ಮೈಸೂರು: ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯ ರಕ್ತದಲ್ಲಿ ಬೆರೆತು ಹೋಗಿರುವ ವ್ಯಕ್ತಿತ್ವ ಶ್ರೀ ಕೃಷ್ಣ ಎಂದು ಅಪರ ಜಿಲ್ಲಾಧಿಕಾರಿಗಳಾದ ಪಿ ಶಿವರಾಜುರವರು ತಿಳಿಸಿದರು.
ಇಂದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕೃಷ್ಣ ಜಯಂತಿ ಆಚರಣೆ ಸಮಿತಿಯ ಸಹಯೋಗದಲ್ಲಿ ನಗರದ ಕಿರು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಧರ್ಮ, ಕ್ಷೇತ್ರ ಅಥವಾ ಇತರ ಗಡಿಗಳನ್ನು ದಾಟಿ ಆಕರ್ಷಿಸುವ ವ್ಯಕ್ತಿತ್ವ ಕೃಷ್ಣನದು ಎಂದು ತಿಳಿಸಿದರು.
ಕೃಷ್ಣನ ಆದರ್ಶಗಳಿಂದ ದ್ವಾಪರ ಯುಗದಲ್ಲಿ ನಡೆದ ಘಟನೆಯನ್ನು ಕಲಿಯುಗದಲ್ಲೂ ನೆನೆಯುತ್ತಿದ್ದೇವೆ. ಕೃಷ್ಣ ಕೇವಲ ವ್ಯಕ್ತಿಯಲ್ಲ, ಸಂಕೇತ. ಕೃಷ್ಣನ ಬಾಲ್ಯದ ಘಟನೆಗಳು, ದುಷ್ಟ ಶಕ್ತಿಗಳ ನಿರ್ಮೂಲನೆ, ಗೋವರ್ಧನ ಗಿರಿಯನ್ನು ಎತ್ತಿ ಹಿಡಿದದ್ದು ಕಾಳಿಂಗನ ಮರ್ಧನ ಈ ಎಲ್ಲಾ ಕಥೆಗಳ ಅನುಭೂತಿ ಪ್ರಕೃತಿಗೆ ಸಂಬoಧಪಟ್ಟಿದೆ. ಅಂದಿನ ಕಾಲದಲ್ಲಿಯೇ ತುಂಟತನ ಮಕ್ಕಳ ಹಕ್ಕು ಎಂದು ಸಾರಿದ ವ್ಯಕ್ತಿ ಶ್ರೀ ಕೃಷ್ಣ. ಈ ನಿಟ್ಟಿನಲ್ಲಿ ಕೃಷ್ಣನನ್ನು ಪ್ರಕೃತಿಯನ್ನಾಗಿ ಕಾಣಬಹುದು. ಪ್ರಕೃತಿಯ ಸಂಕೇತವಾಗಿ ಕೃಷ್ಣ ನಮಗೆ ಗೋಚರಿಸುತ್ತಾನೆ. ಜೀವನದಲ್ಲಿ ಕಷ್ಟ ಸುಖ ಎರಡನ್ನು ಕಾಣುತ್ತೇವೆ. ಶ್ರೀ ಕೃಷ್ಣ ಬೋಧಿಸಿದ ಭಗವದ್ಗೀತೆಯ ಸಾರ ಶ್ರೇಷ್ಠತೆಯನ್ನು ಒಳಗೊಂಡಿದೆ. ಭಾರತದ ಸಂಸ್ಕೃತಿ ಪರಂಪರೆಯ ಹಿರಿಮೆಯನ್ನು ಹೆಚ್ಚಿಸುವಲ್ಲಿ ಕೃಷ್ಣನ ವ್ಯಕ್ತಿತ್ವ ಮನೆ ಮನದಲ್ಲಿ ಹಾಸು ಹೊಕ್ಕಾಗಿದೆ. ಕೃಷ್ಣನ ಆದರ್ಶಗಳು ಇಂದಿಗೂ ನಮ್ಮ ನ್ಯಾಯ, ಸಂವಿಧಾನ ಹಾಗೂ ಸಮುದಾಯಗಳಲ್ಲಿ ಅಡಕವಾಗಿವೆ ಎಂದರು.
