ವಾರ್ತಾ ವಿಶೇಷ ಲೇಖನ
ರಾಜ್ಯ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ ಹಸಿವು ಮುಕ್ತ ಕರ್ನಾಟಕದ ಗುರಿಯಾದ ಅನ್ನ ಭಾಗ್ಯ ಯೋಜನೆಯಾಗಿದೆ. ಬಡಜನರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸುವುದು ರಾಜ್ಯ ಸರ್ಕಾರದ ಒಂದು ಶ್ರೇಷ್ಠ ಹೆಜ್ಜೆಯಾಗಿದ್ದು, ಈ ಯೋಜನೆ ಚಾಮರಾಜನಗರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ.
ಆಹಾರ ಭದ್ರತಾ ಯೋಜನೆಯಡಿ ಪ್ರತಿಯೊಬ್ಬ ಪಡಿತರದಾರನಿಗೆ ತಲಾ ೧೦ ಕೆ.ಜಿ ಆಹಾರಧಾನ್ಯ ಒದಗಿಸುವುದು ಅನ್ನಭಾಗ್ಯ ಯೋಜನೆಯ ಉದ್ದೇಶವಾಗಿದೆ. ಪ್ರಸ್ತುತ ಹೆಚ್ಚುವರಿ ಅಕ್ಕಿಯ ಅಲಭ್ಯತೆಯ ಹಿನ್ನೆಲೆಯಲ್ಲಿ ಬಿ.ಪಿ.ಎಲ್ ಕುಟುಂಬದ ಪ್ರತಿ ಸದಸ್ಯನಿಗೆ ೫ ಕೆ.ಜಿ ಅಕ್ಕಿಯ ಬದಲಾಗಿ ತಲಾ ೧೭೦ ರೂ ರಂತೆ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದೆ.
ರಾಜ್ಯ ಸರ್ಕಾರ ಜನರಿಗೆ ನೀಡಿದ ವಾಗ್ದಾನದಂತೆ ಅನ್ನಭಾಗ್ಯ ಯೋಜನೆ ಅನುಷ್ಠಾನ ಮಾಡಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳಿನಿಂದ ಹೆಚ್ಚುವರಿ ೫ ಕೆ.ಜಿ ಅಕ್ಕಿಯ ಹಣವನ್ನು ಡಿಬಿಟಿ ಮುಖಾಂತರ ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ಜಮೆ ಮಾಡಲಾಗುತ್ತಿದೆ. ಪ್ರತಿ ಸದಸ್ಯರಿಗೆ ೫ ಕೆ.ಜಿ. ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ ೩೪ ರೂ. ರಂತೆ ೫ ಕೆ.ಜಿಗೆ ೧೭೦ ರೂ.ಗಳನ್ನು ಜಮೆ ಮಾಡಲಾಗಿದೆ.
ಜುಲೈ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆಯ ೧೯,೮೧೧ ಪಡಿತರ ಚೀಟಿಗಳ ಒಟ್ಟು ೯೪,೪೬೩ ಫಲಾನುಭವಿಗಳಿಗೆ ಒಟ್ಟು ೮೫,೪೨,೩೩೦ ರೂ. ಗಳನ್ನು ಸಂದಾಯ ಮಾಡಲಾಗಿದೆ. ೨,೧೨,೬೬೭ ಆದ್ಯತಾ ಪಡಿತರ ಚೀಟಿಗಳ ೬,೩೯,೨೦೮ ಫಲಾನುಭವಿಗಳಿಗೆ ಒಟ್ಟು ೧೦,೮೬,೫೧,೪೨೦ ರೂ. ಜಮೆ ಮಾಡಲಾಗಿದೆ. ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಸೇರಿದಂತೆ ಒಟ್ಟಾರೆ ೨,೩೨,೪೭೮ ಪಡಿತರ ಚೀಟಿಗಳ ೭,೩೩,೬೭೧ ಸದಸ್ಯರಿಗೆ ೧೧,೭೧,೯೩,೭೫೦ ರೂ. ಹಣ ಡಿ.ಬಿ.ಟಿ ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆಯಾಗಿದೆ.
ಆಗಸ್ಟ್ ೨೦೨೩ರ ತಿಂಗಳಿನಲ್ಲಿ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳು ಸೇರಿ ಒಟ್ಟು ೧,೬೪,೧೭೪ ಪಡಿತರ ಚೀಟಿದಾರರ ಫಲಾನುಭವಿಗಳಿಗೆ ಒಟ್ಟು ೮,೩೧,೮೩,೮೯೦ ರೂ. ಹಣವನ್ನು ಡಿ.ಬಿ.ಟಿ ಮುಖಾಂತರ ಮುಖ್ಯಸ್ಥರ ಖಾತೆಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ.
ಅನ್ನಭಾಗ್ಯ ಯೋಜನೆ ನಮಗೆ ತುಂಬಾ ಉಪಯುಕ್ತವಾಗಿದೆ. ಸರ್ಕಾರದ ಈ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ. ಇದಕ್ಕಾಗಿ ಅಭಿನಂದನೆ ಸಲ್ಲಿಸಲು ಇಚ್ಚಿಸುತ್ತೇನೆ ಎಂದು ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ರತ್ನಮ್ಮ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹೆಚ್ಚುವರಿ ೫ ಕೆ.ಜಿ ಅಕ್ಕಿಯ ಹಣವನ್ನು ಡಿಬಿಟಿ ಮುಖಾಂತರ ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಯೋಜನೆಯ ಪ್ರಯೋಜನವನ್ನು ಅರ್ಹರೆಲ್ಲರಿಗೂ ತಲುಪಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಉಪನಿರ್ದೇಶಕರಾದ ಯೋಗಾನಂದ ಅವರು ತಿಳಿಸಿದರು.