ಮೈಸೂರು: ಭಾರತಕ್ಕೆ ಸ್ವಾತ್ಯಂತ್ರ್ಯ ದೊರೆತಿದ್ದು ಅನೇಕ ಜನರ ತ್ಯಾಗ-ಬಲಿದಾನಗಳಿಂದ ಎಂದು ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ನಿವೃತ್ತ ಕಾರ್ಯಕ್ರಮ ಸಂಯೋಜನಾಧಿಕಾರಿಗಳು ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಕೆ.ಕಾಳಚನ್ನೇಗೌಡರು ತಿಳಿಸಿದರು.

ನಗರದ ಚಾಮುಂಡಿಬೆಟ್ಟದತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ೭೭ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಅನೇಕ ಯುವಕರು, ಮಹಿಳೆಯರು ಅವರ ಮನೆಗಳನ್ನು ತೊರೆದು ಚಳುವಳಿಗೆ ಧುಮುಕಿದರು. ಬ್ರಿಟಿಷರು ನೀಡಿದ ಹಿಂಸೆ, ನೋವು, ತೊಂದರೆಗಳನ್ನು ಅನುಭವಿಸಿಯೂ ಎದೆಗುಂದದೆ ಹೋರಾಡಿದರು. ಹೋರಾಟ ಭಕ್ತಿಯ ಚಳುವಳಿಯಾಗಿ ರೂಪಗೊಂಡಿತ್ತು. ಜನರೆಲ್ಲ ಒಂದು ಕಡೆ ಸೇರಿ ಹೋರಾಟದ ರೂಪು ರೇಷೆಗಳನ್ನು ರಚಿಸುತ್ತಿದ್ದರು ಎಂದರು.
ಗಾಂಧೀಜಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ತೀರ್ಥಯಾತ್ರೆಯ ಸ್ವರೂಪದಲ್ಲಿ ನಡೆಯಿತು. ನೈಸರ್ಗಿಕವಾಗಿ ದೊರೆಯುವ ಉಪ್ಪಿನ ಮೇಲಿನ ತೆರಿಗೆಯನ್ನು ವಿರೋಧಿಸಲಾಯಿತು. ಕರ ನಿರಾಕರಣೆ, ಅಸಹಕಾರ ಚಳುವಳಿ, ಕ್ವಿಟ್ಇಂಡಿಯಾ ಚಳುವಳಿಗಳಂತಹ ಹೋರಾಟಗಳಿಂದ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಬಹಳ ಹಿಂದೆಯೇ ಸುತ್ತೂರು ಶ್ರೀಮಠದಿಂದ ಹಲವು ಗ್ರಾಮಗಳಲ್ಲಿ ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳನ್ನು ತೆರೆದು ಶಿಕ್ಷಣ ನೀಡಿದ್ದು ಮಹತ್ವದ ಕಾರ್ಯ. ಜಾತಿ, ಮತ, ವರ್ಗಗಳನ್ನು ಪರಿಗಣಿಸದೆ ಸಮಾಜದ ಸಮಸ್ತರಿಗೂ ಸಮಾನ ಅವಕಾಶವನ್ನು ಮಠ ನೀಡಿದೆ. ಇದು ಶ್ಲಾಘನೀಯವಾದ ಕಾರ್ಯ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಡಾ.ಸಿ.ಪಿ.ರಾಮಶೇಷ್ ಅವರು ಮಾತನಾಡಿ, ಸ್ವಾತಂತ್ರ್ಯಾ ನಂತರ ದೇಶ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದೆ. ಅಂದು ಕೇವಲ ನಾಲ್ಕು ವಿಶ್ವವಿದ್ಯಾಲಯಗಳು ಭಾರತದಲ್ಲಿದ್ದವು. ಇಂದು ಸಾವಿರಾರು ವಿಶ್ವವಿದ್ಯಾಲಯಗಳು ಭಾರತದಲ್ಲಿ ಸ್ಥಾಪನೆಯಾಗಿವೆ ಎಂದರು.
ಶಿಕ್ಷಣ, ಆರೋಗ್ಯ, ಆಹಾರಭದ್ರತೆ, ಕೃಷಿ, ನೀರಾವರಿಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ರಕ್ಷಣೆ, ಬಾಹ್ಯಾಕಾಶ, ಐಟಿ-ಬಿಟಿಗಳಲ್ಲೂ ಅಸಾಮಾನ್ಯ ಸಾಧನೆ ಮಾಡಿದ್ದರೂ ಸಹ ಭಾರತವನ್ನು ಜನಸಂಖ್ಯೆ ಹೆಚ್ಚಳ, ಲಂಚಗುಳಿತನದಂತಹ ಅನೇಕ ಸಮಸ್ಯೆಗಳು ಬಾಧಿಸುತ್ತಿವೆ ಎಂದರು.
ಶ್ರೀಜಯರಾಜೇಂದ್ರರು, ಹುಲಿಯೂರು ದುರ್ಗದ ಶ್ರೀಗಳು, ಶ್ರೀ ಎಸ್. ಶಿವಕುಮಾರಸ್ವಾಮಿಯವರು, ಶ್ರೀಮಠದ ಗುರುಕುಲ ಸಾಧಕರು, ಸೇವಾ ಸಿಬ್ಬಂದಿವರ್ಗದವರು, ಆರಕ್ಷಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ರೂಪಗುರುಪ್ರಸಾದ್ ಮತ್ತು ಶ್ರೀಮತಿ ವಿನುತ ಪ್ರಾರ್ಥಿಸಿದರು. ಶ್ರೀ ಶಂಕರದೇವರು ವಂದಿಸಿದರು.ಕುಮಾರಸ್ವಾಮಿ ವಿರಕ್ತಮಠಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.