‘ರೈತ ಮತ್ತು ರೈತಭೂಮಿಯನ್ನು ಉಳಿಸಿಕೊಂಡು ನಾವು ಉಳಿಯಬೇಕು ‘

‘ರೈತ ಇಲ್ಲದಿದ್ದರೆ ದೇಶ ಉಪವಾಸದಿಂದ ಮಲಗಬೇಕಾಗುತ್ತದೆ.’

ನಾಣ್ಣುಡಿಯಂತೆ ರೈತನಳಿದರೆ ಮಾನವಕುಲವು ಶಾಶ್ವತವಾಗಿ ಮಲಗಬೇಕಾಗುತ್ತದೆ. ರೈತನಿಲ್ಲದ ನಾಡು; ಜಗತ್ತು ಅನೂಹ್ಯ. ಉಸಿರಾಡಲು ಬೇಕಾದ ಗಾಳಿಯನ್ನು-ವಾಯುದೇವನೆಂದು,  ಜೀವಜಲ ನೀರನ್ನು-ಗಂಗಾಮಾತೆಯೆಂದು,  ಬದುಕಲು ಅಗತ್ಯವಾದ ಆಹಾರವನ್ನು-ಅನ್ನಪೂರ್ಣೇಶ್ವರಿ ಎಂದು ಪೂಜಿಸುವ ನಾವು ಗಾಳಿಮೂಲವಾದ ಮರಗಳನ್ನು, ಜಲಮೂಲ ನದಿ, ಕೆರೆಗಳನ್ನು, ಆಹಾರಮೂಲ ಕೃಷಿಭೂಮಿ, ರೈತರನ್ನು ವಿನಾಶದತ್ತ ದೂಡುವ ಕೆಲಸದಲ್ಲಿ ಅರಿತೂ ಅರಿಯದಲೆ  ಭಾಗಿಯಾಗಿರುವುದು ವಿಶಾದನೀಯ.

‘ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ’ ಎಂಬ ನುಡಿ ಗೌರವವು ಅನ್ನ ಬೆಳೆಯುವ ರೈತನಿಗೆ ಸಲ್ಲಬೇಕೆಂಬುದನ್ನು ಅರಿತರೆ ರೈತನೇ ನಿಜದ ದೇವರೆಂಬುದು ವೇದ್ಯವಾಗುತ್ತದೆ.

ರೈತರನ್ನು’ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂದು ಗುರುತಿಸಲಾಗುತ್ತಿದೆ. ಇಷ್ಟು ಸೀಮಿತಗೊಳಿಸುವಂತಿಲ್ಲ. ರೈತನ ಕೊಡುಗೆಗಳಲ್ಲಿ ಅದೂ ಒಂದು. ರೈತನು ಮನುಕುಲದ ಜೀವಂತಿಕೆಯ ಆಧಾರ. ಇಂಥ ರೈತರಿಗೆ ಗೌರವ ಸಲ್ಲಿಸಲೆಂದು ನಮ್ಮ ದೇಶದ  ಐದನೆಯ ಪ್ರಧಾನ ಮಂತ್ರಿ  ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ  ಡಿಸೆಂಬರ್ ೨೩ ನ್ನು ‘ರಾಷ್ಟ್ರೀಯ ರೈತ ದಿನ ‘ ಎಂದು ಪ್ರತಿ ವರ್ಷ ಆಚರಿಸಲಾಗುತ್ತಿದೆ. ದುರಂತವೆಂದರೆ ಬಹಳಷ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇಂಥದ್ದೊಂದು ಆಚರಣೆಯ ಬಗ್ಗೆ ಅರಿವಿಲ್ಲದಿರುವುದು.  ಇದನ್ನು ವ್ಯವಸ್ಥೆಯ ವೈಫಲ್ಯವೆಂದೇ  ಪರಿಗಣಿಸಬೇಕಾಗುತ್ತದೆ. ರೈತರನ್ನು ಗೌರವಿಸಲೆಂದೋ , ಮಾಜಿ ಪ್ರಧಾನಿಗಳಿಗೆ ರೈತರ ಮೇಲಿದ್ದ ಗೌರವಕ್ಕೊ ಎಂತೋ ರೈತರನ್ನು ಗೌರವಿಸಲು ಒಂದು ದಿನ ಮೀಸಲಾಗಿರವುದು ಸಂತೋಷದ ಸಂಗತಿ ಎಂದು ಮಾತ್ರ ಹೇಳಬೇಕಾಗುತ್ತದೆ.

