ವಚನ ಚಳವಳಿಯಿಂದಾಗಿ ಸಮ ಸಮಾಜ ನಿರ್ಮಾಣ : ಶ್ರೀ ಸರ್ಪ ಭೂಸ್ವಾಮೀಜಿ

ಹರವೆಯಲ್ಲಿ ಶರಣ ಸಾಹಿತ್ಯ ಪರಿಷತ್ ನಿಂದ ದತ್ತಿ ಕಾರ್ಯಕ್ರಮ
ಚಾಮರಾಜನಗರ: ಹನ್ನೇರಡನೇ ಶತಮಾನದಲ್ಲಿ ಶಿವ ಶರಣೆಯರು ನಡೆಸಿದ ವಚನ ಚಳವಳಿ ಇಂದು ಸಮಾಜದಲ್ಲಿ ಸ್ತ್ರೀ ಪುರುಷರ ಸಮಾನತೆಗೆ ನಾಂದಿಯಾಗಿದೆ ಎಂದು ಹರವೆ ವಿರಕ್ತ ಮಠಾಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ ತಿಳಿಸಿದರು.

ತಾಲೂಕಿನ ಹರವೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗು ಶ್ರೀ ಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶರಣರಾದ ಅಕ್ಕಮಹದೇವಿ, ಆಯ್ದಕ್ಕಿ ಲಕ್ಕಮ್ಮ ರಂತಹ ವಚನಕಾರರು ಲಿಂಗ ಅಸಮಾನತೆಯ ವಿರುದ್ದ ಹೋರಾಡಿ ಸಮಾನತೆಯನ್ನು ಪ್ರತಿಪಾದಿಸಿದರು. ಅದರ ಫಲವೇ ಇಂದು ಮಹಿಳೆ ಪುರುಷರಷ್ಟೇ ಸರಿ ಸಮಾನವಾಗಿ ಎಲ್ಲ ರಂಗದಲ್ಲಿಯೂ ಛಾಪು ಮೂಡಿಸಿದ್ದಾರೆ ಎಂದು ಬಣ್ಣಿಸಿದರು.

ಹರವೆ ಮೋರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಸವಿತಾ ಮೂಡ್ನಾಕೂಡು ಶರಣ ಸಾಹಿತ್ಯದಲ್ಲಿ ಮಹಿಳೆ ಕುರಿತು ಮಾತನಾಡಿ, ೧೨ನೇ ಶತಮಾನದಲ್ಲಿ ಶಿವ ಶರಣೆಯರು ಆಡು ಭಾಷೆಯಲ್ಲಿ ರಚಿಸಿದ ವಚನಗಳು ಜನರನ್ನು ಬದುಕನ್ನು ಕಟ್ಟಿಕೊಟ್ಟಿತ್ತು. ವೈಚಾರಿಕ ಪ್ರಬುದ್ದತೆಯಿಂದ ಮೆರೆದ ಅವರು ಅಜ್ಞಾನವನ್ನು ಹೋಗಲಾಡಿಸಿ, ಸೈದಾಂತಿಕ ಸಂಸ್ಕೃತಿಯನ್ನು ಪ್ರತಿಪಾದಿಸಿದರು. ಆದ್ದರಿಂದಲೇ ಅವರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದರು.

ದತ್ತಿ ದಾನಿಗಳಾದ ಜಿ.ಪಂ. ಮಾಜಿ ಸದಸ್ಯ ಪಿ. ಮರಿಸ್ವಾಮಿ ಮಾತನಾಡಿ, ಗಳಿಸಿದ ಆದಾಯದಲ್ಲಿ ಅಲ್ಪವಾದರೂ ದತ್ತಿಗಳಿಗೆ ನೀಡಿದರೆ ನಮ್ಮ ಪೂರ್ವಿಕರ ಸ್ಮರಣೆ ಹಾಗೂ ಸಮಾಜದ ಚಿಂತನೆಗೆ ಅವಕಾಶವಾಗುತ್ತದೆ. ಮತ್ತೊಬ್ಬ ದತ್ತಿ ದಾನಿ ವೈ.ಪಿ. ರಾಜೇಂದ್ರ ಮಾತನಾಡಿ, ತಾವು ನೀಡಿರುವ ಅಲ್ಪ ದತ್ತಿ ರೂಪದಲ್ಲಿ ಸಮಾಜದಲ್ಲಿ ಇಂಥಹ ಕಾರ್ಯಕ್ರಮಗಳ ಸದುಪಯೋಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗೈಕ್ಯ ಸುತ್ತೂರು ಸಂಸ್ಥಾನದ ಶ್ರೀ ರಾಜೇಂದ್ರಸ್ವಾಮಿಳವರ ಆಶಯದಂತೆ ಇಂದಿನ ಯುವ ಪೀಳಿಗೆಗೆ ನಮ್ಮ ಶರಣರ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿ, ನಾಯಕತ್ವ ಗುಣ ಬೆಳೆಸಲು ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ೩೦ಕ್ಕು ಹೆಚ್ಚು ವ್ಯಕ್ತಿಗಳಿದ್ದು, ಈಗಿನ ಶ್ರೀಗಳಾದ ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕೆಲ ದತ್ತಿ ಉಪನ್ಯಾಸಗಳು ಅಲ್ಲದೇ, ಸಮ್ಮೇಳನ, ಜಯಂತಿ, ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಮಾಜದ ಗಣ್ಯರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮಕ್ಕು ಮೊದಲು ಕಲಾವಿದ ಉಮ್ಮತ್ತೂರು ಬಸವರಾಜು ಹಾಸ್ಯ ಕಾರ್ಯಕ್ರಮದಲ್ಲಿ ರಂಜಿಸಿದರು. ಶರಣ ಸಾಹಿತ್ಯ ಪರಿಷತ್ ತಾಲುಕು ಅಧ್ಯಕ್ಷ ಮಹೇಶ್ ಪ್ರಭು ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿ ಬಿ.ಎಸ್. ವಿನಯ್ ಪ್ರಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಬೇಡಗುಳಿ ಸುಂದರ್, ಆರ್.ಎಸ್. ಲಿಂಗರಾಜು, ಹರವೆ ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶಾಲೆ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *