ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಚುನಾವಣೆ : ಕೈಗೆ ಮತ್ತೇ ಅಧಿಕಾರದ ಚುಕ್ಕಾಣಿ

ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಮಾಜಿ ಅಧ್ಯಕ್ಷ ಮಡಿವಾಳಪ್ಪ ಸೇರಿ ೬ ಮಂದಿ ಆಯ್ಕೆ
ಚಾಮರಾಜನಗರ: ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ ೬ ಸ್ಥಾನಗಳಿಗೆ ನಡೆದ ಚುನಾವಣೆ ಮತದಾನದಲ್ಲಿ ಕಾಂಗ್ರೆಸ್ ಬೆಂಬಲಿತರು ನಾಲ್ವರು ಹಾಗೂ ಬಿಜೆಪಿ ಬೆಂಬಲಿತರ ಇಬ್ಬರು ಆಯ್ಕೆಯಾಗಿದ್ದಾರೆ.

ಉಳಿದಂತೆ ಅವಿರೋಧ ಆಯ್ಕೆ ಸೇರಿ ೧೧ ಮಂದಿ ನಿರ್ದೇಶಕರು ಕಾಂಗ್ರೆಸ್ ಬೆಂಬಲಿತರಾಗಿದ್ದು, ನಾಲ್ವರು ಬಿಜೆಪಿ ಬೆಂಬಲಿತರು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ನಗರದ ತಾಲೂಕು ಪಂಚಾಯಿತಿ ಕಚೇರಿ ಪಕ್ಕದಲ್ಲಿರುವ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಆರು ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆಯಿತು. ಬಳಿಕ ನಡೆದ ಮತ ಎಣಿಕೆ ಅಂತಿಮವಾಗಿ ಆಯ್ಕೆಯಾದವರ ಹೆಸರನ್ನು ಚುನಾವಣಾಧಿಕಾರಿ ದಯಾನಂದ ಘೋಷಣೆ ಮಾಡಿದರು.

ಚಾಮರಾಜನಗರ ತಾಲೂಕು ಪ್ಯಾಕ್ಸ್‌ನಿಂದ ಅಮಚವಾಡಿ ನಾಗಸುಂದರ್ ೧೫ ಮತಗಳನ್ನು ಪಡೆದು ಆಯ್ಕೆಯಾದರೆ, ಉಡಿಗಾಲ ಶಿವಕುಮಾರ್ ೧೩ ಮತಗಳನ್ನು ಪಡೆದರು. ಗುಂಡ್ಲುಪೇಟೆ ಪ್ಯಾಕ್ಸ್‌ನಿಂದ ಬೊಮ್ಮನಹಳ್ಳಿ ಮಡಿವಾಳಪ್ಪ ೬ ಮತಗಳನ್ನು ಪಡೆದು ಆಯ್ಕೆಯಾದರೆ, ಅಂಕಹಳ್ಳಿ ರಾಜಶೇಖರಪ್ಪ ೫ ಪಡೆದುಕೊಂಡರು. ಚಾ.ನಗರ ತಾಲೂಕು ಡೇರಿಗಳ ಕ್ಷೇತ್ರದಿಂದ ಹರದನಹಳ್ಳಿ ಎಚ್.ಎನ್. ಸುಂದರರಾಜ್ ೧೮ ಮತಗಳನ್ನು ಪಡೆದು ಆಯ್ಕೆಯಾದರೆ, ಲಿಂಗನಾಪುರ ಚನ್ನಬಸಪ್ಪ ೮ ಮತಗಳನ್ನು ಪಡೆದರು. ಗುಂಡ್ಲುಪೇಟೆ ತಾ. ಡೇರಿಗಳ ಕ್ಷೇತ್ರದಿಂದ ಚಾಮುಲ್ ನಿರ್ದೇಶಕ ಎಚ್.ಎನ್. ನಂಜುಂಡಪ್ರಸಾದ್ ೧೪ ಮತಗಳನ್ನು ಪಡೆದು ಜಯಗಳಿಸಿದರೆ, ಹಸಗೂಲಿ ಉಮೇಶ್ ೧೧ ಮತಗಳನ್ನು ಪಡೆದುಕೊಂಡರು. ಯಳಂದೂರು ತಾಲೂಕು ಡೇರಿಗಳ ಕ್ಷೇತ್ರದಿಂದ ಮಲ್ಲಿಗಹಳ್ಳಿ ಎಂ. ಪ್ರಭುಸ್ವಾಮಿ ೮ ಮತಗಳನ್ನು ಪಡೆದು ಜಯಗಳಿಸಿದರೆ, ಅಂಬಳೆ ಎಂ. ಶಿವಾನಂದಸ್ವಾಮಿ ೪ ಮತಗಳನ್ನು ಪಡೆದುಕೊಂಡರು. ಚಾ.ನಗರ- ಗುಂಡ್ಲುಪೇಟೆ ತಾಲೂಕು ಡೇರಿಗಳ ಮಹಿಳಾ ಕ್ಷೇತ್ರದಿಂದ ನವಿಲೂರು ದಾಕ್ಷಾಯಿಣಿ ೪ ಮತಗಳನ್ನು ಪಡೆದು ಆಯ್ಕೆಯಾದರೆ, ವಡ್ಡಗಲ್‌ಪುರ ಸುಜಾತ ೩ ಮತಗಳನ್ನು ಪಡೆದುಕೊಂಡರು.

ಅವಿರೋಧವಾಗಿ ಆಯ್ಕೆಯಾದರು : ಇನ್ನಿತರ ಸಹಕಾರ ಸಂಘಗಳ ಕ್ಷೇತ್ರದಿಂದ ಒಕ್ಕೂಟದ ಹಾಲಿ ಅಧ್ಯಕ್ಷ ಮಲೆಯೂರು ನಾಗರಾಜು, ಲ್ಯಾಂಪ್ ಸೊಸೈಟಿಗಳ ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರದಿಂದ ಮುದ್ದಯ್ಯ, ಯಳಂದೂರು ತಾಲೂಕು ಪ್ಯಾಕ್ಸ್‌ನಿಂದ ರವಿ, ಕೊಳ್ಳೇಗಾಲ ಫ್ಯಾಕ್ಸ್ ನಿಂದ ಪಿ. ಮಹದೇವಸ್ವಾಮಿ, ಕೊಳ್ಳೇಗಾಲ ತಾಲೂಕು ಡೇರಿಗಳ ಕ್ಷೇತ್ರದಿಂದ ರಾಯಪ್ಪ, ಕೊಳ್ಳೇಗಾಲ- ಯಳಂದೂರು ಮಹಿಳಾ ಡೇರಿಗಳ ಕ್ಷೇತ್ರದಿಂದ ಜಯಶೀಲಾ ಹಾಗೂ ಎಲ್ಲಾ ಪಿಎಲ್‌ಡಿ ಬ್ಯಾಂಕ್‌ಗಳ ಕ್ಷೇತ್ರದಿಂದ ಎಚ್.ಎಂ. ಬಸವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಕ್ಕೂಟದ ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರಾದ ದಯಾನಂದ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ನಾಯಕ್ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದರು.

ವಿಜಯೋತ್ಸವ ಆಚರಣೆ : ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು. ಎಚ್.ಎನ್. ನಂಜುಂಡಸ್ವಾಮಿ, ಮಡಿವಾಳಪ್ಪ, ನಾಗಸುಂದರಪ್ಪ, ಮಲೆಯೂರು ನಾಗೇಂದ್ರ ಸೇರಿದಂತೆ ಕಾಂಗ್ರೆಸ್ ಬೆಂಬಲಿತರ ನಿರ್ದೇಶಕರಿಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ಮತ್ತು ಮುಖಂಡರು ಕಾಂಗ್ರೆಸ್ ಶಾಲ್ಯ ಹಾಕಿ ಅಭಿನಂದಿಸಿ, ವಿಜಯೋತ್ಸವ ಆಚರಣೆ ಮಾಡಿದರು. ಮುಖಂಡರಾದ ರಾಜಶೇಖರ್, ಶ್ರೀಕಂಠಸ್ವಾಮಿ, ಹಿರಿಬೇಗೂರು ಗುರುಸ್ವಾಮಿ, ಸಾಗಡೆ ಸುರೇಶ್, ಎನ್.ಆರ್. ಪುರುಷೋತ್ತಮ್, ಎಚ್.ಎನ್. ನಾಗರಾಜಮೂರ್ತಿ, ನಂಜುಂಡನಾಯಕ, ನಾಗವಳ್ಳಿ ನಾಗಯ್ಯ, ಬಸುಮರಿ, ಮುತ್ತಿಗೆ ದೊರೆ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *