ಚಾಮರಾಜನಗರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಆಯೋಜಿಸಲಾಗಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಆಯೋಜನೆಗೆ ಚಾಮರಾಜನಗರ ಜಿಲ್ಲೆಗೆ ಅವಕಾಶ ದೊರೆತಿರುವುದು ಹೆಮ್ಮೆಯ ವಿಚಾರ. ಭಾರತದ ಪುರಾತನ ಕಾಲದಿಂದಲೂ ಚದುರಂಗ ಹೆಸರು ಮಾಡಿದೆ ಎಂದರು.
ಬುದ್ದಿವಂತಿಕೆಯ ಆಟ ಚೆಸ್ನಲ್ಲಿ ಭಾರತದ ವಿಶ್ವನಾಥನ್ ಆನಂದ್, ಪ್ರಜ್ಞಾ ಆನಂದ್ ವಿಶ್ವದಲ್ಲಿ ಗುರುತಿಸುವ ಆಟಗಾರರಾಗಿದ್ದಾರೆ. ನಗರದಲ್ಲಿ ಏರ್ಪಾಡಾಗಿರುವ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಯಶಸ್ವಿಯಾಗಲಿ. ಕ್ರೀಡಾ ಮನೋಭಾವ ಸ್ಪೂರ್ತಿ ಸ್ಪರ್ಧಿಗಳಲ್ಲಿ ಉಜ್ವಲಿಸಲಿ ಎಂದು ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಹಾರೈಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ಬುದ್ದಿವಂತಿಕೆ ಸಾಮಥ್ರ್ಯ ಬಿಂಬಿಸುವ ಚೆಸ್ ಚದುರಂಗ ಸ್ಪರ್ಧೆ ಜಿಲ್ಲೆಯಲ್ಲಿ ಏರ್ಪಾಡಾಗಿರುವುದು ಅಪೂರ್ವ ಅವಕಾಶವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿ ಸ್ಪರ್ಧಿಗಳು ಚಾಮರಾಜನಗರ ಜಿಲ್ಲೆಗೆ ಆಗಮಿಸಿರುವುದು ಸಂತಸ ತಂದಿದೆ. ಸ್ಪರ್ಧಿಗಳು ಇದೇ ಸಂದರ್ಭದಲ್ಲಿ ಚಾಮರಾಜನಗರದ ಹೆಸರಾಂತ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ಉಪನಿರ್ದೇಶಕರಾದ ಸಿ. ಮಂಜುನಾಥ್ ಪ್ರಸನ್ನ ಅವರು ಮಾತನಾಡಿ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಎಲ್ಲರ ಪ್ರೋತ್ಸಾಹ ಸಿಕ್ಕಿದೆ. ಇಂದು ಮಧ್ಯಾಹ್ನ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಹ ಆಗಮಿಸಿ ಸ್ಪರ್ಧಿಗಳಿಗೆ ಹಾರೈಸಿದ್ದಾರೆ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ನಡೆಯಲಿದೆ ಎಂದರು.
ಪ್ರಾಂಶುಪಾಲರಾದ ಲಿಂಗಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಲ್ರ್ಡ್ ಚೆಸ್ ಫೆಡರೇಷನ್ನ ತೀರ್ಪುಗಾರರಾದ ರವಿಕಿರಣ್, ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ಪ್ರಮೋದ್, ಕಾರ್ಯದರ್ಶಿ ಬಸವರಾಜಪ್ಪ, ಖಜಾಂಚಿ ಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರಾದ ಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಂದು ಮಧ್ಯಾಹ್ನ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ ಚೆಸ್ ಪಂದ್ಯಾವಳಿಯ ಸ್ಪರ್ಧಿಗಳಿಗೆ ಶುಭ ಹಾರೈಸಿದರು.