ಚಾಮರಾಜನಗರ: ಕರ್ತವ್ಯ ನಿರ್ಲಕ್ಷ್ಯತೆ ಹಾಗೂ ಬೇಜಾವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ (ಮೂಲ ಹನೂರು ತಾಲೂಕು ಹೂಗ್ಯಂ ಗ್ರಾಮ ಪಂಚಾಯಿತಿ) ಪುಷ್ಪಲತಾ ಜೆ.ಜಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಎಸ್. ಪೂವಿತಾ ಅವರು ಆದೇಶಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಗಸ್ಟ್ ೧೫ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾದ ಪುಷ್ಪಲತಾ ಜೆ.ಜಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕದಿರುವ ಕುರಿತು ಆಗಸ್ಟ್ ೧೭ರಂದು ಮಧುವನಹಳ್ಳಿ ಗ್ರಾಮ ಪಂಚಾಯಿತಿಯ ಕಚೇರಿ ಬಳಿ ಗ್ರಾಮದ ಗ್ರಾಮಸ್ಥರು ಹಾಗೂ ಸಂಘಟನೆಗಳು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕದೇ ಅವಮಾನ ಮಾಡಿದ್ದಾರೆಂದು ಕಚೇರಿ ದ್ವಾರದ ಎದುರಲ್ಲೇ ಧರಣಿ ಪ್ರತಿಭಟನೆ ಕೈಗೊಂಡಿರುವ ಮಾಹಿತಿ ತಿಳಿದು ಬೆಳಿಗ್ಗೆ ೧೧.೩೦ ಗಂಟೆಗೆ ಪ್ರತಿಭಟನೆ ಸ್ಥಳಕ್ಕೆ ಕೊಳ್ಳೇಗಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಯೋಜನಾಧಿಕಾರಿಗಳು ಭೇಟಿ ನೀಡಿದ್ದರು.
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಪಂಚಾಯಿತಿ ಅಧಿಕಾರಿಯಾದ ಪುಷ್ಪಲತಾ ಜೆ.ಜಿ. ಅವರನ್ನು ಖುದ್ದು ಸ್ಥಳಕ್ಕೆ ಹಾಜರಾಗಲೂ ದೂರವಾಣಿ ಮುಖೇನ ಸೂಚಿಸಿದ್ದರೂ ಸಹ ಹಾಜರಾಗಿರಲಿಲ್ಲ. ನಂತರ ಬಹು ಸಮಯ ಸ್ಥಳಕ್ಕೆ ಬಾರದ ಕಾರಣ ಪುನಃ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಈ ಎಲ್ಲಾ ಅಂಶಗಳ ಕುರಿತು ಕೊಳ್ಳೇಗಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಅಧಿಕಾರಿಗಳು ಛಾಯಾಚಿತ್ರಗಳ ಜೊತೆ ವರದಿಗಳನ್ನು ಸಲ್ಲಿಸಿ ಸದರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿರವರ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡಿದ್ದರು.
ಪುಷ್ಪಲತಾ ಅವರು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಂಭವವಿದ್ದರೂ ಕರ್ತವ್ಯ ನಿರ್ಲಕ್ಷತೆ ಹಾಗೂ ಬೇಜವಾಬ್ದಾರಿತನ ತೋರಿದ್ದು, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು ೧೯೬೬ರ ನಿಯಮ ೩(೧)(೨) ಮತ್ತು (೩) ಅನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಸದರಿ ನೌಕರರ ವಿರುದ್ದ ಕರ್ನಾಟಕ ನಾಗರಿಕ ಸೇವಾ (ಸಿ.ಸಿ ಮತ್ತು ಎ) ನಿಯಮಗಳು ೧೯೫೭ರ ರೀತ್ಯಾ ಶಿಸ್ತು ಕ್ರಮ ಜರುಗಿಸಿ ಅಮಾನತ್ತಿನಲ್ಲಿಡುವುದು ಸೂಕ್ತವೆಂದು ಭಾವಿಸಿ ಅಮಾನತು ಆದೇಶ ಹೊರಡಿಸಿರುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.