ನೋಡುವುದಲ್ಲ ಕಾಣಬೇಕು ಸೋಮನಾಥಪುರದ ಚೆನ್ನ ಕೇಶವನ ಶಿಲ್ಪ ವೈಕುಂಠವ

ಚಿದ್ರೂಪ ಅಂತಃಕರಣ
ಕನ್ನಡದ ಮೇರು ವಿದ್ವಾಂಸರು, ಸಂಶೋಧಕರು, ಇತಿಹಾಸ ತಜ್ಞರು ಆದ ಡಾ. ಚಿದಾನಂದಮೂರ್ತಿ ಅವರು ಪ್ರಾಕ್ತನ ಕಟ್ಟಡಗಳನ್ನು ”ನೋಡುವುದು ಸುಮ್ಮನೆಯ ಬಗೆಯಾದರೆ ಕಾಣುವುದು ಅದರ ಅಂತರ್ಭಾವ ಅರಿತಂತೆ” ಎಂದಿರುವುದನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ವಕೋಶದ ಪ್ರಸ್ತುತ ಗೌರವ ಸಂಪಾದಕರಾದ ’ಡಾ. ಹಾ.ತಿ ಕೃಷ್ಣೇಗೌಡರು’ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ದಾಖಲಾದ ’ಸೋಮನಾಥಪುರದ ಚೆನ್ನಕೇಶವ ದೇವಾಲಯ’ವನ್ನು ವೀಕ್ಷಿಸಲು ಹೋದ ಸಂದರ್ಭದಲ್ಲಿ ಸ್ಮರಿಸಿದ್ದು ನಿಜಕ್ಕೂ ಪರಂಪರೆಯನ್ನು ಅರಿಯುವ ನನ್ನ ದೃಷ್ಟಿಗೆ ಮಾರ್ಗಸೂಚಿ ದೊರಕಿದಂತಾಯ್ತು.

ಈ ಅರಿವಿನ ಭಾಗ್ಯಕ್ಕೆ ಅನುಕೂಲವಾದದ್ದು ಹೀಗೆ; ಸುಮಾರು 740 ವರ್ಷಗಳ ಇತಿಹಾಸವಿರುವ ಚೆನ್ನ ಕೇಶವನ ದೇವಾಲಯದ ಬಗ್ಗೆ ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣ ಬೆಂಗಳೂರು ವಲಯವು ಶ್ರೀ ಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಸ್ಥಳಪುರಾಣ, ವಾಸ್ತುಶಿಲ್ಪದ ಬಗ್ಗೆ ಏರ್ಪಡಿಸಿದ್ದ ವಿಶ್ವ ಪರಂಪರಾ ಸಪ್ತಾಹದಲ್ಲಿ ದೇವಾಲಯ ವಾಸ್ತು ತಜ್ಞರು, ಸ್ವತಂತ್ರ ಸಂಶೋಧಕರು ಆದ ಡಾ. ಗೌತಮ್ ಅವರು ನೀಡಿದ ಪ್ರವಾಸ ಉಪನ್ಯಾಸ ಕಾರ್ಯಕ್ರಮಕ್ಕೆ ನಾವುಗಳು ಭಾಗಿಯಾಗಲಾಗಿ ನನ್ನ ಬೌದ್ಧಿಕ ಪರಿಧಿ ವಿಸ್ತರಿಸಿತು.

ಸು.ಕ್ರಿ.ಶ 1268ರಲ್ಲಿ ಆಳುತ್ತಿದ್ದ ಹೊಯ್ಸಳ ರಾಜ 3ನೇ ನರಸಿಂಹನಿಂದ ಸೋಮನಾಥ ದಂಡನಾಯಕನು ಹಣವನ್ನು ಪಡೆದ ನಂತರ ಈ ಕೇಶವ ದೇವಾಲಯವನ್ನು ನಿರ್ಮಿಸಿದನು. ಶಿಸ್ಟ್ ಕಲ್ಲಿನ ಈ ದೇವಾಲಯವನ್ನು ಆಯತಾಕಾರದ ಅಂಗಳದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಪ್ರಾಕಾರ ಗೋಡೆಗಳಿಂದ ಸುತ್ತುವರಿದಿದೆ ಮತ್ತು 56 ಸಣ್ಣ ದೇವಾಲಯಗಳನ್ನು ಒಳಗೊಂಡಿದೆ. ವಿಷ್ಣು ದೇವರಿಗೆ ಸಮರ್ಪಿತವಾಗಿರುವ ಈ ತ್ರಿಕೂಟ (ತ್ರಿವಳಿ ಕೋಶ) ದೇವಾಲಯವು ಪೂರ್ವಕ್ಕೆ ಮುಖ ಮಾಡಿದೆ. ದ್ವಾರಪಾಲಕರು ಅಂಕಿತ ಹಾಕಿರುವ ಸರಳ ದ್ವಾರದಿಂದ ಗುರುತಿಸಲಾದ ಹಂತಗಳ ಸರಣಿಯ ಮೂಲಕ ದೇವಾಲಯವನ್ನು ಪ್ರವೇಶಿಸಲಾಗುತ್ತದೆ. ನಂತರ ಮುಖಮಂಟಪ ಅಥವಾ ದ್ವಾರ ಮಂಟಪ, ಸಾಮಾನ್ಯ ನವರಂಗ, ಅಂತರಾಳ ಅಥವಾ ಸುಕನಾಸಿ, ಗರ್ಭಗೃಹಗಳನ್ನು ಕಾಣಬಹುದು. ಪಶ್ಚಿಮ, ಉತ್ತರ ಮತ್ತು ದಕ್ಷಿಣದಲ್ಲಿರುವ ಮೂರು ಗರ್ಭಗೃಹಗಳು ಕ್ರಮವಾಗಿ ಕೇಶವ, ಜನಾರ್ದನ ಮತ್ತು ವೇಣುಗೋಪಾಲರ ಮೂರ್ತಿಗಳನ್ನು ಹೊಂದಿವೆ. ದೇವಾಲಯವನ್ನು ಎತ್ತರದ ನಕ್ಷತ್ರ ವೇದಿಕೆ(ಜಗತಿ)ಯ ಮೇಲೆ ನಿರ್ಮಿಸಲಾಗಿದೆ.

ಡಾ.ಚಿದಾನಂದ ಮೂರ್ತಿ ಅವರ ಮಾತನ್ನು ಗ್ರಹಿಸಿದಂತೆ ದೇವಾಲಯಗಳನ್ನು ನೋಡಿದಾಗ ದೇವಾಲಯದ ಗೋಡೆಗಳ ಮೇಲೆ ಕೆತ್ತಲಾದ ಭವ್ಯವಾದ ಭಿತ್ತಿ ಚಿತ್ರಗಳು. ಸಂಪೂರ್ಣವಾಗಿ ಕಲ್ಲಿನಿಂದಲ್ಲೇ ಜೋಡಿಸಿರುವ ದೇವಾಲಯದ ಸೃಜನಶೀಲ ಕೆಲಸ. ಕೊನೆಗೆ ನಮ್ಮಗಳ ವಯಕ್ತಿಕ ಅಥವಾ ಸಮೂಹ ಭಾವಚಿತ್ರಕ್ಕೊಂದು ಹಿಂದಿನ ಛಾಯಾಚಿತ್ರ ಅಂಕಣವಾಗಿ ದೊರಕಬಹುದಷ್ಟೆ. ಆದರೆ ದೇವಾಲಯಗಳನ್ನು ಕಾಣುವ ಬಗೆಯಾಗಿ ನಿಂತಾಗ ಪರಂಪರೆಯಲ್ಲಿನ ಒಂದು ಸಾಮಾಜಿಕ ಸಂಸ್ಕೃತಿಯ ಜ್ಞಾನ ಮತ್ತು ಅದರ ಮಹತ್ವ ನಿಜಕ್ಕೂ ನಮಗೆ ಸಾರ್ವಕಾಲಿಕ ಅನುಕರಣೀಯ ಎನ್ನುವುದನ್ನು ತಿಳಿಸಿಕೊಡುತ್ತದೆ.
“ದೇವಾಲಯ ಮತ್ತು ಜಗಲಿಕಟ್ಟೆ ಜನಪದ ಸಂಸ್ಕೃತಿಯ ಜೀವಾಳ – ಹಾ.ತಿ.ಕೃ.”; ಹೌದು ದೇವಾಲಯಗಳು ಕೇವಲ ಪೂಜೆ ಪುರಸ್ಕಾರಗಳಿಗೆ ಸೀಮೀತವಾದುದ್ದಲ್ಲ. ಇಂದು ನಾವುಗಳು ಸಾಂವಿಧಾನಿಕ ಆಧುನಿಕ ಸಮಾಜವನ್ನು ಹತ್ತು ಹಲವು ಬಗೆಯಾಗಿ ನಿರ್ಮಾಣ ಮಾಡಿಕೊಂಡಿರುವ ರೀತಿಯಲ್ಲಿ ಅಂದು ದೇವಾಲಯಗಳು ಒಂದು ದೊಡ್ಡ ಸಮಾಜದ ಬಹು ಆಯಾಮವಾಗಿ ಕೇಂದ್ರಸ್ಥಾನದಲ್ಲಿ ನಿಂತು ಕೆಲಸ ನಿರ್ವಹಿಸುತ್ತಿತ್ತು. *ಅವತ್ತಿಗೆ ದೇವಾಲಯದ ಆಡಳಿತವು ಪಕ್ಷಾತೀತವಾಗಿ ಜರಗುತ್ತಿತ್ತು. ಪುರಾಣ ವೇದ ಶಾಸ್ತ್ರ ಅಕ್ಷರಭ್ಯಾಸ ವಿದ್ಯಾದಾನದ ಮಹಾಪಾಠ ಶಾಲೆಯಾಗಿತ್ತು, ಅನ್ನದಾನದ ಧರ್ಮಸ್ಥಳ, ಬಡಬಗ್ಗ ದೀನರಿಗೆ ಅನಾಥಾಲಯ, ದೂರದ ಊರಿನಿಂದ ಬಂದವರಿಗೆ ತಂಗುದಾಣ(ಅತಿಥಿಗೃಹ), ಕಾನೂನು ನ್ಯಾಯ ಇತ್ಯರ್ಥಸ್ಥಳ(ಪಂಚಾಯ್ತಿ ಕಟ್ಟೆ), ವಿವಾಹ – ಮುಂಜಿ ಕಾರ್ಯಕ್ರಮ, ಶಿಲ್ಪ ಕೆತ್ತನೆ, ಸಂಗೀತ ನಾಟಕ ನೃತ್ಯ ಇನ್ನಿತರ ಕಲಾ ಮೇಳಗಳ ಅನಾವರಣ ವೇದಿಕೆ, ಹಬ್ಬಹರಿದಿನಗಳ ಸಾಂಪ್ರದಾಯಿಕ ಆಚರಣೆಗಳ ವೈಭವೋಪೇತ ಸ್ಥಳ, ವ್ಯಾಪಾರ ವಹಿವಾಟುಗಳ ಮಾರುಕಟ್ಟೆ, ನಗದು ನಾಣ್ಯ ಚಿನ್ನ ವಜ್ರ ಇತರ ಸಂಪತ್ತುಗಳ ಠೇವಣಿ ಇರಿಸಿಕೊಳ್ಳುವಿಕೆ ಜತೆಗೆ ಸಾಲ ಸೌಲಭ್ಯ ನೀಡುವ ಹಣದ ಸಂಸ್ಥೆ (ಬ್ಯಾಂಕ್), ಆರೋಗ್ಯ ಶುಶ್ರೂಷೆಯ ದೃಷ್ಟಿಯಲ್ಲಿ ಆಯುರ್ವೇದ ಆಸ್ಪತ್ರೆ, ಕ್ರೀಡೆಗೂ ಮೀಸಲಾದ ಬಯಲು ಪ್ರದೇಶಗಳು ಒಂದು ದೇವಾಲಯದ ಒಟ್ಟಾರೆ ಯೋಜನೆಯಾಗಿ ನಿರ್ಮಾಣವಾಗುತ್ತಿತ್ತು. ಹೀಗೆ ಗತಕಾಲದ ಶಿಷ್ಟಾಚಾರದ ನೈತಿಕ ಸಾರ್ವಜನಿಕ ಹಿತಾಸಕ್ತಿಯ ನಾಗರಿಕತೆಯ ಕುರುಹುಗಳನ್ನಿಡಿದು ನಿಂತಿರುವ ಸೋಮನಾಥ ಪುರದ ಚೆನ್ನಕೇಶವ ದೇವಾಲಯವು ಬೆಲೆ ಕಟ್ಟಲಾಗದ ಆಸ್ತಿ.

ದೇವಾಲಯದ ಒಳಿತಿನ ಸಂಗತಿಯೊಂದು ಉದಾಹರಣೆಗೆ ಹೀಗಿದೆ; ತಪ್ಪಿತಸ್ಥರಿಗೆ ವಿಧಿಸುವ ದಂಡವು ಸಾಮಥ್ರ್ಯಕ್ಕೆ ತಕ್ಕಂತೆ ಅಲ್ಲಿನ ದೀನರಿಗೆ ಅನ್ನದಾನ ಮಾಡುವುದಾಗಿತ್ತು. ಊರಿನ ಲೋಕಪಯೋಗಿ ಕೆಲಸಗಳಿಗೆ ದಂಡದ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಬಳಸುವುದಾಗಿತ್ತು. ಈ ಮೂಲಕ ಕಳ್ಳ, ಕೊಲೆಗಾರ, ಮೋಸಗಾರ ತನ್ನೊಳಗೆ ಪರರ ಹಿತಚಿಂತನೆಯನ್ನು ಮೂಡಿಸಿಕೊಳ್ಳಲಿ ಆ ಮೂಲಕ ಸಾರ್ವಜನಿಕರಿಂದ ಸಿಗುವ ಹಿತಾಶೀರ್ವಾದದಿಂದ ಅಪರಾಧಿಯು ಭವಿಷ್ಯದಲ್ಲಿ ಹೀನ ವ್ಯಕ್ತಿತ್ವದಿಂದ ಸದಾಚಾರದೆಡೆಗೆ ಸಾಗಲಿ ಎನ್ನುವ ನೀತಿ ಅಂದಿನ ದೇವಾಲಯದ ಸಾಂವಿಧಾನಿಕ ವಿಧಿರೂಢಿ ಜ್ಞಾನ.

ಈ ರೀತಿ ಬೆಲೆ ಬಾಳುವ ಎಷ್ಟೋ ದೇವಾಲಯಗಳ ಪರಂಪರೆಯ ವೈಜ್ಞಾನಿಕ ಸಂಸ್ಕೃತಿಯನ್ನು ಅಲ್ಲೆಗಳೆದು ಅವುಗಳನ್ನು ಮೂಲೆಗುಂಪಾಗಿಸಿ ಬರೀ ಕಲ್ಲುಗಳ ಹಾಳು ಗೋಪುರವೆಂದಷ್ಟೇ ತಿಳಿದು ಅಲ್ಲಿನ ಸ್ಥಳೀಯರಿಂದ ಹಿಡಿದು ಪ್ರವಾಸಿಗರವರೆಗೆ ಎಸಗುವ ಅಪಚಾರ ಅಷ್ಟಿಷ್ಟಲ್ಲ. ದೇವಾಲಯದ ಹೊರ ಕಂಬಗಳಿಗೆ ಪಶು ಪ್ರಾಣಿಗಳನ್ನು ಕಟ್ಟಿ ಕೊಟ್ಟಿಗೆ ಮಾಡಿರುವುದು, ಎಲ್ಲಿಂದಲೋ ರಾತ್ರೋರಾತ್ರಿ ಬಂದು ನಿಧಿಯಾಸೆಗೆ ವಿಗ್ರಹಗಳನ್ನು ಭಗ್ನಗೊಳಿಸಿರುವುದು, ಮದ್ಯ ಸೇವನೆ ಜೂಜಾಟ ಲೈಂಗಿಕ ಅನೈತಿಕ ಚಟುವಟಿಕೆಗಳಿಗೆ ಜಾಗವೆಂಬಂತೆ ಬಳಸಿರುವುದು, ಹುಚ್ಚು ಪ್ರೇಮಿಗಳು ದೇವಾಲಯದ ಒಳ ಮತ್ತು ಹೊರ ಗೋಡೆಗಳ ಮೇಲೆಲ್ಲಾ ತಮ್ಮ ಹೆಸರುಗಳನ್ನು ಕೆತ್ತಿ ಎಸಗುತ್ತಿರುವ ಕೃತ್ಯ ಅಕ್ಷಮ್ಯ ಅಪರಾಧ.

ಜತೆಗೆ ಇಂದಿನ ದೇವಾಲಯಗಳು ಕಳ್ಳಕೋರರ ಸಂಪತ್ತಿಗೆ ಉದ್ಯಮವಾಗಿ ನಿರ್ಮಾಣವಾಗುತ್ತಿದೆ. ಧಾರ್ಮಿಕ ನೀತಿಗಳನ್ನು ಮೌಢ್ಯದ ಆಚರಣೆಗಳಲ್ಲಿ ಸಮಾಧಿಮಾಡುತ್ತಿದ್ದಾರೆ. ರಾಜಕೀಯ ದುರ್ಲಾಭವಾಗಿ ದೇವಾಲಯ ಮಠಗಳು ತಲೆ ಎತ್ತಿನಿಂತಿವೆ. ಜಾತಿಗೊಂದು ದೇವರು, ದೇವಾಲಯ ಹುಟ್ಟಿಕೊಂಡು ಸಮಾಜ ಛಿದ್ರವಾಗಿದೆ. ದೇವಾಲಯದ ಹುಂಡಿಗೆ ಸೇರುತ್ತಿರುವ ಕಾಣಿಕೆ ಇಂದು ದುಷ್ಟರ ಮನೋ ವಿಕೃತ ತೆವಲುಗಳಿಗೆ ಬಳಕೆಯಾಗುತ್ತಿದೆ. ಇಂದೇ ನಿಮ್ಮ ದೃಷ್ಟಿ ಬದಲಾಗಲಿ ಬರೀ ನೋಡುವುದಲ್ಲ ಕಾಣುವುದನ್ನೂ ರೂಢಿಸಿಕೊಳ್ಳಿ ಮತ್ತು ಅನುಕರಿಸಿಕೊಳ್ಳಿ.


ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಯುವಸಾಹಿತಿ, ಲೇಖಕ
ಎಚ್.ಡಿ ಕೋಟೆ, ಮೈಸೂರು.

Leave a Reply

Your email address will not be published. Required fields are marked *