ವಚನಗಳ ಮೂಲಕ ಸಮಾಜದ ಅಸಮಾನತೆಯನ್ನು ತಿದ್ದಿದವರು ಶ್ರೀ ನುಲಿಯ ಚಂದಯ್ಯನವರು: ಎನ್ ಚಲುವರಾಯಸ್ವಾಮಿ

ಮಂಡ್ಯ: ಬಸವಣ್ಣನ ಸಮಕಾಲೀನರಾದ ಶ್ರೀ ನುಲಿಯ ಚಂದಯ್ಯ ಅವರು ಅನುಭವಮಂಟಪದಲ್ಲಿ 48 ವಚನಗಳನ್ನು ರಚಿಸುವುದರ ಮೂಲಕ ಸಮಾಜದ ಅಸಮಾನತೆಯನ್ನು ತಿದ್ದಿದವರು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಸಮಾಜದ ಏಳಿಗೆಗಾಗಿ ಅಂದೆ ಸಾಕಷ್ಟು ಶ್ರಮಪಟ್ಟಿದ್ದರು ಎಂದರು.

ಕುಳವ ಸಮುದಾಯಕ್ಕೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ಥಾನಮಾನ ಸಿಗಬೇಕಿದೆ‌. ನುಲಿಯ ಚಂದಯ್ಯ ಅವರ ಹೆಸರೇ ಕುಳುವ ಸಮುದಾಯಕ್ಕೆ ಪ್ರೇರಣೆ. ನಿಮ್ಮ ಸಮಾಜದವರ ಕೂಗು ಗಟ್ಟಿಯಾಗಬೇಕು. ನಿಮ್ಮ ಜೊತೆ ಸರ್ಕಾರ ಇದೆ ಎಂದರು.

ಸಂವಿದಾದ ಅಡಿಯಲ್ಲಿ ಸಮಾಜದ ಎಲ್ಲಾ ವರ್ಗದವರಿಗೂ ಮೂಲಭೂತ ಸೌಕರ್ಯಗಳ ಸೌಲಭ್ಯ ಕಲ್ಪಿಸಲಾಗಿದೆ. ನಿಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದರು.

ಶಾಸಕರಾದ ಪಿ.ರವಿಕುಮಾರ್ ಅವರು ಮಾತನಾಡಿ ನುಲಿಯ ಚಂದಯ್ಯ ಅವರು ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸ್ವತಂತ್ರ, ಸಮಾನತೆ  ಸಿಗಬೇಕು ಎಂದು ದುಡಿದವರು ಎಂದರು‌.

ಸಮಾಜವನ್ನು ಹಗ್ಗದಂತೆ ನುಲಿದು ಸಮಾಜದ ಏಕತೆಗಾಗಿ ಶ್ರಮಿಸಿದರವರು ನುಲಿಯ ಚಂದಯ್ಯ ಅವರು ಹಾಗಾಗಿ ಅವರು ನಮಗೆಲ್ಲ ಪ್ರೇರಣೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಅಖಿಲ ಕರ್ನಾಟಕ ಕುಳುವ ಮಹಾ ಸಭಾದ ಗೌರವಾಧ್ಯಕ್ಷರಾದ ಜಿ.ಚಂದ್ರಣ್ಣ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಕುಳುವ ಮಹಾಸಭಾದ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್, ನಾರಾಯಣ ತಿರುಮಲಪುರ, ಭೀಮಪುತ್ರಿ ನಾಗಮ್ಮ, ವೆಂಕಟೇಶ್, ಸಿದ್ದರ್ಥ, ಸಮುದಾಯದ ಹನೂರು ತಾಲ್ಲೂಕಿನ ಗ್ರಾಮ ಪಂಚಾಯತ್ ಸದಸ್ಯರಾದ ಶಿವಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.

Leave a Reply

Your email address will not be published. Required fields are marked *