ಭೂಮಿ ಮತ್ತು ರೈತನಿಗೆ ನೇರ ಬಾಂಧವ್ಯವಿದೆ. ಭೂಮಿಯು ಎರಡು ಉದ್ದೇಶಗಳಿಗೆ ಮಾತ್ರ ಬಳಸಲ್ಪಡಬೇಕು: ಕೃಷಿಭೂಮಿಯಾಗಿ, ವಸತಿಗಾಗಿ. ಇತ್ತೀಚೆಗೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೂ ಆಧಾರವಾಗಿದೆ. ಈ ಕಾಲಕ್ಕೆ ಅಗತ್ಯದ ಬೆಳವಣಿಗೆಯಾದರೂ ಅತಿಯಾದರೆ ಅನಾರೋಗ್ಯಕರ. ಮೂಲದಲ್ಲಿ ಕಾಡಾಗಿದ್ದುದನ್ನು ವ್ಯವಸಾಯ ಭೂಮಿಯಾಗಿ ಮಾಡಿಕೊಂಡ ರೈತನು ಸಂಶೋಧಕನಾಗಿ, ಮಾನವನ ಹೊಟ್ಟೆಯ ಹಸಿವನ್ನು ಹಿಂಗಿಸುವ ದೇವರಾಗಿ ಕಂಡುಬಂದ. ಅನ್ನ ಬೆಳೆಯುವ ಭೂಮಿಯು ಭೂಮ್ತಾಯಿಯಾಗಿ ಪೂಜನೀಯವಾಯಿತು.

‘ಹೊತ್ತಾರೆ ನಾ ಎದ್ದು ಯಾರ್ಯಾರ ನೆನೆಯಾಲಿ

ಎಳ್ಳು ಜೀರಿಗೆ ಬೆಳೆಯೋಳ/ ಭೂಮ್ತಾಯ ಎದ್ದೊಂದು ಗಳಿಗೆ ನೆನೆದೇನ’

 ನಮ್ಮ ಜನಪದರ ಪ್ರಥಮ ಆದ್ಯತೆಯ ದೇವತೆ ಎಂದರೆ ಆಹಾರ ಬೆಳೆಯುವ ಭೂಮಿಯಾಗಿತ್ತು ಎಂಬುದು ಇಲ್ಲಿ ವೇದ್ಯವಾಗುತ್ತದೆ.

‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ’

ತಮ್ಮನ್ನು ಹೆತ್ತ ತಾಯಿ ಮತ್ತು ತಾನು ಜನಿಸಿದ ನೆಲವನ್ನು ಸ್ವರ್ಗ ಸದೃಶವಾಗಿ ನೋಡುವ ಭಾವ ಮೂಡಲು ಆ ಭೂಮಿಯಿಂದ ಸಿಗುವ ನೀರು, ಗಾಳಿ, ಆಹಾರ ಕಾರಣ. ಇವುಗಳ ಸಮೃದ್ಧತೆಯ ಹಿಂದಿನ ರೈತಶ್ರಮವಿರುವುದನ್ನು ನೆನೆದರೆ, ಭೂಮಿಯನ್ನು ತಾಯಿಸಮನಾಗಿ ಭಾವಿಸುವ ನಾವು, ಪ್ರತಿಯೊಬ್ಬ ಪ್ರಾಮಾಣಿಕ ರೈತನನ್ನು ತಂದೆ ಸದೃಶವಾಗಿ ಭಾವಿಸಬೇಕು.ಆದರೆ ಇಂಥ ಮೌಲ್ಯವಿದ್ದೂ ‘ರೈತರನ್ನು ಉಳಿಸಿ’ ಎಂದು ವ್ಯವಸ್ಥೆಯತ್ತ ಕೈಚಾಚಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿರುವುದು, ವ್ಯವಸ್ಥೆಯು ತಂದೊಡ್ಡಿದ ದುರಂತವೆಂದೆ ಭಾವಿಸಬೇಕಾಗುತ್ತದೆ.

ರೈತ ಮತ್ತು ರೈತಭೂಮಿ ಎರಡನ್ನೂ ಇಂದು ತಾವೇ ಆಗಿ ಉಳಿಯಲು ಬಿಡುತ್ತಿಲ್ಲ. ಇದು ಕಾರಣ ಭವಿಷ್ಯದ ಪೀಳಿಗೆಯ ದುರಂತ ಚಿತ್ರಗತಿ ಸೂಕ್ಷ್ಮಗ್ರಾಹಿ ಮನಸ್ಸುಳ್ಳವರ ಅರಿವಿಗೆ ಬರುತ್ತಿದೆ.  ಮಳೆಯ ಕೊರತೆ, ಬೆಳೆಯ ಹಾನಿ ಇವುಗಳ ನಡುವೆ ಹೆಣಗಾಡಿ ತೆಗೆದ ಫಸಲಿಗೆ ತಕ್ಕ ಬೆಲೆ ಸಿಗದ ದಾರುಣತೆ – ಇವೆಲ್ಲವು ರೈತರನ್ನು ಕಂಗಾಲಾಗಿಸುತ್ತಿರುವುದು ನಿತ್ಯಸತ್ಯವಾಗಿ ಸಹಜಸಾಮಾನ್ಯವಾದಂತಾಗಿದೆ. ಇದರಿಂದಾಗಿ ರೈತರು ಕೃಷಿಯಿಂದ ವಿಮುಖರಾಗಿ ವ್ಯಾಪಾರ ಕ್ಷೇತ್ರಕ್ಕೆ ವಾಲುತ್ತಿದ್ದಾರೆ. ಹಲವು ರೈತರು ಇದ್ದ ಜಮೀನನ್ನು ಮಾರಾಟ ಮಾಡಿ ನಗರದಲ್ಲಿ ಸೈಟ್ ಕೊಂಡು ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿ ಬರುವ ಬಾಡಿಗೆ ಹಣದಲ್ಲಿ ನೆಮ್ಮದಿ ಬದುಕನ್ನು ಸಾಗಿಸುತ್ತಾ ಮಾದರಿಯಾಗುತ್ತಿದ್ದಾರೆ. ಸಾಲಬಾಧೆ ತಡೆಯಲಾರದೆ ಹಲವು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ೨೦೨೨-೨೩ ನೆಯ ಸಾಲಿನಲ್ಲಿ ಸುಮಾರು ೯೬೮ ರೈತರು ಆತ್ಮಹತ್ಯೆ ಮಾಡಿಕಂಡಿದ್ದರೆ,೦೧-೦೪-೩೦೨೩ರಿಂದ೦೯-೦೯-೨೦೨೩ ರೈ ನಡುವೆ ೨೫೧ ಜನ ರೈತ ಆತ್ಮಹತ್ಯೆ ನಡೆದಿರುವುದು ವರದಿಯಾಗಿದೆ. ಒಟ್ಟಿನಲ್ಲಿ ರೈತ, ರೈತಭೂಮಿ ಎರಡೂ ನಶಿಸುತ್ತಿವೆ. ಮುಂದೆ ಉಪವಾಸದಿಂದ ದೇಶ ಮಲಗುತ್ತದೆ; ಕೃಷಿಗೆ ವಿಮುಖರಾಗಿರುವ ರೈತರನ್ನೂ ಒಳಗೊಂಡು. ಇನ್ನಾದರೂ ರೈತ, ರೈತಭೂಮಿ ಉಳಿಸಲು ವ್ಯವಸ್ಥೆ ಮುಂದಾಗಲೇಬೇಕಾದ ಅನಿವಾರ್ಯತೆಯನ್ನು ಅರಿತು ಮುನ್ನಡೆಯಬೇಕಿದೆ. ಕೃಷಿಗೆ ಒಳಪಟ್ಟಿರುವ ಭೂಮಿಯನ್ನು ಕೃಷಿಯ ಹೊರತು ಬೇರೆ ಯಾವ ಉದ್ದೇಶಕ್ಕೂ ಬಳಸಲು ಅವಕಾಶವಿಲ್ಲದಂತಾಗಬೇಕು. ಕೃಷಿಕನಲ್ಲದವನು ಕೃಷಿಭೂಮಿಯನ್ನು ಕೊಂಡುಕೊಳ್ಳಲು ಅವಕಾಶವಿರಬಾರದು.

ಸರ್ಕಾರಿ ಅಂಗಸಂಸ್ಥೆಗಳಿಂದಾಗಲೀ ಖಾಸಗಿ ಡೆವಲಪರ್ಸ್ ಗಳಿಂದಾಗಲೀ ರಾಜ್ಯಾದ್ಯಂತ ಒಂದು ಕುಟುಂಬಕ್ಕೆ ಎರಡು ಸೈಟ್ ಪಡೆಯಲು ಮಾತ್ರ ಅವಕಾಶವಿರಬೇಕು. ಹೆಚ್ಚಿನ ನಿವೇಶನಗಳನ್ನು ಕೊಳ್ಳುವವರಿಗೆ ನೋಂದಣಿ ಶುಲ್ಕವನ್ನು ಮಲ್ಟಿಪಲ್ ವಿಧಿಸಬೇಕು. ಕೊಂಡ ನಿವೇಶನಗಳನ್ನು ಮಾರಾಟ ಮಾಡಬೇಕೆಂದರೆ ಮನೆ ನಿರ್ಮಿಸಿಯೇ ಮಾರುವ ಕರಾರನ್ನು  ವಿಧಿಸಬೇಕು.

ಯಾವುದೇ ಸರ್ಕಾರಿ ಕಛೇರಿಗಳಲ್ಲಿ ರೈತರಿಗೆ ಗೌರವ ನೀಡಬೇಕೆಂಬುದು ಕಡ್ಡಾಯವಾಗಬೇಕು.ತನ್ನ ಗೌರವಕ್ಕೆ ಧಕ್ಕೆ ಬಂದಿದೆ ಎಂದು ರೈತ ಕೊಟ್ಟ ಹೇಳಿಕೆಯನ್ನು ಸರ್ಕಾರವೇ ಖುದ್ದಾಗಿ ಗಂಭೀರವಾಗಿ ಪರಿಗಣಿಸುವಂತಾಗಬೇಕು.

ಸರ್ಕಾರವೇ ಕೃಷಿ ಇಲಾಖೆಯ ಕಡೆಯಿಂದ ಪ್ರತೀ ಹಳ್ಳಿಗಳಲ್ಲಿ ಪಾಳು ಬಿದ್ದಿರುವ ದರ್ಖಾಸ್ ಭೂಮಿಯನ್ನು ತನ್ನ ವಶಕ್ಕೆ ಪಡೆದು ನಿರುದ್ಯೋಗಿ ಪದವೀಧರರನ್ನು ರೈತ ಹುದ್ದೆಗೆ ನೇಮಿಸಿಕೊಂಡು ಅವರಿಂದ ಕೃಷಿ ಮಾಡಿಸಬೇಕು.ಅವರನ್ನು ಸರ್ಕಾರಿ ಉದ್ಯೋಗಿಗಳೆಂದು ಪರಿಗಣಿಸಬೇಕು.

ಕೆರೆಗಳನ್ನು ನಿರ್ಮಾಣ ಮಾಡಿ ಕಾಲುವೆ ಅಥವಾ ಏತನೀರಾವರಿ ಮೂಲಕ ನೀರು ತುಂಬಿಸಿ ಒಣಭೂಮಿಳನ್ನು ನೀರಾವರಿ ಸೌಲಭ್ಯಕ್ಕೊಳಪಡಿಸಬೇಕು. ಸಾಧಕ ನಿಷ್ಟಾವಂತ ರೈತರನ್ನು ಸನ್ಮಾನಿಸುಂತಾಗಬೇಕು.

ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡು ರೈತ ಮತ್ತು ರೈತಭೂಮಿಯನ್ನು ಉಳಿಸಿಕೊಂಡು ನಾವು ಉಳಿಯಬೇಕು ಮುಂದಿನ ಪೀಳಿಗೆಯ ನೆಮ್ಮದಿಯ ಬದುಕಿನ ನೆಲೆ ಇದೆ ಎಂಬ ಸತ್ಯವನ್ನು ಒಪ್ಪಿ ಮುನ್ನಡೆದರೆ ಉಳಿದುಕೊಂಡಿರುವುದನ್ನಾದರೂ ಉಳಿಸಿಕೊಂಡು ನಾವು ಉಳಿಯಬಹುದು…..

ಹೇಮಚಂದ್ರ ದಾಳಗೌಡನಹಳ್ಳಿ

Leave a Reply

Your email address will not be published. Required fields are marked *