ಚಾಮರಾಜನಗರ: ನಗರ ಸಂಚಾರ ಕೈಗೊಂಡ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಇಂದು ನಗರದ ವಿವಿಧೆಡೆ ರಸ್ತೆ, ಚರಂಡಿ ನೈರ್ಮಲ್ಯವನ್ನು ಪರಿಶೀಲಿಸಿದರು.
ಮೊದಲಿಗೆ ನಗರದ ರೇಷ್ಮೆಗೂಡಿನಿಂದ ರಾಮಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಕುಲುಮೆ ಮಾರ್ಗದ ರಸ್ತೆ ಅಭಿವೃದ್ದಿಪಡಿಸುವ ಸಂಬಂಧ ಶಾಸಕರು ಪರಿಶೀಲಿಸಿ, ನಂತರ ಸೋಮವಾರಪೇಟೆ 1ನೇ ವಾರ್ಡಿನಿಂದ ಕರಿನಂಜನಪುರದ ಹುಣಸೆಮರದ ವರೆಗೆ ಹಾಗೂ ಗಾಳಿಪುರದವರೆಗೆ ಹೊಸದಾಗಿ ರಸ್ತೆ ಮಾರ್ಗ ಕಲ್ಪಿಸುವ ಸಂಬಂಧ ಇಂದು ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಇದೇ ತಿಂಗಳ 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಗತಿ ಪರಿಶೀಲನೆ ಸಂಬಂಧ ಚಾಮರಾಜನಗರಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ನಗರದ ಈ 4 ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ದಿಪಡಿಸಲು ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಇಂದು ರಸ್ತೆ ಅಭಿವೃದ್ದಿ ಹಾಗೂ ರಸ್ತೆಯ ಇಕ್ಕೆಲೆಗಳಲ್ಲಿ ಸುಸಜ್ಜಿತ ಚರಂಡಿಗಳ ನಿರ್ಮಾಣ ಮಾಡುವ ಸಂಬಂಧ ರಸ್ತೆ ಅಭಿವೃದ್ದಿ ಬಗ್ಗೆ ಪರಿಶೀಲಿಸಿಲಾಗಿದೆ ಎಂದರು.
2013ರಲ್ಲಿ ಕಾಂಗ್ರೆಸ್ ಸಕಾರ್Àರದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯನವರು ಅಂದು ಚಾಮರಾಜನಗರ ಕ್ಷೇತ್ರದ ರಸ್ತೆ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ದಿಪಡಿಸಿದ್ದರು.ಆದರೆ 2018ರ ನಂತರ ಹೆಚ್ಚಿನ ಅನುದಾನ ದೊರಕಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯನವರು ಸಿಎಂ ಆಗಿದ್ದು ಚಾಮರಾಜನಗರ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಅನುದಾನ ನಿರೀಕ್ಷೆ ಇದೆ ಎಂದು ಶಾಸಕರು ತಿಳಿಸಿದರು.
ಇದೇ ಸಂದರ್ಭದಲ್ಲಿ ಚೆನ್ನಿಪುರದಮೋಳೆ ಗ್ರಾಮದ ನಿವಾಸಿಗಳು ಅಂಗನವಾಡಿ ಕೇಂದ್ರ ಶಿಥಿಲಗೊಂಡಿದ್ದು ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಹಾಗೂ ಸಮುದಾಯ ಭವನ,ಸಾರ್ವಜನಿಕ ಶೌಚಾಲಯ ನಿರ್ಮಾಣ,ಬೀದಿ ದೀಪ, ರಸ್ತೆ, ಕುಡಿಯುವ ನೀರು, ಮತ್ತು ಚರಂಡಿಯಲ್ಲಿ ಕಸ-ಕಡ್ಡಿಗಳನ್ನು ತೆರವುಗೊಳಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.ಶಾಸಕರು ಸ್ವಚ್ಛತೆ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಾಮದಾಸ್,ನಗರಸಭಾ ಸದಸ್ಯ ರಾಜಪ್ಪ, ಮನೋಜ್ ಪಟೇಲ್, ಮಾಜಿ ಸದಸ್ಯ ಸೋಮವಾರಪೇಟೆ ಮಹದೇವು, ಕೆಂಪರಾಜು, ಮಹದೇವು, ಎಇಇ ನಟರಾಜು, ಇಂಜಿನಿಯರ್, ರೇಣುಕಾರಾಧ್ಯ ಸೇರಿದಂತೆ ಇತರರು ಇದ್ದರು.