ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಆಗಸ್ಟ್ ೨೩ರಂದು ಏರ್ಪಡಿಸಿದ್ದು, ಈ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಗಸ್ಟ್ ೨೩ ರಂದು ಬೆಳಿಗ್ಗೆ ೯.೩೦ ರಿಂದ ೯.೫೦ ಗಂಟೆಯವರೆಗೆ ಸಲ್ಲುವ ಶುಭ ಲಗ್ನದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ಶ್ರೀ ಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ. ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ-ರವಿಕೆ ಹಾಗೂ ವರನಿಗೆ ಪಂಚೆ, ಶರ್ಟ್, ಟವಲ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ವಧು ವರರ ಕಡೆಯವರು ತಲಾ ೧೦ ಜನಕ್ಕೆ ಮೀರದಂತೆ ಭಾಗವಹಿಸಲು ಅವಕಾಶವಿದ್ದು, ಇವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ.
ವರನಿಗೆ ೨೧ ವರ್ಷ, ವಧುವಿಗೆ ೧೮ ವರ್ಷ ಪೂರ್ಣಗೊಂಡಿರಬೇಕು. ಬಾಲ್ಯ ವಿವಾಹ ಹಾಗೂ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಈ ಹಿಂದೆ ಮದುವೆ ಆಗಿರದ ಬಗ್ಗೆ ಅವರು ವಾಸಿಸುವ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಂದ ರುಜುವಾತು ಪತ್ರ ಪಡೆದು ಸಲ್ಲಿಸಬೇಕು.
ನಿಗದಿತ ನಮೂನೆ ಅರ್ಜಿಯನ್ನು ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಅವರಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ದಾಖಲಾತಿ ಪತ್ರ ಅಥವಾ ಮೂಳೆ ತಜ್ಞರಿಂದ ಪಡೆದ ದೃಢೀಕರಣ ಪತ್ರ, ವಧು ಮತ್ತು ವರನ ಜೋಡಿಯ ೩ ಭಾವಚಿತ್ರ, ವಧು ಮತ್ತು ವರನ ಜಾತಿಯ ಬಗ್ಗೆ ತಹಶೀಲ್ದಾರರಿಂದ ಪಡೆದ ದೃಢೀಕರಣ ಪತ್ರ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರವನ್ನು ಲಗತ್ತಿಸಿ ಆಗಸ್ಟ್ ೧೦ರ ಸಂಜೆ ೫ ಗಂಟೆಯೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ ೯೪೮೦೦೬೫೩೯೩, ೯೧೧೩೨೧೫೩೪೨, ದೂ.ಸಂ ೦೮೨೨೫-೨೭೨೧೨೮ ಸಂಪರ್ಕಿಸುವಂತೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಗೀತಾ ಹುಡೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
