ಜೆಎಸ್ಎಸ್ ಮಹಿಳಾ ಕಾಲೇಜಿನ ಶಿಕ್ಷಕರು ಹಾಗೂ ಪದಾಧಿಕಾರಿಗಳ ಭೇಟಿ
ಚಾಮರಾಜನಗರ: ವಿಧಾನ ಪರಿಷತ್ಗೆ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ ಸಂಬಂಧ ಈಗಾಗಲೇ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಿದ್ದು, ತಪ್ಪದೇ ಶಿಕ್ಷಕ ಬಂಧುಗಳು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದರು.

ನಗರದ ಜೆಎಸ್ಎಸ್ ಮಹಿಳಾ ಕಾಲೇಜಿಗೆ ಭೇಟಿ ನೀಡಿದ ಅವರು ಅಲ್ಲಿನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಶಿಕ್ಷಕರ ಸಂಘದ ವಿವಿಧ ಹಂತಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಮತದಾರ ಪಟ್ಟಿಗೆ ನೋಂದಾಣಿ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಜೊತೆಗೆ ವೈಯಕ್ತಿಕವಾಗಿ ಶಿಕ್ಷಕರನ್ನು ಭೇಟಿ ಮಾಡಿ ಎಲ್ಲರು ಸಹ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ತಪ್ಪದೇ ನೊಂದಾಯಿಸಿಕೊಳ್ಳಿ. ಅಮೂಲ್ಯದ ಹಕ್ಕನ್ನು ಚಲಾಯಿಸಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಹಂತವಾಗಿ ಶಿಕ್ಷಕರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಕೆಲವು ತಿಂಗಳಲ್ಲಿ ಅಧಿಕೃತವಾಗಿ ಚುನಾವಣೆ ಘೋಷಣೆಯಾಗಲಿದೆ. ತಾವೆಲ್ಲರು ಮತದಾರರಾದಾಗ ಮಾತ್ರ ಹಕ್ಕು ಚಲಾಯಿಸಲು ಸಾಧ್ಯವಿದೆ. ಶಾಲಾ ಮುಖ್ಯಸ್ಥರಿಂದ ಅರ್ಜಿಗಳನ್ನು ಪಡೆದು, ಅಧಿಕೃತ ವಿಳಾಸ ಮತ್ತು ಸಂಸ್ಥೆಯ ಹೆಸರು ನಮೂದಿಸಿ, ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಿ ಎಂದರು.
ಕಳೆದ 20 ವರ್ಷಗಳಿಂದ ನಿಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನ ಸಭೆಯ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಾ ಬಂದಿದ್ದೇನೆ. ನಿಮ್ಮೆಲ್ಲರ ಹಕ್ಕೋತ್ತಾಯ ಮತ್ತು ಮನವಿಗಳಿಗೆ ಸ್ಪಂದಿಸಿ, ಈಡೇರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಎನ್ಪಿಎಸ್ ಹೋಗಬೇಕು. ಒಪಿಎಸ್ ಮರು ಜಾರಿಯಾಗಬೇಕೆಂಬ ಎಂಬ ಹೋರಾಟದಲ್ಲಿ ಮೊದಲಿಗನಾಗಿ ನಿರಂತವಾಗಿ ಬೆಂಬಲ ನೀಡುತ್ತಾ ಸರ್ಕಾರದ ಗಮನ ಸೆಳೆಯುತ್ತಾ ಬಂದಿದ್ದು, ನಮ್ಮ ಹೋರಾಟ ಅಂತಿಮ ಹಂತಕ್ಕೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎನ್ಪಿಎಸ್ ರದ್ದು ಮಾಡಲು ಒಪ್ಪಿಗೆ ನೀಡಿದ್ಧಾರೆ. ಐದು ಗ್ಯಾರಂಟಿ ಯೋಜನೆಯಿಂದ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಮುಂದಿನ ವರ್ಷದಲ್ಲಿ ಓಪಿಎಸ್ ಮರು ಜಾರಿಯಾಗಲಿದೆ ಎಂದು ಮರಿತಿಬ್ಬೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಿಪಿಪಿಐ ರಾಮಚಂದ್ರ ರಾಜೇ ಅರಸು, ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯಧರ್ಶಿ ಕಿರಣ್ರಾಜ್, ಕಾರ್ಯದರ್ಶಿ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾದಪ್ಪ, ತಾಲೂಕು ಅಧ್ಯಕ್ಷ ರಾಮಸ್ವಾಮಿ,ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ರಾಜ್ಯ ಪರಿಷತ್ ಸದಸ್ಯ ಮಲ್ಲಶೆಟ್ಟಿ, ಕಾರ್ಯದರ್ಶಿ ಗಜೇಂದ್ರ, ಮಹೇಶ್, ಷಡಕ್ಷರಿ ಮೊದಲಾಧವರು ಇದ್ದರು.