ತಮಿಳುನಾಡು ಬಸ್ ತಡೆಯಲು, ಟೈರ್ ಗೆ ಬೆಂಕಿ ಹಚ್ಚಲು ಯತ್ನ – ಹೋರಾಟಗಾರರ ಬಂಧನ, ಬಿಡುಗಡೆ
ಚಾಮರಾಜನಗರ: ರಾಜ್ಯ ಸರ್ಕಾರವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಖಂಡಿಸಿ ಜೆಡಿಎಸ್ ಮುಖಂಡರು, ಕನ್ನಡ ಪರ ಸಂಘಟನೆ ಮುಖಂಡರು ತಮಿಳುನಾಡು ಗಡಿ ಪುಣಜನೂರು ಚೆಕ್ ಪೋಸ್ಟ್ ನಲ್ಲಿ ಪ್ರತಿಭಟನೆ ನಡೆಸಿ, ತಮಿಳುನಾಡು ಬಸ್ ತಡೆಯಲು ಹಾಗೂ ,ಟೈರ್ ಗೆ ಬೆಂಕಿ ಹಂಚಲು ಯತ್ನಿಸಿದವರನ್ನು ಪೋಲಿಸ್ ಬಂಧಿಸಿ, ಬಿಡುಗಡೆ ಮಾಡಿದರು.

ಪುಣಜನೂರು ಚೆಕ್ ಪೋಸ್ಟ್ ನಲ್ಲಿ ಜೆಡಿಎಸ್ ಮುಖಂಡ ಆಲೂರುಮಲ್ಲು ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ರಸ್ತೆಯಲ್ಲಿ ಕುಳಿತು ಕೆಲಕಾಲ ರಸ್ತೆತಡೆ ನಡೆಸಿ, ತಮಿಳುನಾಡು ಸರ್ಕಾರ, ಕೇಂದ್ರ ಸರ್ಕಾರ, ಕರ್ನಾಟಕ, ಕಾವೇರಿ ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ಬಸ್, ಟೈರ್ ಬೆಂಕಿ ಹಂಚಲು ಯತ್ನಿಸಿದ ಜೆಡಿಎಸ್ ಮುಖಂಡರಾದ ಆಲೂರುಮಲ್ಲು, ಜಿ.ಎಂ.ಶಂಕರ್, ಹೊಂಗನೂರು ರಾಜು, ಬಸವನಪುರ ಮಂಜು, ಕನ್ನಡಪರ ಸಂಘಟನೆಗಳ ಮುಖಂಡರಾದ ನಾರಾಯಣ್, ಹರೀಶ್, ಕದಂಬ ಕನ್ನಡ ಸೇನೆಯ ರಾಜ್ಯಧ್ಯಕ್ಷರಾದ ಕದಂಬ ನಾ ಅಂಬರೀಷ್ ಅವರನ್ನು ಪೋಲಿಸರು ಬಂಧಿಸಿ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಗೆ ಜೀಪ್ ನಲ್ಲಿ ಕರೆದೊಯ್ಯುವುದು ಬಿಡುಗಡೆ ಮಾಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಜೆಡಿಎಸ್ ಮುಖಂಡ ಅಲೂರುಮಲ್ಲು ಮಾತನಾಡಿ, ರಾಜ್ಯದಲ್ಲಿ ಮಳೆಯ ಅಭಾವದಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಕ್ಷೀಣಿಸಿದ್ದು, ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡು ಸರ್ಕಾರ 3ನೇ ಬೆಳೆಗೆ ಕಾವೇರಿ ನೀರು ಕೇಳುವುದು ಸರಿಯಲ್ಲ ಎಂದು ದೂರಿದರು.
ಕರ್ನಾಟಕ ಸರ್ಕಾರ ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ತಮಿಳುನಾಡಿಗೆ ನೀರು ಬಿಟ್ಟಿರುವುದು ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ಕೊಳ್ಳದ ಜಲಾಶಯಗಳಲ್ಲಿರುವ ನೀರಿನ ವಸ್ತುಸ್ಥಿತಿಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಕರಣಕ್ಕೆ ತಿಳಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಢಿಯಿಂದ ತಮಿಳುನಾಡಿಗೆ ಕಾವೇರಿ ನೀರುಬಿಟ್ಟು ರಾಜ್ಯ ಜನತೆಗೆ ಅನ್ಯಾಯ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಜನತೆ ತಕ್ಕಪಾಠ ಕಲಿಸಲಾಗುವುದು ಎಂದು ಎಚ್ವರಿಸಿದರು.
ಕಪ್ಪುಬಾವುಟ ಪ್ರದರ್ಶನ: ಕರ್ನಾಟಕ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ನಗರಕ್ಕೆ ಬಂದಾಗ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು, ಕಾವೇರಿ ಕೊಳ್ಳದ ಜಲಾಶಯಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.