ಮೈಸೂರು ಮಹಾನಗರ ಪಾಲಿಕೆಯ ಉಪಮಹಾಪೌರರಾದ ಡಾ. ಜಿ ರೂಪ ಅವರು ಮಾತನಾಡಿ ಕೃಷ್ಣ ಎಂದಾಕ್ಷಣ ನಮ್ಮ ಕಣ್ಮುಂದೆ ಬೆಣ್ಣೆ, ಕೊಳಲು ಹಾಗೂ ಗೋಪಿಕಾ ಸ್ತ್ರೀಯರು ಈ ಮೂರು ಚಿತ್ರಣಗಳು ಬರುತ್ತವೆ. ಕೃಷ್ಣನ ಬಾಲ್ಯದಲ್ಲಿ ಆತನಿಗೆ ಅತ್ಯಂತ ಪ್ರಿಯಕರವಾದ ಬೆಣ್ಣೆಯನ್ನು ಕದಿಯುತ್ತಿದ್ದದ್ದು ಹಾಗೂ ಬಾಲ್ಯದ ಲೀಲೆಗಳನ್ನು ಕಾಣಬಹುದು. ಕೃಷ್ಣ ಕೊಳಲನ್ನು 16 ವರ್ಷದವರೆಗೆ ನುಡಿಸಿ ನಂತರ ತನ್ನ ನಿಜ ಸ್ನೇಹಿತೆ ರಾಧೆಗಾಗಿ ತ್ಯಾಗ ಮಾಡಿದನೆಂಬ ಪುರಾಣಗಳಿವೆ. ತನ್ನ 16 ವಯಸ್ಸಿನಿಂದ 21 ವರ್ಷದವರೆಗೆ ಬ್ರಹ್ಮಚರ್ಯವನ್ನು ಪಾಲಿಸಿದ್ದನು. ನಂತರ ಜೀವನದ ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಗ್ನನಾದನು ಎಂದು ತಿಳಿಸಿದರು.
ಕೃಷ್ಣನ ರಾಜಕೀಯದಲ್ಲಿ ಆಧ್ಯಾತ್ಮಿಕತೆಯನ್ನು ಹಾಗೂ ಆಧ್ಯಾತ್ಮಿಕತೆಯಲ್ಲಿ ರಾಜಕೀಯವನ್ನು ಕಾಣಬಹುದು. ಆತ ರಾಜರಿಗೆ ನೀಡುತ್ತಿದ್ದ ಸಲಹೆ, ಸೂಚನೆಗಳು, ಕುರುಕ್ಷೇತ್ರದ ಸಂದರ್ಭದಲ್ಲಿ ಆತನ ಗೀತೋಪದೇಶ, ಯುದ್ಧದ ಸಂದೇಶ ಸರ್ವಕಾಲಕ್ಕೂ ಪ್ರಸ್ತುತವೆನಿಸುತ್ತವೆ. ಇಂದಿನ ಮಕ್ಕಳಿಗೆ ಕೃಷ್ಣನ ತತ್ವಾದರ್ಶಗಳನ್ನು ಬೋಧಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕೃಷ್ಣನ ಬಾಲ್ಯದ ಲೀಲೆಗಳಷ್ಟೇ ಅಲ್ಲದೆ, ಆತನ ಸಂದೇಶಗಳನ್ನು ಕಥೆಗಳ ಮೂಲಕ ಅಥವಾ ವಿಚಾರಗಳ ಮೂಲಕ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಂಸ್ಕೃತ ವಿದ್ವಾಂಸರಾದ ಅನಂತ ಕೃಷ್ಣ ಜೋಯಿಸ್ ರವರು ಮಾತನಾಡಿ, ಕೃಷ್ಣನ ಬಗ್ಗೆ ಮಾತನಾಡುವುದು ಕಷ್ಟ ಏಕೆಂದರೆ ಆತನ ಸಾಧನೆ ಸಾಗರದಷ್ಟಿವೆ. ವಿಷ್ಣುವಿನ ಅವತಾರಗಳಲ್ಲಿ ಪರಿಪೂರ್ಣ ಅವತಾರವೆಂದರೆ ಕೃಷ್ಣ. ವಿಷ್ಣುವಿನ ಪ್ರತಿ ಅವತಾರಕ್ಕೂ ಹಿನ್ನೆಲೆ ಇದೆ. ಭೂದೇವಿಯು ಧರ್ಮ ಚ್ಯುತಿಯಾಗುತ್ತಿದೆ ಎಂದು ನಾರಾಯಣನ ಬಳಿ ಮೊರೆಹೋದಾಗ ಭೂಮಿಯ ಮೇಲಿನ ಧರ್ಮರಕ್ಷಣೆಗಾಗಿ ವಿಷ್ಣು ಕೃಷ್ಣನ ಅವತಾರವೆತ್ತಿದ ಎಂದು ಪುರಾಣ ಹೇಳುತ್ತದೆ. ಶ್ರೇಷ್ಠತೆ ಹಾಗೂ ಸಾಧನೆಗಳ ಮೂಲಕ ಇಂದು ಕೃಷ್ಣ ಜಗದ್ಗುರುವಾಗಿದ್ದಾನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜೆ.ಗೋವಿಂದರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಡಾ. ಕಾ ರಾಮೇಶ್ವರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.