ಜೈಹಿಂದ್ ಕಟ್ಟೆಯಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನ ಆಚರಣೆ

ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಆಚರಿಸಲಾಯಿತು.

ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಚಾಮರಾಜನಗರ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷರು, ಉದ್ಯಮಿ ಎ.ಜಯಸಿಂಹ ಅವರು ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದ ಅವರು, ಸರ್.ಎಂ.ವಿಶ್ವೇಶ್ವರಯ್ಯನವರು ಶ್ರೇಷ್ಠ ಇಂಜಿನಿಯರ್ ಹಾಗೂ ವಿನ್ಯಾಸಕಾರರು. ಮೈಸೂರು ಸಂಸ್ಥಾನದ ದಿವಾನರಾಗಿ ನೀರಾವರಿ, ಶಿಕ್ಷಣ ,ಅಭಿವೃದ್ಧಿ, ಕೈಗಾರಿಕೆ, ಆರೋಗ್ಯ, ಕಟ್ಟಡಗಳು, ಸೇತುವೆಗಳು ,ಅಣೆಕಟ್ಟುಗಳನ್ನು ನಿರ್ಮಿಸಿ, ಇಡೀ ವಿಶ್ವಕ್ಕೆ ಮಾದರಿಯಾದವರು. ಅವರ ಕೊಡುಗೆಯನ್ನು ವರ್ಣಿಸಲು ಸಾಧ್ಯವಾಗುವುದಿಲ್ಲ ಎಂದರು.

ಮೈಸೂರು ಸಂಸ್ಥಾನ ಇಡೀ ವಿಶ್ವಕ್ಕೆ ಮಾದರಿಯಾಗಿರಲು ಕಾರಣ ಸರ್ ಎಂ ವಿಶ್ವೇಶ್ವರಯ್ಯನವರ ಅಪಾರ ಸಾಧನೆ ಮತ್ತು ಪ್ರಾಮಾಣಿಕ ಕೊಡುಗೆ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕನ್ನಂಬಾಡಿ ಕಟ್ಟೆ ಲಕ್ಷಾಂತರ ರೈತರಿಗೆ ಶಾಶ್ವತವಾದ ಆರ್ಥಿಕ ಶಕ್ತಿ ತಂದುಕೊಟ್ಟದ್ದು ಮರೆಯಲಾಗದು. ಮನೆ ಮನೆಗಳಲ್ಲೂ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರ ಇಟ್ಟುಕೊಳ್ಳುವ ಮೂಲಕ ಅವರ ಪುಸ್ತಕಗಳು ಮತ್ತು ಸಾಧನೆಯ ಹಾದಿಯನ್ನು ಮಕ್ಕಳಿಗೆ ತಿಳಿಸುವ ಮೂಲಕ ಸಾಧಕರಾಗಲು ಪ್ರೇರಣೆ ನೀಡಬೇಕು. ಋಗ್ವೇದಿ ಯೂತ್ ಕ್ಲಬ್, ಜೈ ಹಿಂದ್ ಕಟ್ಟೆಯ ಮೂಲಕ ನೂರಾರು ರಾಷ್ಟ್ರೀಯ ಕಾರ್ಯಕ್ರಮಗಳನ್ನು ರೂಪಿಸಿ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯವೆಂದರು.

ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯನವರು ಬಡತನದ ನೋವಿನಲ್ಲಿ ಶ್ರದ್ದೆ ,ಆಸಕ್ತಿ , ಕುತೂಹಲ ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿ ವಿಶ್ವದ ಶ್ರೇಷ್ಠ ಇಂಜಿನಿಯರ್ ಆಗಿ ಭಾರತಕ್ಕೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟರು ಎಂದರು.

ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯ, ಭದ್ರಾವತಿ ಮತ್ತು ಕಬ್ಬಿಣ ಕಾರ್ಖಾನೆ, ಮೈಸೂರ್ ಬ್ಯಾಂಕ್ ಸ್ಥಾಪನೆ ,ಮೈಸೂರ್ ಸ್ಯಾಂಡಲ್ ಸೋಪು ಕೈಗಾರಿಕೆ ಸ್ಥಾಪನೆ ಹತ್ತು ಹಲವು ಕೈಗಾರಿಕೆಗಳನ್ನ ಸ್ಥಾಪನೆ ಮಾಡುವ ಮೂಲಕ ಕೈಗಾರಿಕಾ ಕ್ಷೇತ್ರದ ಮೂಲಕ ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷ್ಟಿಸಿದವರು. ನೀರಾವರಿ ಮತ್ತು ಶಿಕ್ಷಣ, ಕಲೆ, ಸಾಹಿತ್ಯ ,ಸಂಸ್ಕೃತಿ ,ಪರಂಪರೆ ವಿಜ್ಞಾನ, ತಂತ್ರಜ್ಞಾನ ,ಆರೋಗ್ಯ ಮಹಿಳಾ ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆಯಿಂದ ದುಡಿದ ಶ್ರೇಷ್ಠರು. ಸರ್ ಎಂ ವಿಶ್ವೇಶ್ವರಯ್ಯನವರೇ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಅವರ ಬುದ್ಧಿಶಕ್ತಿಯ ಸದ್ಬಳಕೆ ಹೇಗೆ ಎಂಬುದೇ ಆಶ್ಚರ್ಯಕರವಾದದ್ದು. ಯುವಕರಿಗೆ ಸಾಧಕರ ಅಧ್ಯಯನವೇ ನವ ಮಾರ್ಗವನ್ನು ಕಂಡುಹಿಡಿಯಲು ಹಾಗೂ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧನವಾಗುವುದು. ಸರ್.ಎಂ.ವಿಶ್ವೇಶ್ವರಯ್ಯನವರ ಆತ್ಮ ಚರಿತ್ರೆ ಪ್ರಕಟಿಸಿ ಸರ್ವರಿಗೂ ನೀಡಿದಾಗ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂದು ಋಗ್ವೇದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಂಘದ ಅಧ್ಯಕ್ಷರಾದ ವತ್ಸಲ ರಾಜಗೋಪಾಲ್, ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಕಲಾ, ಶಂಕರಪುರ ಹಿತರಕ್ಷಣ ಸಮಿತಿಯ ಡಿ ಮುರುಗೇಶ್, ಶ್ರೀನಿವಾಸ್, ಭರತ್ ಜೈನ್, ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಋಗ್ವೇದಿ ಯೂತ್‌ಕ್ಲಬ್‌ನ ಶ್ರಾವ್ಯ , ಜಯಲಕ್ಷ್ಮಿ, ಐಶ್ವರ್ಯ, ಝಾನ್ಸಿ ಮಕ್ಕಳ ಪರಿಷತ್ತಿನ ಸದಸ್ಯರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *