ಜಿಲ್ಲಾ ಹಾಗೂ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಇಂದು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪಶು ಸಂಜೀವಿನಿ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಪ್ರತಿ ತಾಲ್ಲೂಕಿಗೆ ಒಂದರಂತೆ ಏಳು ಪಶು ಸಂಜೀವಿನಿ ವಾಹನಗಳು ಹಾಗೂ ಜಿಲ್ಲೆಯ ಪಾಲಿಕ್ಲಿನಿಕ್ ಗೆ ಒಂದು ವಾಹನ ಸೇರಿದಂತೆ ಒಟ್ಟು ಎಂಟು ವಾಹನಗಳಿಗೆ ಚಾಲನೆ ನೀಡಲಾಯಿತು.
ಈ ಯೋಜನೆಯನ್ನು ಸಂಪೂರ್ಣವಾಗಿ ಹೊರಗುತ್ತಿಗೆಯ ಮೇಲೆ ನಿರ್ವಹಣೆ ಮಾಡಲಿದ್ದು, “EDUSPARK” ಎಂಬ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆಯವರು ಚಿಕಿತ್ಸೆಗೆ ಅವಶ್ಯಕವಿರುವ ಪಶುವೈದ್ಯರು, ಪಶು ಸಹಾಯಕರು ಮತ್ತು ವಾಹನ ಚಾಲಕರನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಂಡು ವಾಹನಕ್ಕೆ ಇಂಧನ ಮತ್ತು ಚಿಕಿತ್ಸೆಗೆ ಅವಶ್ಯವಿರುವ ಔಷಧಿಗಳನ್ನು ಹೊರಗುತ್ತಿಗೆ ಸಂಸ್ಥೆಯವರು ನಿರ್ವಹಿಸುತ್ತಾರೆ ಎಂದರು.
ಈ ಘಟಕಗಳನ್ನು ನಿರ್ವಹಿಸಲು ರಾಜ್ಯ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸವಾಗಿದ್ದು, ನಿಯಂತ್ರಣ ಕೊಠಡಿಯ ಟೋಲ್ ಫ್ರೀ ಸಂಖ್ಯೆ 1962 ಈ ಕೊಠಡಿಯು ದಿನದ 24 ಗಂಟೆಯು ಕಾರ್ಯ ನಿರ್ವಹಿಸಲಿದೆ ಎಂದರು.

ರೈತರು ಈ ಸಂಚಾರಿ ಘಟಕದ ಸೌಲಭ್ಯ ಪಡೆಯಲು ಟೋಲ್ ಫ್ರೀ ಸಂಖ್ಯೆ : 1962 ಗೆ ದೂರವಾಣಿಗೆ ಕರೆ ಮಾಡಿದಲ್ಲಿ ನಿಯಂತ್ರಣ ಕೊಠಡಿಯು ನಿರ್ದೇಶನದ ಮೇರೆಗೆ ರೈತರ ಮನೆ ಬಾಗಿಲಿನಲ್ಲಿ ಜಾನುವಾರುಗಳಿಗೆ ಉಚಿತ ಚಿಕಿತ್ಸಾ ಸೇವೆಯನ್ನು ನೀಡಲಾಗುವುದು. ಸಂಚಾರಿ ಘಟಕವು ಬೆಳಗ್ಗೆ 9.00 ರಿಂದ ಸಂಜೆ 5.00 ಗಂಟೆಯವರಗೆ ಕಾರ್ಯನಿರ್ವಹಿಸುತ್ತದೆ ಎಂದರು.
ಸಂಚಾರಿ ವಾಹನ ಘಟಕದಲ್ಲಿ ಲಭ್ಯವಿರುವ ಚಿಕಿತ್ಸೆಗಳ ವಿವರ: ಸಣ್ಣ ಮತ್ತು ದೊಡ್ಡ ಪ್ರಾಣಿಗಳಲ್ಲಿ ಪ್ರಸವದ ತೊಂದರೆಗಳು, ಸತ್ತೆ ಬೀಳದಿರುವಿಕೆ ಮತ್ತು ಕಂದು ಹಾಕುವಿಕೆ, ಜ್ವರ ಮತ್ತು ಕೆಚ್ಚಲಬಾವು, ಅಫಘಾತ ಪ್ರಕರಣಗಳು, ತೀವ್ರ ಹೊಟ್ಟೆ ಉಬ್ಬರ, ಗಂಟಲಿನಲ್ಲಿ ವಸ್ತುಗಳು ಸಿಕ್ಕಿಹಾಕಿಕೊಳ್ಳುವಿಕೆ, ಕರುಳು ತಿರುಗುವಿಕೆ ಮತ್ತು ಅಬೊಮೇಸಲ್ ಸ್ಥಳಾಂತರ, ತೀವ್ರ ರಕ್ತಸ್ರಾವ ಮತ್ತು ಮೇಲೆ ಏಳಲು ಸಾದ್ಯವಾಗದ ಪ್ರಕರಣಗಳು, ಜೇನು ಹುಳ ಇತ್ಯಾದಿ ಕೀಟಗಳಿಂದ ಕಡಿತ, ಮೂಳೆ ಮುರಿತಗಳು, ಡೌನರ್ ಸಿಂಡ್ರಮ್, ಹಾಲು ಜ್ವರ, ಕುರಿ ಮಂದೆಯ ಅಕಾಲಿಕ ಮರಣಗಳು, 1962 ರಾಜ್ಯಮಟ್ಟದ ಸಂಚಾರಿ ಪಶುಚಿಕಿತ್ಸಾ ಘಟಕ ಮತ್ತು ಕಾಲ್ ಸೆಂಟರ್ ತೀರ್ಮಾನದಂತೆ ಇತರ ಪ್ರಕರಣಗಳು.
ಪಶು ಸಖಿಯರ ಪಾತ್ರಗಳು ಮತ್ತು ಜವಾಬ್ದಾರಿಗಳು: ಪಶುಸಖಿಯರು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಜಿಲ್ಲೆಗೆ 231 ಪಶು ಸಖಿಯರು ಆಯ್ಕೆಯಾಗಿರುತ್ತಾರೆ. ಗ್ರಾಮ ಮಟ್ಟದಲ್ಲಿ ಜಾನುವಾರುಗಳ ಜನನ/ ಮರಣ ನೋಂದಣಿ ಹಾಗೂ ಪ್ರಾಥಮಿಕ ಪಶು ಆರೋಗ್ಯ ಸೇವೆಯನ್ನು ಒದಗಿಸವುದು. ಪಶು ಸಖಿಯರು ಜಾನುವಾರು / ಮೇಕೆ ಸಾಕಾಣಿಯಲ್ಲಿ ತೊಡಗಿರುವ ರೈತರಿಗೆ ತಂತ್ರಜ್ಞಾನ. ವರ್ಗಾವಣೆ ಪೂರಕವಾಗಿ ಕಾರ್ಯ ನಿರ್ವಹಿಸುವುದು. ಹೈನುಗಾರರ ಜಾನುವಾರುಗಳ ಗಣತಿಯ ಮಾಹಿತಿಯನ್ನು ನವೀಕರಿಸಲು ಹತ್ತಿರದ ಪಶುವೈದ್ಯ ಸಂಸ್ಥೆಗೆ ನೆರವು ನೀಡುವುದು. ಸುಧಾರಿತ ಮೇವಿನ ಬೆಳೆಗಳ ಮತ್ತು ಜಾನುವಾರು ಆಹಾರ ಪದ್ಧತಿಗಳ ಕುರಿತು ಮಾಹಿತಿಯನ್ನು ನೀಡುವುದು. ಜಾನುವಾರುಗಳಲ್ಲಿ ರೋಗೊದ್ರೇಕ ಕಂಡು ಬಂದಾಗ ಹತ್ತಿರದ ಪಶುವೈದ್ಯ ಸಂಸ್ಥೆಗೆ ವರದಿ ನೀಡುವುದು. ಇಲಾಖಾ ಕಾರ್ಯಕ್ರಮಗಳಾದ ಜಂತುನಾಶಕ ವಿತರಣೆ, ಲಸಿಕಾ ಕಾರ್ಯಕ್ರಮ ಮತ್ತು ಇನ್ನಿತರೆ ಕಾರ್ಯಕ್ರಮಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುವುದು. ಜಾನುವಾರುಗಳ ಕೃತಕ ಗರ್ಭಧಾರಣೆ ಮತ್ತು ತಳಿ ಅಭಿವೃದ್ಧಿಗಾಗಿ ಪೂರಕ ಸೇವೆಯನ್ನು ಒದಗಿಸುವುದು. ಪಶು ಸಖಿಯರು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಆಗಿಂದಾಗೆ ಬೇಟಿ ನೀಡಿ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪಶುವೈದ್ಯರ ನಿರ್ದೇಶದಂತೆ ಕಾರ್ಯನಿರ್ವಹಿಸುವುದು. ದಿನನಿತ್ಯದ ಚಟುವಟಿಕೆಗಳನ್ನು ದಿನಚರಿಯಲ್ಲಿ ದಾಖಲಿಸಿ ಸ್ಥಳೀಯ ಪಶುವೈದ್ಯಕೀಯ ಸಂಸ್ಥೆಗೆ ವರದಿ ಮಾಡುವುದು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾತನಾಡಿ ಮನುಷ್ಯರ ಆರೋಗ್ಯ ಕಾಪಾಡಲು ಸರ್ಕಾರದಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತದೆ. ಅದೇ ರೀತಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಹೈನುಗಾರಿಕೆಯಲ್ಲಿ ಸಾಕುವ ಜಾನುವಾರುಗಳ ಆರೋಗ್ಯ ಕಾಪಾಡಲು ವಿವಿಧ ಯೋಜನೆಯನ್ನು ರೂಪಿಸಲಾಗುತ್ತದೆಎಂದರು.
ರೈತರು ಉಪಕಸುಬುಗಳಲ್ಲಿ ಜಾನುವಾರುಗಳ ಸಾಕಾಣಿಕೆಯಲ್ಲಿ ಹೆಚ್ಚು ಹಣ ಹೂಡಿಕೆ ಮಾಡುತ್ತಾರೆ. ಜಾನುವಾರುಗಳ ಆರೋಗ್ಯ ಕೂಡ ಬಹಳ ಮುಖ್ಯವಾಗಿದೆ. ಜಿಲ್ಲೆಯಲ್ಲಿ 231 ಪಶು ಸಖಿಯರನ್ನು ನೇಮಕ ಮಾಡಲಾಗಿದೆ. ಅವರಿಗೆ ರೂ 3750 ಗೌರವಧನ ನೀಡಲಾಗುವುದು. ಪಶು ಸಖಿಯರನ್ನು ಸ್ಥಳೀಯರಾಗಿ ಆಯ್ಕೆ ಮಾಡಲಾಗಿದ್ದು, ತುರ್ತು ಸಂದರ್ಭದಲ್ಲಿ ರೈತರು ಹಾಗೂ ಪಶು ವೈದ್ಯರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದ್ದಾರೆ. ಸಮನ್ವಯದಿಂದ ಸರ್ಕಾರ ನೀಡುವ ನಿರ್ದೇಶನಗಳನ್ನು ಅನುಸರಿಸಿ ಕೆಲಸ ನಿರ್ವಹಿಸಿ ಎಂದರು.
ಶಾಸಕ ರಾಮೇಶ್ ಬಾಬು ಬಂಡೀಸಿದ್ದೇಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ನಿಯೋಜನೆ ಮಾಡಿರುವ ಪಶು ಸಖಿಗಳಿಗೆ ತರಬೇತಿ ನೀಡಿ, ರೈತರಿಗೆ ಹೈನುಗಾರಿಕೆ ಸಹಕಸುಬಾಗಿದ್ದು,ಪಶು ಸಖಿಯರು ರೈತರ ಕಷ್ಟಗಳಿಗೆ ಸ್ಪಂದಿಸಿ ತುರ್ತು ಸಂದರ್ಭಗಳಲ್ಲಿ ಹಸು/ ಮೇಕೆ/ ಕುರಿಗಳಿಗೆ ನೀಡಬೇಕಿರುವ ಚಿಕಿತ್ಸೆಯ ಬಗ್ಗೆ ಸೂಕ್ತ ಮಾಹಿತಿ ನೀಡಿ ಎಂದರು.
ಜಿಲ್ಲೆಗೆ 8 ಪಶು ಸಂಜೀವಿನಿ ವಾಹನ ನೀಡಲಾಗಿದ್ದು,ಇವು 5 ಗಂಟೆಯ ವರೆಗೆ ಕಾರ್ಯನಿರ್ವಹಿಸಲಿದೆ. ಎರಡು ವಾಹನ ಪಾಂಡವಪುರ ಹಾಗೂ ಮಂಡ್ಯ ಉಪವಿಭಾಗದಲ್ಲಿ 24*7 ಕಾರ್ಯನಿರ್ವಹಿಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಪಶು ಸಂಗೋಪನಾಧಿಕಾರಿ ಡಾ: ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.