ಚಾಮರಾಜನಗರ: ಸವಿತಾ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವುದು ಸೇರಿದಂತೆ 8 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಸವಿತಾ ಸಮಾಜದ ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು.
ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಸಮಾವೇಶಗೊಂಡ ಸಮುದಾಯದ ಮುಖಂಡರು, ಯುವಕರು ಅಲ್ಲಿಂದ ಮಂಗಳವಾದ್ಯ ಕಲಾವಿದರೊಂದಿಗೆ ಶ್ರೀ ಭುವನೇಶ್ವರಿ ವೃತ್ತಕ್ಕೆ ತೆರಳಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಘೋಷಣೆ ಕೂಗಿದರು. ನಂತರ ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಂತರ, ಹೆಚ್ಚುವರಿ ಅಪರ ಗೀತಾ ಹುಡೇದ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ವಿ. ವೆಂಕಟರಾಜು ಪಣ್ಯದಹುಂಡಿ ಮಾತನಾಡಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸವಿತಾ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವ ಮೂಲಕ ಸೂಕ್ತ ಮೀಸಲಾತಿ ನೀಡಬೇಕು. ಸಮುದಾಯದ ಜಾತಿ ನಿಂದನೆ ಪದವನ್ನು ಬಳಸಿದರೆ ಅವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ವಿಧಿಸುವ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸವಿತಾ ಸಮುದಾಯದಲ್ಲದವರು ಹಾಗೂ ಹೊರ ರಾಜ್ಯದವರು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕ್ಷೌರಿಕ ವೃತ್ತಿ ಅಂಗಡಿಯನ್ನು ತೆರೆಯುತ್ತಿದ್ದಾರೆ. ಇದರಿಂದ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿರುವ ಸಮುದಾಯದ ಜನರು ಸಂಕಷ್ಟಕ್ಕೆ ಸಿಲುಕಿz್ದÁರೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ನಾಲ್ಕು ಭಾಗಗಳಲ್ಲಿ ಕ್ಷೌರಿಕ ತರಬೇತಿ ಹಾಗೂ ನಾದಸ್ವರ, ಡೋಲು ತರಬೇತಿ ಶಾಲೆಯನ್ನು ಆರಂಭಿಸುವ ಮೂಲಕ ಸಮುದಾಯದ ಜನರಿಗೆ ಅನುಕೂಲ ಕಲ್ಪಿಸಬೇಕು. ಸವಿತಾ ಸಮುದಾಯದ ಜಾತಿ ಪ್ರಮಾಣ ಪತ್ರದ ಆಧಾರದಡಿಯಲ್ಲಿ ಸಮುದಾಯದ ಜನರಿಗೆ ಉಚಿತ ಆರೋಗ್ಯ ವಿಮೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸವಿತಾ ಮಹರ್ಷಿ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಿಗೆ ಸವಿತಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಬೆಂಗಳೂರಿನ ಪ್ರಮುಖ ರಸ್ತೆಗೆ ಸವಿತಾ ಮಹರ್ಷಿಯವರ ಹೆಸರನ್ನು ನಾಮಕರಣ ಮಾಡುವ ಜೊತೆಗೆ, ಸವಿತಾ ಮಹರ್ಷಿಯ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ನಡೆಸುತ್ತಿರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಷೌರಿಕ ವೃತ್ತಿ ಮಾಡಲು ಸರ್ಕಾರ ಸವಿತಾ ಸಮುದಾಯದ ಕ್ಷೌರಿಕರನ್ನು ನೇಮಕ ಮಾಡಿಕೊಳ್ಳಬೇಕು. ಮುಜುರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಧಾರ್ಮಿಕ ನಿಯಮದಂತೆ ನಾದಸ್ವರ ಮತ್ತು ಡೋಲು ನುಡಿಸಲು ನಿಯಮವಿರುವುದರಿಂದ ಎಲ್ಲಾ ದೇವಸ್ಥಾನದಲ್ಲಿ ಡೋಲು ಮತ್ತು ನಾದಸ್ವರ ನುಡಿಸಲು ಸಮುದಾಯದ ಕಲಾವಿದರನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಬೇಡಿಕೆಗಳನ್ನು ಸರ್ಕಾರ ಜ.15ರೊಳಗೆ ಈಡೇರಿಸದಿರೆ ಸಮುದಾಯದ ಶ್ರೀ ಸವಿತಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಹಂಪಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಮಾಡಿ ನಿರಶನ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ, ಗೌರವಾಧ್ಯಕ್ಷ ಮುದ್ದುಮಾಧು, ತಾಲೂಕು ಅಧ್ಯಕ್ಷ ಬಸವಶೆಟ್ಟಿ, ಕಾಯಾಧ್ಯಕ್ಷ ಸಿರಾಜು, ಪ್ರಧಾನ ಕಾರ್ಯದರ್ಶಿ ರವಿ, ಮುಖಂಡರಾದ ನಂಜೇದೇವರು, ಬಿ. ಚಂದ್ರಶೇಖರ್, ನಿಂಗರಾಜು, ನಂಜುಂಡಸ್ವಾಮಿ, ಮಹದೇವ, ನಾಗ, ವೆಂಕಟೇಶ್, ನಟರಾಜು, ರವಿಕುಮಾರ್, ರಮೇಶ್ ಇತರರಿದ್ದರು.