ಚಾಮರಾಜನಗರ: ತಮಿಳುನಾಡಿನ ಊಟಿಯಿಂದ ಮೈಸೂರಿನ ಕಡೆಗೆ ಬರುತ್ತಿದ್ದ ಬಸ್ ನೆನ್ನೆ (ಅಕ್ಟೋಬರ್ 24) ಬಂಡಿಪುರ ಸಮೀಪದಲ್ಲಿ ಅಪಘಾತಕ್ಕೀಡಾದ ಸುದ್ದಿ ತಿಳಿಯುತ್ತಿದಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸ್ಥಳಕ್ಕೆ ಆಗಮಿಸಿ, ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ವೈದ್ಯಕೀಯ ಸೇವೆಗಳನ್ನು ನೀಡಲು ಸೂಚನೆ ನೀಡಿದರು.
ಪಶ್ಚಿಮ ಬಂಗಾಳದ 72 ಜನ ಪ್ರಯಾಣಿಕರು ಊಟಿಯಿಂದ ಮೈಸೂರಿನ ಕಡೆಗೆ ಪ್ರಯಾಣಿಸುತ್ತಿದ್ದು ಈ ಮಧ್ಯೆ ಬಂಡಿಪುರದ ಸಮೀಪದಲ್ಲಿ ಆಯ ತಪ್ಪಿ ಬಸ್ ಪಲ್ಟಿ ಹೊಡೆದ ಕಾರಣ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 72 ಪ್ರಯಾಣಿಕರ ಪೈಕಿ 25 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಳಿದವರನ್ನು ಗುಂಡ್ಲುಪೇಟೆಯ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಉಳಿದುಕೊಳ್ಳಲು ವಸತಿ, ಊಟ ವ್ಯವಸ್ಥೆಯನ್ನು ಕಲ್ಪಿಸಿದರು. ಅಲ್ಲದೆ ಅವರನ್ನು ಸುರಕ್ಷಿತವಾಗಿ ಅವರ ಊರಿಗೆ ಕಳುಹಿಸಲು ಪಶ್ಚಿಮ ಬಂಗಾಳದ ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಲಾಗಿದೆ.