ನಗರದಲ್ಲಿ ಯಶಸ್ವಿಯಾಗಿ ಮುಕ್ತಾಯವಾದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ

ಚಾಮರಾಜನಗರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಯಶಸ್ವಿಯಾಗಿ ಇಂದು ಮುಕ್ತಾಯವಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಆಯೋಜಿಸಲಾಗಿದ್ದ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಗಣ್ಯರು ವಿಜೇತರಿಗೆ ಟ್ರೋಫಿ ವಿತರಿಸಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ ಅವರು ಗಡಿ ಜಿಲ್ಲೆ ಚಾಮರಾಜನಗರದಲ್ಲಿ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ ಆಯೋಜನೆಗೊಂಡು ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ.ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.ವ್ಯಕ್ತಿತ್ವ,ಶಿಸ್ತು ರೂಪಿಸಲು ಸಹಕಾರಿಯಾಗುವ ಕ್ರೀಡಾ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.

ಏಕಾಗ್ರತೆ,ಚತುರತೆ,ಬುದ್ದಿವಂತಿಕೆ ಸಾಮರ್ಥ್ಯದ ಚದರಂಗ ಆಟ ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದೆ.ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕ್ರೀಡೆಗಳಲ್ಲಿ ಪಾಲ್ಗೊಂಡಾಗ ಉತ್ಸಾಹ ಹೆಚ್ಚುತ್ತದೆ.ಶಿಕ್ಷಣದ ಜತೆ ಕ್ರೀಡಗಳತ್ತಲೂ ಒಲವು ತೋರಬೇಕು ಎಂದು ಮರಿತಿಬ್ಬೇಗೌಡ ಅವರು ಸಲಹೆ ಮಾಡಿದರು.

ನಗರಸಭಾ ಸದಸ್ಯರಾದ ಮಹೇಶ್ ಅವರು ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಮೇಲಿನ ಆಕರ್ಷಣೆಯಿಂದ ಹೊರಬಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳಿತು. ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಉತ್ತೇಜನ ನೀಡಬೇಕು ಎಂದು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿ.ಮಂಜುನಾಥ ಪ್ರಸನ್ನ ಅವರು ಮಾತನಾಡಿ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ ಜಿಲ್ಲೆಯಲ್ಲಿ ಯಶಸ್ವಿಯಾಗಲು ಅನೇಕರು ಶ್ರಮಿಸಿದ್ದಾರೆ.ಈ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ನುಡಿದರು.

ಪಂದ್ಯಾವಳಿಯ ಮುಖ್ಯ ತೀರ್ಪಗಾರರಾದ ವರ್ಲ್ಡ್ ಚೆಸ್ ಫೆಡರೇಶನ್ ನ ರವಿಕಿರಣ್, ಇನ್ನಿತರ ಪ್ರಮುಖ ತೀರ್ಪುಗಾರರಾದ ದರ್ಶನ್,ಭರತ್, ಕಿಶೋರ್, ಕಾಂತರಾಜು,ಪ್ರಾಚರ್ಯರ ಸಂಘದ ಅಧ್ಯಕ್ಷರಾದ ಪ್ರಮೋದ್,ಕಾರ್ಯದರ್ಶಿ ಬಸವರಾಜಪ್ಪ,ಸ್ವಾಮಿ,ಸರ್ಕಾರಿ ನೌಕರರ ಸಂಘದ ಸದಸ್ಯರಾದ ಮೂರ್ತಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *