ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಚಿಕ್ಕರಾಜಶೆಟ್ಟಿ ಅಭಿಪ್ರಾಯ

ಚಾಮರಾಜನಗರ: ಭಗೀರಥ ಮಹರ್ಷಿಗಳು ಛಲ ಹಾಗೂ ದೃಢಸಂಕಲ್ಪದ ಪ್ರತೀಕವಾಗಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಚಿಕ್ಕರಾಜಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಕಚೇರಿಯಲ್ಲಿ ಜಿಲ್ಲಾ ಉಪ್ಪಾರ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಭಗೀರಥ ಜಯಂತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿದ ಅವರು, ಭಗೀರಥ ಮಹರ್ಷಿಗಳು ಕಠಿಣ ತಪಸ್ಸು ಮಾಡುವ ಮೂಲಕ ಧರೆಗೆ ಗಂಗೆಯನ್ನು ತಂದರು. ಶೈಕ್ಷಣಿಕ, ಆರ್ಥಿಕ, ಸಮಾಜಿಕ, ರಾಜಕೀಯವಾಗಿ ಹಿಂದುಳಿದ ಉಪ್ಪಾರ ಸಮಾಜಕ್ಕೆ ಶಿಕ್ಷಣವೇ ಆಸ್ತಿಯಾಗಿರುವುದರಿಂದ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಸೇವೆ ಎಂದ ಮೇಲೆ ವರ್ಗಾವಣೆ, ವಯೋ ನಿವೃತ್ತಿ ಸರ್ವೆ ಸಾಮಾನ್ಯ. ಅದರಂತೆ ನಮ್ಮ ಪೊಲೀಸ್ ಇಲಾಖೆಯಲ್ಲಿ ಕೆ.ಎಂ.ಮಹದೇವಶೆಟ್ಟರು ವೃತ್ತ ನಿರೀಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಅವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದ ಅವರು, ಜಿಲ್ಲಾ ಉಪ್ಪಾರ ಯುವಕರ ಸಂಘದಿಂದ ಹಮ್ಮಿಕೊಳ್ಳಲಾಗುತ್ತಿರುವ ಹಲವಾರು ಸಮಾಜಮುಖಿ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಮಾತನಾಡಿದ ನಿವೃತ್ತ ವೃತ್ತ ನಿರೀಕ್ಷಕ ಕೆ.ಎಂ.ಮಹದೇವಶೆಟ್ಟಿ, ಜಿಲ್ಲಾ ಭಗೀರಥ ಯುವಕರ ಸಂಘ ತಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ತುಂಬಾ ಸಂತಸದ ವಿಷಯ. ಸಮಾಜದ ನೌಕರರು ಸಮುದಾಯದ ಅಭಿವೃದ್ದಿ ಕಡೆಗೂ ಗಮನ ಹರಿಸುವುದು ಅಗತ್ಯವಾಗಿದೆ ಎಂದರು.
ಜಿಲ್ಲಾ ಉಪ್ಪಾರ ಯುವಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘದ ವತಿಯಿಂದ ಶ್ರೀ ಭಗೀರಥ ಮಹರ್ಷಿಗಳ ಜಯಂತಿ ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.
ಐಟಿಐ ಕಾಲೇಜಿನ ಪ್ರಾಂಶುಪಾಲ ಟಿ.ಎಂ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಪ್ರಾಂಶುಪಾಲ ಎಂ.ಸೋಮಣ್ಣ, ಹರದನಹಳ್ಳಿ ಉಪ್ಪಾರ ಜನಾಂಗದ ಗಡಿಮನೆ ಯಜಮಾನ ಜಯಸ್ವಾಮಿ, ಬಾಲ ಕಾರ್ಮಿಕ ಇಲಾಖೆ ಮಹೇಶ್ ಮಾತನಾಡಿದರು.
ಜಿಲ್ಲಾ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು, ಸಂಘಟನಾ ಕಾರ್ಯದರ್ಶಿ ಜಯಸಿದ್ದು, ಪೋಲಿಸ್ ಕಾನ್ಸ್ಸ್ಟೇಬಲ್ ಮಂಜುನಾಥ್, ರಾಜು ಕೆಸ್ತೂರು, ಹೋರಾಟಗಾರ ಸಿದ್ದಶೆಟ್ಟಿ, ಪ್ಲಬಿಂಗ್ ಶಿವಕುಮಾರ್, ಹೂವಿನ ಸೋಮು, ಮಹೇಂದ್ರ, ಚಂದ್ರು, ಮಂಜುನಾಥ್, ಶಂಕರರಾಜು ಸೇರಿದಂತೆ ಮತ್ತಿತರರಿದ್ದರು.
