ಚಾಮರಾಜನಗರ: ಮುಂದಿನ ಭವ್ಯ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ
ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ
ಅಧ್ಯಕ್ಷರಾದ ಎಸ್. ಪೂವಿತಾ ಅವರು ತಿಳಿಸಿದರು.
ನಗರದ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿಂದು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ
ಸಬಲೀಕರಣ ಇಲಾಖೆ ವತಿಯಿಂದ ಮತದಾನ ಜಾಗೃತಿಗಾಗಿ ವಿಶೇಷ
ಚೇತನರಿಂದ ನಡೆದ ಜಾಗೃತಿ ಜಾಥಾ ಗೆ ಹಸಿರು ನಿಶಾನೆ ತೋರಿ ಅವರು
ಮಾತನಾಡಿದರು.
ಜಿಲ್ಲೆಯಲ್ಲಿ ವಿಶೇಷಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ
ಮಾಡಬೇಕು. ವಿಶೇಷಚೇತನರಿಗೆ ಅನುಕೂಲವಾಗಲೆಂದು
ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯವನ್ನು
ಕಲ್ಪಿಸಲಾಗಿದೆ. ಮತದಾನ ಮಾಡುವುದು ನಮ್ಮ ಹಕ್ಕು ಇದನ್ನು
ಚಲಾಯಿಸಬೇಕು. ದೇಶದ ಭವಿಷ್ಕಕ್ಕಾಗಿ ಜವಾಬ್ದಾರಿಯುತವಾಗಿ ಎಲ್ಲರು
ಮತದಾನ ಮಾಡಬೇಕು ಎಂದು ಪೂವಿತಾ ಅವರು ತಿಳಿಸಿದರು.
ನಿಷ್ಪಕ್ಷಪಾತ, ಮುಕ್ತ, ನ್ಯಾಯಯುತ ಚುನಾವಣೆಗೆ
ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಪ್ರಜಾಪ್ರಭುತ್ವ
ಬಲಗೊಳ್ಳುವ ಮತದಾನ ಪ್ರಕ್ರಿಯೆಯಲ್ಲಿ ನಿರ್ಭೀತಿಯಿಂದ
ಭಾಗವಹಿಸಬೇಕು. ಆಗ ಮಾತ್ರ ಸದೃಢ ದೇಶ ನಿರ್ಮಾಣ ಮಾಡಲು
ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್.
ಪೂವಿತಾ ಅವರು ನುಡಿದರು.
ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟ ಮತದಾನ ಜಾಗೃತಿ
ಜಾಥಾವು ನಗರದ ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ
ಜಿಲ್ಲಾಡಳಿತ ಭವನದ ಆವರಣದಲ್ಲಿ ಮುಕ್ತಾಯವಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಪೂರ್ಣಿಮಾ, ಜಿಲ್ಲಾ
ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದ, ಇತರರು ಈ ಸಂದರ್ಭದಲ್ಲಿ
ಇದ್ದರು.