ಕೆರೆಹಳ್ಳಿ ಪಿಎಸಿಸಿ ಬ್ಯಾಂಕ್ನಿಂದ ನೂತನ ಸದಸ್ಯರಿಗೆ ೮೫.೭೬ ಲಕ್ಷ ಸಾಲ ವಿತರಣೆ
ಚಾಮರಾಜನಗರ: ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದ ಸಾಲವನ್ನು ರೈತರು ಪಡೆದು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆರೆಹಳ್ಳಿ ನವೀನ್ ತಿಳಿಸಿದರು.
ತಾಲೂಕಿನ ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಘದ ೮೧ ಮಂದಿ ನೂತನ ಸದಸ್ಯರಿಗೆ ೮೫,೭೬,೦೦೦ ರೂ.ಗಳ ಸಾಲವನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಕೃಷಿ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ಕೃಷಿ ಪದ್ದತಿಯನ್ನು ಅನುಷ್ಠಾನ ಮಾಡಲು ಚಿಂತನೆ ಮಾಡಿದೆ. ಹೀಗಾಗಿ ಸಹಕಾರ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿ ಗುಂಪು ಕೃಷಿಗಳನ್ನು ಮಾಡುವ ಜೊತೆಗೆ ಶೂನ್ಯ ಬಡ್ಡಿದರ ಸಾಲ, ಕೃಷಿ ಸಾಲ, ಮಧ್ಯi ಅವಧಿ ಸಾಲ, ವ್ಯಾಪಾರ ಸಾಲ, ಟ್ರಾಕ್ಟರ್ ಸಾಲ ಸೇರಿದಂತೆ ಕೃಷಿ ಪರಿಕರಗಳನ್ನು ಖರೀದಿಸಿ, ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಸರ್ಕಾರ ಹಾಗೂ ಸಹಕಾರ ಸಂಘಗಳ ಗುರಿಯಾಗಿದೆ ಎಂದರು.
ಈ ನಿಟ್ಟಿನಲ್ಲಿ ಕೆರೆಹಳ್ಳಿ ಪಿಎಸಿಸಿ ಬ್ಯಾಂಕಿನಿಂದ ಇಲ್ಲಿಯವರೆಗೆ ೭ ಕೋಟಿ ೨೬ ಲಕ್ಷದ ೪೬ ಸಾವಿರ ರೂ.ಗಳನ್ನು ಶೂನ್ಯ ಬಡ್ಡಿ ದರ ಸಾಲ, ೭೬ ಲಕ್ಷ ರೂ. ಮಧ್ಯವಧಿ ಸಾಲ, ೫.೭೬ ಲಕ್ಷ ರೂ. ಟ್ಯಾಕ್ಟರ್ ಸಾಲ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವ ಮೂಲಕ ಹರವೆ ಹೋಬಳಿ ವ್ಯಾಪ್ತಿಯಲ್ಲಿ ಕೆರೆಹಳ್ಳಿ ಸಹಕಾರ ಸಂಘ ಮಾದರಿಯಾಗಿದೆ ಎಂದು ನವೀನ್ ತಿಳಿಸಿದರು.
ಸಹಕಾರ ಸಚಿವರಿಂದ ಕಟ್ಟಡ ಉದ್ಘಾಟನೆ : ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಸಹಕಾರ ಸಚಿವರಾಗಿದ್ದ ನಮ್ಮ ಸಂಘವು ನೂತನ ಕಟ್ಟಡ ಹೊಂದಲು ೧೧ ಲಕ್ಷ ರೂ. ಅನುದಾನ ನೀಡಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಈಗ ಕಟ್ಟಡ ಪೂರ್ಣಗೊಂಡಿದ್ದು, ಈಗಿನ ಸಹಕಾರ ಸಚಿವರಾದ ಕೆ.ಎಲ್. ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಶಾಸಕರಾದ ಎಚ್.ಎಂ. ಗಣೇಶ್ಪ್ರಸಾದ್ ಅವರನ್ನು ಅಹ್ವಾನಿಸಿ, ಹಬ್ಬದ ಮಾದರಿಯಲ್ಲಿ ಸುಸಜ್ಜಿತ ಸಹಕಾರ ಭವನವನ್ನು ಉದ್ಗಾಟಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎಂ. ಪುಟ್ಟಸಿದ್ದಯ್ಯ, ನಿರ್ದೇಶಕರಾದ ಮಹೇಶ್ಪಟೇಲ್, ಎಂ.ವಿ. ನಾಗರಾಜು, ಮಹದೇವಸ್ವಾಮಿ, ರಾಜಕುಮಾರ್, ಕೆಂಪರಾಜು, ಲತಾ,ಗುರುಸಿದ್ದ ನಾಯಕ, ಮಲ್ಲಾಜಮ್ಮ, ಬೀರೇಗೌಡ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸಂದೀಪ್, ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಹಾಗೂ ಸದಸ್ಯರು ಇದ್ದರು.