ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ

ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ, ಬೆಂಗಳೂರಿನ ಚಿಲ್ಡ್ರನ್ ಎಜುಕೇಶನ್ ಸೊಸೈಟಿ, ಆಕ್ಸ್‍ಫರ್ಡ್ ಕಾನೂನು ಕಾಲೇಜು ಸಹಯೋಗದಲ್ಲಿ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿವಿಧ ಪೋಡು, ಹಾಡಿಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಕೆರೆದಿಂಬ ಪೋಡು, ಪುರಾಣಿಪೋಡು, ಅರಕಲಗೂಡು ಪೋಡು, ಮುತುಗದಗದ್ದೆ ಪೋಡುಗಳಲ್ಲಿ ವಾಸವಾಗಿರುವ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಸರ್ಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳು ಹಾಗೂ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾನೂನಿನ ಅರಿವನ್ನು ಮೂಡಿಸಲಾಯಿತು. ನವೆಂಬರ್ 7ರಿಂದ 9ರವರೆಗೆ ಅಂದರೆ ಮೂರು ದಿನಗಳ ಕಾಲ ಸತತವಾಗಿ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಯಳಂದೂರಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಶ್ರೀ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ನವೆಂಬರ್ 7 ರಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅÀವರು ದೀಪ ಬೆಳಗಿಸುವುದರ ಮೂಲಕ ಮೂರು ದಿನಗಳ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ ನ್ಯಾಯಾಧೀಶರು ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶಗಳಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇತ್ತೀಚೆಗೆ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹಗಳ ಸಂಬಂಧ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ದುರುದ್ದೇಶದಿಂದ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಕಾನೂನಿನ ಅರಿವು ಇಲ್ಲದೇ ಇರುವುದರಿಂದ ಘಟನೆಗಳು ಸಂಭವಿಸುತ್ತಿವೆ ಎಂದರು.

ಬುಡಕಟ್ಟು ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಬುಡಕಟ್ಟು ಜನಾಂಗದ ಮುಖಂಡರು ಹೆಣ್ಣು ಮಕ್ಕಳಿಗೆ 19 ವರ್ಷದ ನಂತರ ಗಂಡು ಮಕ್ಕಳಿಗೆ 21 ವರ್ಷದ ನಂತರ ಮದುವೆ ಮಾಡಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸರ್ಕಾರದಿಂದ ಉಚಿತವಾಗಿ ನೀಡುವ ಯೋಜನೆ ಹಾಗೂ ಮೂಲಭೂತ ಸವಲತ್ತುಗಳನ್ನು ಪಡೆದುಕೊಂಡು ಬದುಕು ಉತ್ತಮಗೊಳಿಸಿಕೊಳ್ಳಬೇಕು ಎಂದು ನ್ಯಾಯಾಧೀಶರು ಸಲಹೆ ಮಾಡಿದರು.

ಬಿಳಿಗಿರಿ ರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಕೋಆರ್ಡಿನೇಟರ್ ಸುರೇಶ್ ಮಾತನಾಡಿ ಇಲ್ಲಿ ವಾಸ ಮಾಡುವಂತಹ ಆದಿವಾಸಿ ಬುಡಕಟ್ಟು ಜನಾಂಗದವರುಗಳಿಗೆ ಕಾನೂನಿನ ಅರಿವು ಅಗತ್ಯವಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ಕಾನೂನಿನ ಬಗ್ಗೆ ಅರಿವು ಉಂಟು ಮಾಡಲು ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮಗಳು ಇಲ್ಲಿನ ಜನರಿಗೆ ತುಂಬಾ ಅನುಕೂಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಯಳಂದೂರು ತಾಲ್ಲೂಕು ಕಾನೂನು ಸೇವಾ ಸಮಿತಿಯ ಕಾನೂನು ಸ್ವಯಂ ಸೇವಕರು ಕಾನೂನು ಅರಿವು ಜಾಗೃತಿ ಗೀತೆ ಹಾಗೂ ಜಾನಪದ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಆಕ್ಸ್‍ಫರ್ಡ್ ಲಾ ಕಾಲೇಜಿನ ಕೋ-ಆರ್ಡಿನೇಟರ್ ಚೈತ್ರಾ, ಪ್ರಾಂಶುಪಾಲರಾದ ಡಾ. ಪ್ರಜ್ಞಾ ಪಾಟೀಲ್, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *