುತ್ತದೆ ಎಂದರು.

ದಿ. ಉಡಿಗಾಲ ಪಾಪಣ್ಣನಿಗೆ ನುಡಿನಮನ : ಇತ್ತೀಚೆಗೆ ನಿಧನರಾದ ಬ್ಯಾಂಕಿನ ಹಿರಿಯ ಸದಸ್ಯರಾದ ಹಾಗೂ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಕಳೆದ ೩೦ ವರ್ಷಗಳ ಕಾಲ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಬ್ಯಾಂಕಿನ ಅಭಿವೃದ್ದಿಗೆ ತಮ್ಮದೇ ಸೇವೆ ಸಲ್ಲಿಸಿದ್ದ ಹಾಲಿ ನಿರ್ದೇಶಕ ಉಡಿಗಾಲ ಪಾಪಣ್ಣ ಅವರಿಗೆ ಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು.

ಪಾಪಣ್ಣ ಅವರ ಭಾವಚಿತ್ರವಿಟ್ಟು ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಪುಷ್ಪಾರ್ಷನೆ ಮಾಡುವ ಮೂಲಕ ಪುಷ್ಪ ನಮನ ಸಲ್ಲಿಸಿದರು. ನಿರ್ದೇಶಕ ಹೆಗ್ಗವಾಡಿಪುರ ಮಹದೇವಸ್ವಾಮಿ ನುಡಿನಮನ ಸಲ್ಲಿಸಿ ಮಾತನಾಡಿ, ಉಡಿಗಾಲ ಪಾಪಣ್ಣ ಎಂದರೆ ಪಿಎಲ್‌ಡಿ ಬ್ಯಾಂಕ್ ಹೆಸರು ಸೇರಿಕೊಂಡಿತ್ತು. ಹಿರಿಯ ಸಹಕಾರಿಗಳಾಗಿ ಸಂಘದ ಅಭಿವೃದ್ದಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸಿದ್ದರು. ನಮ್ಮೆಲ್ಲರಿಗೂ ಹಿರಿಯ ಅಣ್ಣನಾಗಿ, ಸಂಘದ ಅಭಿವೃದ್ದಿಗೆ ಕೊಡುಗೆ ನೀಡಿದ್ದಾರೆ. ಅವರ ನಿಧನ ಸಂಘ ಹಾಗೂ ವೈಯಕ್ತಿಕವಾಗಿ ನಷ್ಟ ಉಂಟಾಗಿದೆ. ಅವರಿಗೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಬ್ಯಾಂಕ್‌ನ ವ್ಯವಸ್ಥಾಪಕ ಪ್ರಭಾರ ವ್ಯವಸ್ಥಾಪಕ ಸತೀಶ್ ವಾರ್ಷಿಕ ವರದಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮಹದೇವನಾಯಕ, ನಿರ್ದೇಶಕರಾದ ಎನ್‌ರಿಚ್‌ಮಹದೇವಸ್ವಾಮಿ, ಬಿ. ಮಹದೇವಪ್ಪ, ದೊರೆಸ್ವಾಮಿ, ಎಸ್.ರಾಜು, ಎಂ. ಬಸವರಾಜು ಶಿವಶಂಕರಪ್ಪ, ಚಿಕ್ಕನಾಗಪ್ಪ, ಕೆ. ಬಾನುಪ್ರಕಾಶ್, ರತ್ನಮ್ಮ, ಸಾಕಮ್ಮ, ಶ್ರೀಕಾಂತ್‌ಪಾಪಣ್ಣ, ಬ್ಯಾಂಕಿನ ನೌಕರರಾದ ಶಶಿಕಿರಣ್, ನವೀನ್, ದಿನಕರ್ ಹಾಗೂ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *