ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವದ ಪ್ರಯುಕ್ತ ವಿವಿಧ ಪ್ರಶಸ್ತಿಗಳಿಗೆ ಪತ್ರಕರ್ತರು ಆಯ್ಕೆಯಾಗಿದ್ದಾರೆ.
ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶಕುಮಾರ್ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ನೀಡಲಾಗುವ ದಿ.ಆರ್.ಸಿದ್ದೇಗೌಡ ಪ್ರಶಸ್ತಿಗೆ ಹನೂರಿನ ವಿಜಯವಾಣಿ ವರದಿಗಾರ ಎಸ್.ಲಿಂಗರಾಜು ಅವರ ‘ಸೂರಿಲ್ಲದೆ ಬೀದಿಗೆ ಬಿದ್ದ ಹನೂರಿನ ವೃದ್ಧ ದಂಪತಿ’ ವರದಿ ಆಯ್ಕೆಯಾಗಿದೆ. ರಾಮಸಮುದ್ರ ಪುಟ್ಟಮಲ್ಲಪ್ಪ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ನೀಡಲಾಗುವ ದಿ.ಆರ್.ಪಿ.ರೇವಣ್ಣ ಪ್ರಶಸ್ತಿಗೆ ಚಾಮರಾಜನಗರದ ವಿಜಯವಾಣಿ ಛಾಯಾಗ್ರಾಹಕ ಎಚ್.ಎಲ್.ರಾಜು ಹೊಸೂರು ಬರೆದಿರುವ ‘ಬಾಳು ಬೆಳಗುತ್ತಿರುವ ಬಾಳೆ ದಿಂಡು’ ವರದಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಹೊಸೂರು ಜಗದೀಶ್ ಸ್ಥಾಪಿಸಿರುವ ದಿ.ಸಿದ್ದಲಿಂಗದೇವರು ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ವಿಜಯಕರ್ನಾಟಕ ಛಾಯಾಗ್ರಾಹಕ ಉತ್ತುವಳ್ಳಿ ಮಹೇಶ್ ಆಯ್ಕೆಯಾಗಿದ್ದಾರೆ.
ಗುಂಡ್ಲುಪೇಟೆಯ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸ್ಥಾಪಿಸಿರುವ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಸ್ಮರಣಾರ್ಥ ಪ್ರಶಸ್ತಿಗೆ ಗುಂಡ್ಲುಪೇಟೆಯ ಕನ್ನಡಪ್ರಭ ವರದಿಗಾರ ರಂಗುಪುರ ಶಿವಕುಮಾರ್, ಮಾಂಬಳ್ಳಿ ಎಚ್.ಫಲ್ಗುಣ ಸ್ಥಾಪಿಸಿರುವ ಮಾಂಬಳ್ಳಿ ಎನ್.ಹೊಂಬಾಳಯ್ಯ ಮತ್ತು ಪುಟ್ಟನಂಜಮ್ಮ ಸ್ಮರಣಾರ್ಥ ಪ್ರಶಸ್ತಿಗೆ ಯಳಂದೂರಿನ ಉದಯವಾಣಿ ವರದಿಗಾರ ಫೈರೋಜ್ ಖಾನ್, ಕೊಳ್ಳೇಗಾಲದ ಮಾಜಿ ಶಾಸಕ ಎಸ್.ಬಾಲರಾಜ್ ಸ್ಥಾಪಿಸಿರುವ ಮದ್ದೂರಿನ ದಿ. ಎಸ್.ವಿ.ಲಕ್ಷ್ಮಮ್ಮ ಎಂ.ಸಂಜೀವಯ್ಯ ಸ್ಮಾರಕ ಪ್ರಶಸ್ತಿಗೆ ಚಾಮರಾಜನಗರದ ಸುದ್ದಿಬುದ್ದಿ ಪತ್ರಿಕೆ ಸಂಪಾದಕಿ ಸ್ನೇಹಲಕ್ಷ್ಮಿ, ವಡಗೆರೆ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರರಾದ ಕುಮಾರ್ ಆನಂದಕುಮಾರ್ ಸ್ಥಾಪಿಸಿರುವ ದಿ.ವಡಗೆರೆ ಪಟೇಲ್ ಚಾಮೇಗೌಡ ಸ್ಮಾರಕ ಪ್ರಶಸ್ತಿಗೆ ಮಲೆಮಹದೇಶ್ವರ ಬೆಟ್ಟದ ಕನ್ನಡಪ್ರಭ ವರದಿಗಾರರಾದ ಬಿ.ಮಹದೇವಪ್ರಸಾದ್, ಸಂತೆಮರಹಳ್ಳಿಯ ಎಂ.ಪಿ.ಮಾದಪ್ಪ ಸ್ಥಾಪಿಸಿರುವ ದಿ.ರೇವಮ್ಮ ಹೊಸಹಟ್ಟಿ ಪುಟ್ಟಸುಬ್ಬಪ್ಪ ಸ್ಮಾರಕ ಪ್ರಶಸ್ತಿಗೆ ಸಂತೆಮರಹಳ್ಳಿಯ ಪ್ರಜಾವಾಣಿ ವರದಿಗಾರ ಹೆಗ್ಗವಾಡಿಪುರ ಎಸ್.ಮಹದೇವ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಥಾಪಿಸಿರುವ ಗೌರಮ್ಮ ಬಿ.ರಾಚಯ್ಯ ಪ್ರತಿಷ್ಠಾನ ಪ್ರಶಸ್ತಿಗೆ ಕೊಳ್ಳೇಗಾಲದ ಉದಯವಾಣಿ ವರದಿಗಾರ ಡಿ.ನಟರಾಜು, ರೇಷ್ಮೆನಾಡು ಪತ್ರಿಕೆ ಸಂಪಾದಕಿ ಸವಿತಾ ಜಯಂತ್ ಸ್ಥಾಪಿಸಿರುವ ದಿ.ಸದಾಶಿವ ಗಟ್ಟವಾಡಿಪುರ ಪ್ರಶಸ್ತಿಗೆ ಆಲೂರಿನ ಪತ್ರಿಕಾ ಪ್ರತಿನಿಧಿ ಎ.ಎನ್.ನಾಗೇಂದ್ರ ಮೂರ್ತಿ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ.
ಜುಲೈ ೨೯ ರಂದು ಚಾಮರಾಜನಗರದ ವರ್ತಕರ ಭವನದಲ್ಲಿ ನಡೆಯಲಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವದ ಪ್ರಯುಕ್ತ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಎಲ್ಲಾ ಪತ್ರಕರ್ತರನ್ನು ಸಂಘದ ಜಿಲ್ಲಾಧ್ಯಕ್ಷರಾದ ದೇವರಾಜು ಕಪ್ಪಸೋಗೆ ಹಾಗೂ ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್ ಅಭಿನಂದಿಸಿದ್ದಾರೆ.